ಹಿಂದೂ ಪಕ್ಷದಿಂದ ಜನವರಿ 23ರ ನಮಾಜ್‌ಗೆ ನಿಷೇಧ ಹೇರುವಂತೆ ಆಗ್ರಹ ! – Hindu Orgs Seeking Access in MP’s Bhojshala

  • ಧಾರ (ಮಧ್ಯಪ್ರದೇಶ) ಇಲ್ಲಿನ ಭೋಜಶಾಲೆಯಲ್ಲಿ ವಸಂತ ಪಂಚಮಿಗೆ ಪೂಜೆ ಮಾಡುವ ಪ್ರಕರಣ

  • ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ

ನವ ದೆಹಲಿ – ಮಧ್ಯಪ್ರದೇಶದ ಧಾರ ಇಲ್ಲಿನ ಭೋಜಶಾಲೆ ಮಾತಾ ವಾಗ್ವದೇವಿ ಮಂದಿರದಲ್ಲಿ ಮುಂಬರುವ ವಸಂತ ಪಂಚಮಿಯಂದು ಪೂಜೆ ಸಲ್ಲಿಸಲು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ವರ್ಷ ಶುಕ್ರವಾರ, ಜನವರಿ 23 ರಂದು ವಸಂತ ಪಂಚಮಿ ಇದೆ.

ನಮಾಜ್ ನಿಷೇಧಿಸಲು ಆಗ್ರಹ

ಜನವರಿ 23 ರಂದು ಬರುವ ವಸಂತ ಪಂಚಮಿಯ ದಿನದಂದು ಭೋಜಶಾಲೆಯಲ್ಲಿ ಮುಸ್ಲಿಮರು ನಮಾಜ್ ಮಾಡುವುದನ್ನು ನಿಷೇಧಿಸಬೇಕು ಎಂದು ಹಿಂದೂ ಪಕ್ಷವು ಸುಪ್ರೀಂ ಕೋರ್ಟ್‌ನಲ್ಲಿ ಆಗ್ರಹಿಸಿದೆ. ‘ಅಂದು ಭಾರತೀಯ ಪುರಾತತ್ವ ಸಮೀಕ್ಷೆ (ASI) ಮತ್ತು ಸರ್ಕಾರವು ಬಿಗಿ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸುವಂತೆ ನಿರ್ದೇಶನ ನೀಡಬೇಕು’ ಎಂದೂ ಒತ್ತಾಯಿಸಲಾಗಿದೆ. ಈ ಪ್ರಕರಣದ ಕುರಿತು ತುರ್ತು ವಿಚಾರಣೆ ನಡೆಸಬೇಕೆಂದು ಹಿಂದೂ ಪಕ್ಷವು ವಿನಂತಿಸಿದೆ.

‘ಹಿಂದೂ ಫ್ರಂಟ್ ಫಾರ್ ಜಸ್ಟಿಸ್’ ಅರ್ಜಿ

ಈ ಅರ್ಜಿಯನ್ನು ‘ಹಿಂದೂ ಫ್ರಂಟ್ ಫಾರ್ ಜಸ್ಟಿಸ್’ ಪರವಾಗಿ ವಕೀಲ ವಿಷ್ಣು ಶಂಕರ್ ಜೈನ್ ಸಲ್ಲಿಸಿದ್ದಾರೆ. ಭೋಜಶಾಲೆ ಪರಿಸರದಲ್ಲಿ ಮಾತಾ ವಾಗ್ವದೇವಿ, ಅಂದರೆ ಶ್ರೀ ಸರಸ್ವತಿ ದೇವಿಯ ಮಂದಿರವಿದ್ದು, ಇದನ್ನು 11 ನೇ ಶತಮಾನದಲ್ಲಿ ಪರಮಾರ ರಾಜನು ನಿರ್ಮಿಸಿದ್ದನು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಇಲ್ಲಿ ಈ ಮೊದಲು ಹಿಂದೂಗಳು ಪೂಜೆ ಮಾಡುತ್ತಿದ್ದರು; ಆದರೆ 7 ಏಪ್ರಿಲ್ 2003 ರಂದು ಭಾರತೀಯ ಪುರಾತತ್ವ ಸಮೀಕ್ಷೆ ಇಲಾಖೆಯು ಒಂದು ಆದೇಶ ಹೊರಡಿಸಿತು. ಈ ಆದೇಶದ ಪ್ರಕಾರ ಹಿಂದೂಗಳಿಗೆ ಪ್ರತಿ ಮಂಗಳವಾರ ಮತ್ತು ವಸಂತ ಪಂಚಮಿಯಂದು ಪೂಜೆ ಮಾಡಲು ಅನುಮತಿ ನೀಡಲಾಯಿತು, ಹಾಗೂ ಮುಸ್ಲಿಮರಿಗೆ ಪ್ರತಿ ಶುಕ್ರವಾರ ಮಧ್ಯಾಹ್ನ 1 ರಿಂದ 3 ರವರೆಗೆ ನಮಾಜ್ ಮಾಡಲು ಅವಕಾಶ ನೀಡಲಾಯಿತು. ‘ಒಂದು ವೇಳೆ ವಸಂತ ಪಂಚಮಿಯು ಶುಕ್ರವಾರದಂದೇ ಬಂದರೆ ಏನು ಮಾಡಬೇಕು?’, ಎಂಬ ವಿಷಯದ ಬಗ್ಗೆ ಭಾರತೀಯ ಪುರಾತತ್ವ ಸಮೀಕ್ಷೆ ಇಲಾಖೆಯು ಈವರೆಗೂ ಮೌನ ತಾಳಿದೆ.

ಸಂಪಾದಕೀಯ ನಿಲುವು

ಭೋಜಶಾಲೆಯಲ್ಲಿ ಈ ಹಿಂದೆಯೇ ನ್ಯಾಯಾಲಯದ ಆದೇಶದಂತೆ ಪುರಾತತ್ವ ಇಲಾಖೆಯು ಸಮೀಕ್ಷೆ ನಡೆಸಿದ್ದು, ಅದರಲ್ಲಿ ದೇವತೆಗಳ ಮೂರ್ತಿಗಳು ಹಾಗೂ ಇತರ ಹಿಂದೂ ಅವಶೇಷಗಳು ಪತ್ತೆಯಾಗಿರುವುದು ಬಹಿರಂಗವಾಗಿದೆ. ಆದ್ದರಿಂದ ಈಗ ನ್ಯಾಯಾಲಯವು ಭೋಜಶಾಲೆಯನ್ನು ಹಿಂದೂಗಳ ನಿಯಂತ್ರಣಕ್ಕೆ ನೀಡಿ ಈ ವಿವಾದವನ್ನು ಶಾಶ್ವತವಾಗಿ ಕೊನೆಗೊಳಿಸಲಿ!