ಕೇರಳದಲ್ಲಿ ಹೊಸ ಸರಕಾರಿ ಶೈಕ್ಷಣಿಕ ಸಂಸ್ಥೆಗಳಿಗೆ ಧರ್ಮದ ಆಧಾರದ ಮೇಲೆ ಹೆಸರಿಡುವುದಿಲ್ಲ! – Kerala To Ban Religion-Based Names

  • ಪಿನರಾಯಿ ವಿಜಯನ್ ಸರಕಾರದ ನಿರ್ಧಾರ!

  • ಜಾತ್ಯತೀತತೆಯನ್ನು ಎತ್ತಿಹಿಡಿಯಲು ಕೈಗೊಂಡ ಹೆಜ್ಜೆ

ತಿರುವನಂತಪುರಂ (ಕೇರಳ) – ರಾಜ್ಯದಲ್ಲಿ ಹೊಸದಾಗಿ ಸ್ಥಾಪನೆಯಾಗುವ ಸರಕಾರಿ ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಇತರ ಶೈಕ್ಷಣಿಕ ಸಂಸ್ಥೆಗಳಿಗೆ ಇನ್ಮುಂದೆ ಧರ್ಮದ ಆಧಾರದ ಮೇಲೆ ಹೆಸರಿಡುವುದಿಲ್ಲ ಎಂದು ಕೇರಳ ಸರಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಬಿಡುಗಡೆ ಮಾಡಲಾದ ಅಧಿಕೃತ ಮನವಿಯಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ.

ಸರಕಾರಿ ಮೂಲಗಳ ಮಾಹಿತಿಯ ಪ್ರಕಾರ, ‘ಸರಕಾರಿ ಶೈಕ್ಷಣಿಕ ಸಂಸ್ಥೆಗಳು ಜಾತ್ಯತೀತವಾಗಿರಬೇಕು’ ಮತ್ತು ‘ಸಂವಿಧಾನದ ಸಮಾನತೆ ಹಾಗೂ ಒಳಗೊಳ್ಳುವಿಕೆಯ ಮೌಲ್ಯಗಳು ಅದರಲ್ಲಿ ಪ್ರತಿಫಲಿಸಬೇಕು’ ಎಂಬುದು ಈ ನಿರ್ಧಾರದ ಹಿಂದಿನ ಉದ್ದೇಶವಾಗಿದೆ. ಈ ನಿರ್ಧಾರವು ಕೇವಲ ಮುಂದೆ ಸ್ಥಾಪನೆಯಾಗುವ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುತ್ತದೆ. ಈಗಾಗಲೇ ಅಸ್ತಿತ್ವದಲ್ಲಿರುವ ಸರಕಾರಿ ಶಾಲೆಗಳು, ಕಾಲೇಜುಗಳು ಅಥವಾ ವಿಶ್ವವಿದ್ಯಾಲಯಗಳ ಹೆಸರುಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ನ್ಯಾಯಮೂರ್ತಿ ಜೆ.ಬಿ. ಕೋಶಿ ಆಯೋಗದ ವರದಿಗೆ ಸಮ್ಮತಿ!

ರಾಜ್ಯ ಸಚಿವ ಸಂಪುಟವು ನ್ಯಾಯಮೂರ್ತಿ ಜೆ.ಬಿ. ಕೋಶಿ ಆಯೋಗದ ವರದಿಗೆ ತಾತ್ವಿಕವಾಗಿ ಸಮ್ಮತಿ ನೀಡಿದ್ದು, ಅದನ್ನು ಅಧಿಕೃತವಾಗಿ ಪ್ರಕಟಿಸಲು ನಿರ್ಧರಿಸಿದೆ. ಕೇರಳಮ್‌ನ ಕ್ರೈಸ್ತ ಅಲ್ಪಸಂಖ್ಯಾತರ ಶಿಕ್ಷಣ, ಆರ್ಥಿಕ ಹಿಂದುಳಿದಿರುವಿಕೆ ಮತ್ತು ಕಲ್ಯಾಣಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಅಧ್ಯಯನ ಮಾಡಲು ಈ ಆಯೋಗವನ್ನು ನೇಮಿಸಲಾಗಿತ್ತು. (ಕೇವಲ ಕ್ರೈಸ್ತರ ಕಲ್ಯಾಣದ ಬಗ್ಗೆ ಯೋಚಿಸುವ ಕೇರಳಮ್‌ನ ಕಮ್ಯುನಿಸ್ಟ್ ಆಡಳಿತಗಾರರು ಇತರ ಸಮುದಾಯಗಳ ಕಲ್ಯಾಣದ ಬಗ್ಗೆ ಎಂದಾದರೂ ಯೋಚಿಸಿದ್ದಾರೆಯೇ? – ಸಂಪಾದಕರು)

ಸಂಪಾದಕೀಯ ನಿಲುವು

ಕ್ರೈಸ್ತರ ಕಾನ್ವೆಂಟ್ ಶಾಲೆಗಳಲ್ಲಿ ಹಿಂದೂ ಮಕ್ಕಳ ಪ್ರತ್ಯಕ್ಷ ಅಥವಾ ವೈಚಾರಿಕ ಮತಾಂತರ ಮಾಡಲಾಗುತ್ತದೆ. ಇಂತಹ ಅನೇಕ ಘಟನೆಗಳು ಎಲ್ಲೆಡೆಯಿಂದ ವರದಿಯಾಗುತ್ತಲೇ ಇವೆ. ಹೀಗಿರುವಾಗ, ಜಾತ್ಯತೀತತೆಯ ಮೇಲೆ ನಿಜವಾದ ಕಾಳಜಿ ಇದ್ದರೆ, ಇಂತಹ ಕಾನ್ವೆಂಟ್ ಶಾಲೆಗಳ ಮೇಲೆ ಕಮ್ಯುನಿಸ್ಟ್ ಸರಕಾರ ಏಕೆ ಕ್ರಮ ಕೈಗೊಳ್ಳುತ್ತಿಲ್ಲ?