‘ಕಾಂತಾರ’ ಚಲನಚಿತ್ರ ದ ಪ್ರಕರಣದಲ್ಲಿ ನಟ ರಣವೀರ್ ಸಿಂಗ್‌ಗೆ ದೇವತೆಗಳ ಅವಮಾನ ಮಾಡಿರುವ ಕುರಿತು ಕರ್ನಾಟಕ ಹೈಕೋರ್ಟ್ ನಿಂದ ತಪರಾಕಿ – Karnataka High Court

ಯಾವುದೇ ಪ್ರಸಿದ್ಧ ನಟ ಕಾನೂನಿಗಿಂತ ಮಿಗಿಲಲ್ಲ!

ಬೆಂಗಳೂರು – “ಯಾವುದೇ ವ್ಯಕ್ತಿಗೆ ತನ್ನ ಪ್ರತಿಭೆಯ ನೆಪದಲ್ಲಿ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹಕ್ಕಿಲ್ಲ. ‘ಸೂಪರ್‌ಸ್ಟಾರ್’ಗಳು ಕಾನೂನಿಗಿಂತ ಮೇಲಲ್ಲ,” ಎಂದು ಕರ್ನಾಟಕ ಹೈಕೋರ್ಟ್ ನಟ ರಣವೀರ್ ಸಿಂಗ್ ಅವರಿಗೆ ಕಠಿಣ ಶಬ್ದಗಳಲ್ಲಿ ಎಚ್ಚರಿಕೆ ನೀಡಿದೆ. ಕಳೆದ ವರ್ಷ ಗೋವಾದಲ್ಲಿ ನಡೆದ ‘ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ’ (IFFI) ಸಮಾರಂಭದಲ್ಲಿ ‘ಕಾಂತಾರ’ ಚಿತ್ರದ ಕುರಿತು ಮಾತನಾಡುವಾಗ ದೈವ ನಿಂದನೆ ಮಾಡಿದ ಆರೋಪದ ಮೇಲೆ ನ್ಯಾಯಾಲಯವು ಈ ಪ್ರತಿಕ್ರಿಯೆ ನೀಡಿದೆ.
ಸದ್ಯ ರಣವೀರ್ ಸಿಂಗ್ ವಿರುದ್ಧ ಯಾವುದೇ ಕಠಿಣ ಕ್ರಮ ಅಥವಾ ದಂಡನಾತ್ಮಕ ಕ್ರಮ ಕೈಗೊಳ್ಳದಂತೆ ರಾಜ್ಯ ಸರಕಾರಕ್ಕೆ ಸೂಚಿಸಲಾಗಿದೆ. ಮುಂದಿನ ವಿಚಾರಣೆ ಮಾರ್ಚ್ 2 ರಂದು ನಡೆಯಲಿದ್ದು, ಅಲ್ಲಿಯವರೆಗೆ ತನಿಖೆಗೆ ಪೂರ್ಣ ಸಹಕಾರ ನೀಡುವಂತೆ ನಟನಿಗೆ ಆದೇಶಿಸಲಾಗಿದೆ.

ನಟನಾಗಿ ನಿಮ್ಮ ಜವಾಬ್ದಾರಿ ದೊಡ್ಡದಿದೆ !

ರಣವೀರ್ ಸಿಂಗ್ ಅವರು ಯಾವ ನಟನ (ರಿಷಬ್ ಶೆಟ್ಟಿ) ನಟನೆಯನ್ನು ಅಣಕಿಸಿದರೋ, ಅವರು ಆ ಸಮಯದಲ್ಲಿ ‘ದೈವ’ದ ಭೂಮಿಕೆಯಲ್ಲಿದ್ದರು ಎಂಬುದನ್ನು ನ್ಯಾಯಾಲಯ ಗಮನಿಸಿದೆ. ಇಂತಹ ಸಂದರ್ಭದಲ್ಲಿ ಮಾಡುವ ಕಾಮೆಂಟ್‌ಗಳು ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುತ್ತವೆ. “ನೀವು ರಣವೀರ್ ಸಿಂಗ್ ಆಗಿರಲಿ ಅಥವಾ ಬೇರೆ ಯಾರೇ ಆಗಿರಲಿ, ಇಂತಹ ಉದ್ಧಟತನದ ಭಾಷೆ ಬಳಸುವಂತಿಲ್ಲ. ನೀವು ಲಕ್ಷಾಂತರ ಜನರ ಮೇಲೆ ಪ್ರಭಾವ ಬೀರುವುದರಿಂದ ನಿಮ್ಮ ಜವಾಬ್ದಾರಿ ಹೆಚ್ಚಿದೆ,” ಎಂದು ನ್ಯಾಯಾಧೀಶರು ಹೇಳಿದರು.

ಕ್ಷಮೆಯಾಚಿಸಿದರೆ ಹೇಳಿಕೆ ಹಿಂಪಡೆಯಲು ಸಾಧ್ಯವಿಲ್ಲ !

