ಭಾರತೀಯ ವಿದ್ಯಾರ್ಥಿಯ ಮೃತದೇಹ ಹಸ್ತಾಂತರಿಸಲು 35 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟ ಕೆನಡಾ ಸರಕಾರ! Canada Indian Student Killed

ಕಾರು ಹರಿಸಿ ಮಾಡಲಾಗಿತ್ತು ಹತ್ಯೆ!

ಉಜ್ಜಯಿನಿ (ಮಧ್ಯಪ್ರದೇಶ) – ಕೆನಡಾದಲ್ಲಿ ಕಾರು ಹರಿದು ಸಾವನ್ನಪ್ಪಿದ ಉಜ್ಜಯಿನಿಯ ವಿದ್ಯಾರ್ಥಿ ಗುರ್ಕೀರತ್ ಸಿಂಗ್ ಮನೋಚಾ ಅವರ ಮೃತದೇಹವನ್ನು ಭಾರತಕ್ಕೆ ತರಲು ಕುಟುಂಬದ ಮುಂದೆ ದೊಡ್ಡ ಆರ್ಥಿಕ ಸಂಕಷ್ಟ ಎದುರಾಗಿದೆ. ಮೃತದೇಹವನ್ನು ಹಸ್ತಾಂತರಿಸಲು ಕೆನಡಾ ಸರಕಾರವು 40 ಸಾವಿರ ಡಾಲರ್ (ಸುಮಾರು 35 ಲಕ್ಷ ರೂಪಾಯಿ) ಪಾವತಿಸುವಂತೆ ತಿಳಿಸುತ್ತಿದೆ ಎಂದು ಕುಟುಂಬದವರು ಹೇಳಿದ್ದಾರೆ. ಅಲ್ಲದೆ, ತನಿಖೆಯ ಉದ್ದೇಶಕ್ಕಾಗಿ ಮೃತದೇಹವನ್ನು 15 ದಿನಗಳ ಕಾಲ ಕೆನಡಾದಲ್ಲೇ ಇರಿಸಲು ಅಲ್ಲಿನ ಸರಕಾರ ಸೂಚಿಸಿದೆ.

ಮೃತದೇಹವನ್ನು ಕೆನಡಾದಿಂದ ಉಜ್ಜಯಿನಿಗೆ ತರಲು ಸುಮಾರು 10 ಲಕ್ಷ ರೂಪಾಯಿ ಹೆಚ್ಚುವರಿ ವೆಚ್ಚವಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಕುಟುಂಬದವರು ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಾಗೂ ಸ್ಥಳೀಯ ಆಡಳಿತದ ಬಳಿ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ಗುರ್ಕೀರತ್ ಸಿಂಗ್ ಮನೋಚಾ ಅವರನ್ನು ಎರಡು ದಿನಗಳ ಹಿಂದೆ ಕೆನಡಾದಲ್ಲಿ ಕಾರು ಹರಿಸಿ ಹತ್ಯೆ ಮಾಡಲಾಗಿತ್ತು. (ಕೆನಡಾದಲ್ಲಿರುವ ಭಾರತೀಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಸರಕಾರವು ಕೆನಡಾ ಸರಕಾರದ ಮೇಲೆ ಒತ್ತಡ ಹೇರುವುದು ಅಪೇಕ್ಷಿತವಾಗಿದೆ! – ಸಂಪಾದಕರು)

ಗುರ್ಕೀರತ್ ಅವರ ತಂದೆ ಗುರ್ಜಿತ್ ಸಿಂಗ್ ಅವರು, ಇಷ್ಟು ದೊಡ್ಡ ಮೊತ್ತವನ್ನು ಹೊಂದಿಸುವುದು ತಮ್ಮಿಂದ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರಲ್ಲಿ ಆರ್ಥಿಕ ಸಹಾಯಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.