ಶ್ರೀಲಂಕಾದಲ್ಲಿ ಹಾಹಾಕಾರ ಸೃಷ್ಟಿಸಿದ ‘ದಿತ್ವ’ ಚಂಡಮಾರುತದ ಭಾರತದ ಕಡೆಗೆ ಪ್ರಯಾಣ ! Cyclone Ditwah

ಚೆನ್ನೈ (ತಮಿಳುನಾಡು) – ಶ್ರೀಲಂಕಾದಲ್ಲಿ ವಿನಾಶವನ್ನುಂಟು ಮಾಡಿದ ನಂತರ, ‘ದಿತ್ವ’ ಚಂಡಮಾರುತವು ಭಾರತದ ಕಡೆಗೆ ವೇಗವಾಗಿ ಮುನ್ನುಗ್ಗುತ್ತಿದೆ. ಭಾರತದಲ್ಲಿನ ಹತ್ತಿರದ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ಮತ್ತು ಪುದುಚೇರಿ ರಾಜ್ಯಗಳ ಕರಾವಳಿ ಪ್ರದೇಶಗಳಲ್ಲಿ ಭಾರೀ ಗಾಳಿಯೊಂದಿಗೆ ಧಾರಾಕಾರ ಮಳೆ ಸುರಿಯುತ್ತಿದೆ. ಇದರಿಂದ ಚೆನ್ನೈನಿಂದ ೫೪ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಚಂಡಮಾರುತದ ಕಾರಣದಿಂದ ಪುದುಚೇರಿ ಕೇಂದ್ರೀಯ ವಿಶ್ವವಿದ್ಯಾಲಯವು ನವೆಂಬರ್ ೨೯ ರಂದು ರಜೆ ಘೋಷಿಸಿದ್ದು, ಎಲ್ಲಾ ಪರೀಕ್ಷೆಗಳನ್ನು ಮುಂದೂಡಿದೆ. ಪುದುಚೇರಿ, ಕಾರೈಕಲ್, ಮಾಹೆ ಮತ್ತು ಯಾನಂನ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳು ಮುಂದಿನ ೨-೩ ದಿನಗಳವರೆಗೆ ಮುಚ್ಚಲ್ಪಡುತ್ತವೆ.

ಶ್ರೀಲಂಕಾದಲ್ಲಿ ಚಂಡಮಾರುತದಿಂದ ಹಾಹಾಕಾರ!

ಶ್ರೀಲಂಕಾದಲ್ಲಿ ‘ದಿತ್ವ’ ಚಂಡಮಾರುತದಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತಗಳಿಂದಾಗಿ ೧೨೩ ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಮತ್ತು ೧೩೦ ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ. ಕಳೆದ ೩ ದಿನಗಳಿಂದ ಕೊಲಂಬೋ ವಿಮಾನ ನಿಲ್ದಾಣದಲ್ಲಿ ೩೦೦ ಭಾರತೀಯ ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ. ಇವರೆಲ್ಲರೂ ದುಬೈಯಿಂದ ಶ್ರೀಲಂಕಾ ಮಾರ್ಗವಾಗಿ ಭಾರತಕ್ಕೆ ಬರುವವರಿದ್ದರು.