ಜಪಾನ್‌ನಲ್ಲಿ ಮುಸ್ಲಿಮರಿಗಾಗಿ ಪ್ರತ್ಯೇಕ ಸ್ಮಶಾನ ನಿರ್ಮಾಣಕ್ಕೆ ಸರಕಾರದ ನಿರಾಕರಣೆ! – Denial for Separate Cemetery for Muslims

  • ಭೂಮಿಯ ಕೊರತೆಯಿಂದಾಗಿ ಈ ನಿರ್ಧಾರ

  • ಮುಸ್ಲಿಮರ ಮೃತದೇಹಗಳನ್ನು ಅಂತ್ಯಸಂಸ್ಕಾರಕ್ಕಾಗಿ ಅವರ ಮೂಲ ದೇಶಗಳಿಗೆ ಕಳುಹಿಸುವಂತೆ ಸೂಚನೆ

ಟೋಕಿಯೊ (ಜಪಾನ್) – ದೇಶದಲ್ಲಿ ಮುಸ್ಲಿಮರಿಗಾಗಿ ಪ್ರತ್ಯೇಕ ಸ್ಮಶಾನ ಭೂಮಿಗಳನ್ನು ನಿರ್ಮಿಸುವ ಪ್ರಸ್ತಾಪಗಳನ್ನು ಜಪಾನ್ ಸರಕಾರವು ಸ್ಪಷ್ಟವಾಗಿ ನಿರಾಕರಿಸಿದೆ. ‘ಈ ಪ್ರಸ್ತಾವನೆಗಳನ್ನು ತಿರಸ್ಕರಿಸುವ ನಿರ್ಧಾರವು ಜಪಾನಿನ ಸಂಪ್ರದಾಯಗಳು ಮತ್ತು ಪದ್ಧತಿಗಳಿಗೆ ಅನುಗುಣವಾಗಿದೆ’ ಎಂದು ಸರಕಾರ ಹೇಳಿದೆ. ಸಂಸತ್ತಿನ ಸದಸ್ಯೆ ಮಿಝುಹೊ ಉಮೆಮುರಾ ಅವರು, ‘ಜಪಾನ್‌ನಲ್ಲಿ ಮೃತದೇಹಗಳಿಗೆ ಅಗ್ನಿಸಂಸ್ಕಾರ ಮಾಡುವ ಪದ್ಧತಿ ಇದೆ. ಈ ಸಮಸ್ಯೆಯನ್ನು ನಿಭಾಯಿಸಲು, ಮುಸ್ಲಿಂ ಸಮುದಾಯವು ಮುಸ್ಲಿಂ ವ್ಯಕ್ತಿ ಸತ್ತನಂತರ ಅವರ ಶವವನ್ನು ಅವರ ಮೂಲ ದೇಶಕ್ಕೆ ಕಳುಹಿಸಿ ಅಲ್ಲಿ ಅಂತ್ಯಸಂಸ್ಕಾರ ನಡೆಸುವ ಪ್ರಕ್ರಿಯೆಯನ್ನು ಕೈಗೊಳ್ಳಬೇಕು,’ ಎಂದು ಸೂಚಿಸಿದ್ದಾರೆ.

೧. ಸ್ಮಶಾನ ಭೂಮಿ ನಿರ್ಮಿಸದಿರುವ ನಿರ್ಧಾರವು ಜಪಾನ್‌ನ ಹಳೆಯ ಸಾಂಸ್ಕೃತಿಕ ಮೌಲ್ಯಗಳಿಗೆ ಆದ್ಯತೆ ನೀಡುವ ನೀತಿಯ ಒಂದು ಭಾಗವಾಗಿದೆ. ದೇಶದಲ್ಲಿ ಬೌದ್ಧ ಮತ್ತು ಶಿಂಟೋ ಸಂಪ್ರದಾಯಗಳ ಪ್ರಭಾವವಿರುವುದರಿಂದ, ಅಗ್ನಿಸಂಸ್ಕಾರವೇ (ದಹನ) ಪ್ರಮುಖ ಅಂತ್ಯಸಂಸ್ಕಾರ ಪದ್ಧತಿಯಾಗಿದೆ.

೨. ಜಪಾನ್‌ನಲ್ಲಿ ಶೇಕಡಾ ೯೯ ಕ್ಕಿಂತ ಹೆಚ್ಚು ಜನರು ತಮ್ಮ ಕುಟುಂಬದ ಸದಸ್ಯರ ಮರಣಾನಂತರ ಅಗ್ನಿಸಂಸ್ಕಾರ ಮಾಡುತ್ತಾರೆ.

೩. ನಗರ ಪ್ರದೇಶಗಳಲ್ಲಿ ಭೂಮಿಯ ತೀವ್ರ ಕೊರತೆಯಿರುವುದರಿಂದ, ದೊಡ್ಡ ಪ್ರಮಾಣದಲ್ಲಿ ಸ್ಮಶಾನ ಭೂಮಿಗಳನ್ನು ನಿರ್ಮಿಸುವುದು ಕಷ್ಟಕರ ಮತ್ತು ಸೂಕ್ಷ್ಮ ವಿಷಯವಾಗಿದೆ.

೪. ಈ ನಿರ್ಧಾರದಿಂದಾಗಿ ಜಪಾನ್‌ನಲ್ಲಿ ವಾಸಿಸುತ್ತಿರುವ ಅನಿವಾಸಿ ಮುಸ್ಲಿಮರು ಮತ್ತು ಜಪಾನ್‌ನ ಪೌರತ್ವ ಪಡೆದ ಮುಸ್ಲಿಮರ ಮೇಲೆ ಪರಿಣಾಮ ಬೀರಲಿದೆ. ಅವರ ಧಾರ್ಮಿಕ ಸಂಪ್ರದಾಯಗಳ ಪ್ರಕಾರ, ಮೃತದೇಹವನ್ನು ದಫನ ಮಾಡುವುದು (ಹೂಳುವುದು) ಕಡ್ಡಾಯವಾಗಿದೆ. ಆದ್ದರಿಂದ, ಅವರು ಈಗ ಮೃತ ಮುಸ್ಲಿಂ ವ್ಯಕ್ತಿಯ ಮೃತದೇಹವನ್ನು ಅವರ ಮೂಲ ದೇಶಕ್ಕೆ ಕಳುಹಿಸಬೇಕಾಗುವುದು.

ಸಂಪಾದಕೀಯ ನಿಲುವು

ದೇಶದ ಮುಸ್ಲಿಂ ಸಮುದಾಯವನ್ನು ಓಲೈಸುವ ಬದಲು ಇಂತಹ ಕಠಿಣ ನಿರ್ಧಾರ ಕೈಗೊಳ್ಳುವ ಜಪಾನ್ ಸರಕಾರದಿಂದ ಭಾರತವು ಪಾಠ ಕಲಿಯಬೇಕು! ಭಾರತದಲ್ಲಿಯೂ ಜನಸಂಖ್ಯಾ ಸ್ಫೋಟದಿಂದಾಗಿ ಮೃತ ಮುಸ್ಲಿಮರ ಅಂತ್ಯಸಂಸ್ಕಾರಕ್ಕಾಗಿ ಭೂಮಿಯ ಕೊರತೆ ಎದುರಾಗುತ್ತಿದೆ. ಭವಿಷ್ಯದಲ್ಲಿ ಭಾರತವೂ ಇಂತಹ ಸಮಸ್ಯೆಗೆ ಕಠಿಣ ನಿರ್ಧಾರ ತೆಗೆದುಕೊಳ್ಳುವ ಸನ್ನಿವೇಶ ಬರಲಿದೆ!