ಈ ಪ್ರಕರಣದಲ್ಲಿ ರಣವೀರ್ ಸಿಂಗ್ ಕ್ಷಮೆಯಾಚಿಸಿದ್ದರು. ಆದರೆ, “ನಂತರ ಕೇಳುವ ಕ್ಷಮೆಯು ಆಡಿದ ಮಾತನ್ನು ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ. ಇಂಟರ್ನೆಟ್ ಯಾವುದನ್ನೂ ಮರೆಯುವುದಿಲ್ಲ, ನೀವು ಹೇಳಿದ್ದು ಶಾಶ್ವತವಾಗಿ ದಾಖಲಾಗಿರುತ್ತದೆ. ಕಲಾವಿದರು ಸಂಯಮದಿಂದ ಇರಬೇಕು. ಜನಪ್ರಿಯತೆ ಅಥವಾ ಪ್ರತಿಭೆ ಯಾರನ್ನೂ ಕಾನೂನಿಗಿಂತ ಮೇಲೆ ನಿಲ್ಲಿಸುವುದಿಲ್ಲ,” ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ತಪ್ಪೊಪ್ಪಿಗೆಯೇ ನಟನ ನಿರ್ಲಕ್ಷ್ಯಕ್ಕೆ ಸಾಕ್ಷಿ!

ರಣವೀರ್ ಸಿಂಗ್ ಪರ ವಕೀಲರು ವಾದ ಮಂಡಿಸಿ, “ಸಂಬಂಧಿತ ಹೇಳಿಕೆಯು ಅಸೂಕ್ಷ್ಮವಾಗಿತ್ತು ಮತ್ತು ಅದು ದೊಡ್ಡ ತಪ್ಪಾಗಿತ್ತು ಎಂದು ನಟ ಒಪ್ಪಿಕೊಳ್ಳುತ್ತಾರೆ,” ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಈ ಒಪ್ಪಿಗೆಯಿಂದಲೇ ನಟ ಎಷ್ಟು ನಿರ್ಲಕ್ಷ್ಯದಿಂದ ವರ್ತಿಸಿದ್ದಾರೆ ಎಂಬುದು ಸಾಬೀತಾಗುತ್ತದೆ ಎಂದು ಅಭಿಪ್ರಾಯಪಟ್ಟಿತು.

ಏನಿದು ಪ್ರಕರಣ ?

ನವೆಂಬರ್ 2025 ರಲ್ಲಿ ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ರಣವೀರ್ ಸಿಂಗ್ ವೇದಿಕೆಯ ಮೇಲೆ ರಿಷಬ್ ಶೆಟ್ಟಿ ಅವರ ‘ಕಾಂತಾರ ಚಾಪ್ಟರ್-1’ ಚಿತ್ರದ ದೈವಕ್ಕೆ ಸಂಬಂಧಿಸಿದ ದೃಶ್ಯವೊಂದನ್ನು ಅಣಕಿಸಿದ್ದರು. ರಿಷಬ್ ಶೆಟ್ಟಿಯವರ ನಟನೆಯನ್ನು ಹೊಗಳುವ ಭರದಲ್ಲಿ, ದೈವವು ಮೈಮೇಲೆ ಬರುವ ದೃಶ್ಯದ ಬಗ್ಗೆ ಪ್ರಸ್ತಾಪಿಸುವಾಗ, ರಣವೀರ್ ಸಿಂಗ್ ಅವರು ದೈವವನ್ನು ‘ಹೆಣ್ಣು ದೆವ್ವ’ (Female Ghost) ಎಂಬ ಅರ್ಥದಲ್ಲಿ ಸಂಬೋಧಿಸಿ ವಿಚಿತ್ರವಾಗಿ ಹಾವಭಾವ ಮಾಡಿದ್ದರು. ಇದು ತುಳುನಾಡು ಮತ್ತು ಕರ್ನಾಟಕದ ದೈವಾರಾಧನೆ ಸಂಪ್ರದಾಯಕ್ಕೆ ಮಾಡಿದ ಅಪಮಾನ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಸಂಪಾದಕೀಯ ನಿಲುವು

“ಹಿಂದೂ ದೇವತೆಗಳ ಅವಮಾನ ಹಿಂದೂಗಳಿಂದಲೇ ಹೆಚ್ಚಾಗಿ ನಡೆಯುತ್ತಿರುವುದರಿಂದ, ಅಂತಹ ಹಿಂದೂಗಳಿಗೆ ಕಠಿಣ ಶಿಕ್ಷೆಯಾಗದ ಹೊರತು ಉಳಿದವರಿಗೆ ಭಯ ಅಥವಾ ಎಚ್ಚರಿಕೆ ಉಂಟಾಗುವುದಿಲ್ಲ!”