ಉಜನಿ ಅಣೆಕಟ್ಟಿನ ಜಲಮಾಲಿನ್ಯ ಪ್ರಕರಣದಲ್ಲಿ ‘ಕಾರ್ಯ ಪ್ರಗತಿ ವರದಿ’ ಸಲ್ಲಿಸಿ! – ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ Ujani Dam Water Pollution Surajya Abhiyan

‘ಸುರಾಜ್ಯ ಅಭಿಯಾನ’ದ ದೂರಿನ ನಂತರ ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಆದೇಶ

ಸೋಲಾಪುರ – ಸೋಲಾಪುರ ಜಿಲ್ಲೆಯ ಜೀವನನಾಡಿಯಾಗಿರುವ ಉಜನಿ ಅಣೆಕಟ್ಟಿನಲ್ಲಿನ ಭೀಕರ ಜಲಮಾಲಿನ್ಯ ಮತ್ತು ಅದರಿಂದ ಉಂಟಾಗಿರುವ ಆರೋಗ್ಯ ತುರ್ತು ಪರಿಸ್ಥಿತಿಯನ್ನು ‘ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ’ವು (‘ಎನ್.ಎಚ್.ಆರ್.ಸಿ.’) ಗಂಭೀರವಾಗಿ ಪರಿಗಣಿಸಿದೆ. ‘ಸುರಾಜ್ಯ ಅಭಿಯಾನ’ವು ಈ ಕುರಿತು ಸಲ್ಲಿಸಿದ ದೂರಿನ ಮೇರೆಗೆ ಆಯೋಗವು ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರು ಮತ್ತು ಸಾರ್ವಜನಿಕ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿ ಮಾಡಿದೆ. ‘ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ಮುಂದಿನ 2 ವಾರಗಳಲ್ಲಿ ‘ಕಾರ್ಯ ಪ್ರಗತಿ ವರದಿ’ (ಎ.ಟಿ.ಆರ್.) ಸಲ್ಲಿಸಿ’ ಎಂದು ಆಯೋಗದ ಸದಸ್ಯರಾದ ಶ್ರೀ. ಪ್ರಿಯಾಂಕ್ ಕಾನೂನಗೋ ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಈ ಕುರಿತು ‘ಸುರಾಜ್ಯ ಅಭಿಯಾನ’ದ ಮಹಾರಾಷ್ಟ್ರ ರಾಜ್ಯ ಸಂಯೋಜಕ ಶ್ರೀ. ಅಭಿಷೇಕ ಮುರುಕಟೆ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಮಾಹಿತಿ ನೀಡಿದ್ದಾರೆ.

ಈ ಪತ್ರಿಕಾ ಪ್ರಕಟಣೆಯಲ್ಲಿ, ಸುರಾಜ್ಯ ಅಭಿಯಾನವು ಆಯೋಗದ ಮುಂದೆ ಮಂಡಿಸಿದ ಪುರಾವೆಗಳ ಪ್ರಕಾರ, ಉಜನಿ ನೀರಿನಲ್ಲಿ ಮ್ಯಾಂಗನೀಸ್ ಮಟ್ಟವು 2.56 ಮಿಲಿ/ಲೀ ಕಂಡುಬಂದಿದೆ, ಇದು ಸುರಕ್ಷಿತ ಮಿತಿಗಿಂತ ಬರೋಬ್ಬರಿ 51 ಪಟ್ಟು ಹೆಚ್ಚಾಗಿದೆ. ಪುಣೆ ಮತ್ತು ಸೋಲಾಪುರ ನಗರಗಳಿಂದ ಪ್ರತಿದಿನ ಸುಮಾರು 4 ಸಾವಿರದ 262 ದಶಲಕ್ಷ ಲೀಟರ್ ಸಂಸ್ಕರಿಸದ ಕೊಳಚೆ ನೀರನ್ನು ನೇರವಾಗಿ ಅಣೆಕಟ್ಟಿಗೆ ಬಿಡಲಾಗುತ್ತಿದೆ ಎಂಬ ಆಘಾತಕಾರಿ ಸತ್ಯವನ್ನು ಸ್ವತಃ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯೇ ಒಪ್ಪಿಕೊಂಡಿದೆ. ‘ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ’ಯ (‘ಬಿ.ಎನ್.ಎಚ್.ಎಸ್.’) ವರದಿಯ ಪ್ರಕಾರ ಈ ನೀರು ಮಾನವ ಬಳಕೆಗೆ ‘ಅತ್ಯಂತ ಅಸುರಕ್ಷಿತ’ವಾಗಿದ್ದು, ಅದರಲ್ಲಿನ ‘ಟಿ.ಡಿ.ಎಸ್.’ (ನೀರಿನಲ್ಲಿ ಕರಗಿರುವ ಒಟ್ಟು ಘನ ಪದಾರ್ಥಗಳ ಪ್ರಮಾಣ) 700 ‘ಪಿ.ಪಿ.ಎಂ.’ ವರೆಗೆ ತಲುಪಿದೆ.

ಈ ಬಗ್ಗೆ ಶ್ರೀ. ಅಭಿಷೇಕ ಮುರುಕಟೆ ಅವರು ಮಾತನಾಡಿ, ಇದು ಕೇವಲ ಪರಿಸರ ಮಾಲಿನ್ಯವಲ್ಲ, ಬದಲಿಗೆ ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿರುವ ‘ಬದುಕುವ ಹಕ್ಕಿನ’ ಉಲ್ಲಂಘನೆಯಾಗಿದೆ. ಮಾಲಿನ್ಯದ ಗಂಭೀರ ಪುರಾವೆಗಳಿದ್ದರೂ ಸಹ ಆಡಳಿತವು ಯಾವುದೇ ಆರೋಗ್ಯ ಎಚ್ಚರಿಕೆಯನ್ನು ನೀಡಿಲ್ಲ ಅಥವಾ ಪೀಡಿತ 28 ಗ್ರಾಮಗಳಿಗೆ ಪರ್ಯಾಯ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಲ್ಲ, ಇದು ಸಾರ್ವಜನಿಕ ಸೇವಕರ ಕ್ಷಮಿಸಲಾಗದ ನಿರ್ಲಕ್ಷ್ಯವಾಗಿದೆ. ನಾಗರಿಕರ ಆರೋಗ್ಯದ ರಕ್ಷಣೆ ಮತ್ತು ಪರಿಸರದ ನ್ಯಾಯಕ್ಕಾಗಿ ಸುರಾಜ್ಯ ಅಭಿಯಾನವು ತನ್ನ ಕಾನೂನು ಹೋರಾಟವನ್ನು ಮುಂದೆಯೂ ಮುಂದುವರಿಸಲಿದೆ ಎಂದು ಹೇಳಿದರು.

ಸುರಾಜ್ಯ ಅಭಿಯಾನವು ಮಾಡಿರುವ ಬೇಡಿಕೆಗಳು

1. ಪೀಡಿತ ನಾಗರಿಕರ ತಕ್ಷಣದ ‘ಬ್ಲಡ್-ಮೆಟಲ್ ಸ್ಕ್ರೀನಿಂಗ್’ (ರಕ್ತದಲ್ಲಿನ ಭಾರ ಲೋಹಗಳ ತಪಾಸಣೆ) ಮಾಡಬೇಕು.

2. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಂಡು ‘ವೈದ್ಯಕೀಯ ಹಾನಿ ಪರಿಹಾರ ನಿಧಿ’ ಸ್ಥಾಪಿಸಬೇಕು. ಪೀಡಿತ ಗ್ರಾಮಗಳಿಗೆ ತಕ್ಷಣವೇ ಶುದ್ಧ ಕುಡಿಯುವ ನೀರಿನ ಪೂರೈಕೆಯನ್ನು ಖಚಿತಪಡಿಸಬೇಕು.