ದೆಹಲಿ: ಕಾನ್ವೆಂಟ್ ಶಾಲೆಯ ಶಿಕ್ಷಕರಿಂದ ಕಿರುಕುಳ; ವಿದ್ಯಾರ್ಥಿ ಆತ್ಮಹತ್ಯೆ Delhi Convent Boy Suicide

  • 4 ಶಿಕ್ಷಕರ ಅಮಾನತು; ಸ್ಥಳೀಯ ಸಂಘಟನೆಗಳಿಂದ ಶಾಲೆಯ ಹೊರಗೆ ಪ್ರತಿಭಟನೆ

  • ಇಲ್ಲಿಯವರೆಗೆ ಪ್ರಕರಣ ದಾಖಲಿಸದ ಪೊಲೀಸರು

ನವದೆಹಲಿ – ದೆಹಲಿಯ ಸೇಂಟ್ ಕೊಲಂಬಾ ಕಾನ್ವೆಂಟ್ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ ಶೌರ್ಯ ಪಾಟೀಲ್ ಎಂಬ ವಿದ್ಯಾರ್ಥಿಯು ಶಿಕ್ಷಕರಿಂದ ಕಿರುಕುಳಕ್ಕೆ ಒಳಗಾಗಿ ಮೆಟ್ರೋ ನಿಲ್ದಾಣದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನ ಆತ ತನ್ನ ಪೋಷಕರ ಹೆಸರಿನಲ್ಲಿ ಬರೆದಿದ್ದ ಪತ್ರ ಪೊಲೀಸರಿಗೆ ಸಿಕ್ಕಿದೆ. ಈ ಪತ್ರದಲ್ಲಿ ಆತ ತನ್ನ ಆತ್ಮಹತ್ಯೆಗೆ ಕೆಲವು ಶಿಕ್ಷಕರು ಕಾರಣ ಎಂದು ಬರೆದಿದ್ದಾನೆ. ಈ ಪ್ರಕರಣದಲ್ಲಿ ಶಾಲೆಯು 4 ಶಿಕ್ಷಕರನ್ನು ಅಮಾನತುಗೊಳಿಸಿದೆ. ಪೊಲೀಸರು ಇದುವರೆಗೆ ಯಾರ ವಿರುದ್ಧವೂ ಪ್ರಕರಣ ದಾಖಲಿಸಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳು ಮತ್ತು ಪೋಷಕರು ಶಾಲೆಯ ಹೊರಗೆ ಪ್ರತಿಭಟನೆ ನಡೆಸಿ ಶಿಕ್ಷಕರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಕುರಿತು ಶಾಲೆಯು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಒಂದು ವರ್ಷದಿಂದ ನಿರಂತರವಾಗಿ ಕಿರುಕುಳ

ಶೌರ್ಯನ ತಂದೆ ಪ್ರದೀಪ್ ಪಾಟೀಲ್ ಅವರು, ತಮ್ಮ ಮಗ ಸುಮಾರು ಒಂದು ವರ್ಷದಿಂದ ಶಿಕ್ಷಕರ ನಿಂದನೆ, ಅವಮಾನಕರ ವರ್ತನೆ ಮತ್ತು ದೂರುಗಳಿಂದಾಗಿ ಮಾನಸಿಕ ಒತ್ತಡದಲ್ಲಿದ್ದನು ಎಂದು ತಿಳಿಸಿದರು. ಕೆಲವು ದಿನಗಳ ಹಿಂದೆ ನೃತ್ಯಾಭ್ಯಾಸದ ಸಮಯದಲ್ಲಿ ಅವನು ವೇದಿಕೆಯ ಮೇಲೆ ಬಿದ್ದಾಗ, ಒಬ್ಬ ಶಿಕ್ಷಕಿಯು ವ್ಯಂಗ್ಯವಾಗಿ, ‘ನೀವು ಎಷ್ಟು ಬೇಕಾದರೂ ಅಳಬಹುದು, ನನಗೆ ಯಾವುದೇ ವ್ಯತ್ಯಾಸವಾಗುವುದಿಲ್ಲ’ ಎಂದಳು. ಈ ಘಟನೆಯ ನಂತರ ಅವನು ಬಹಳ ದುಃಖದಲ್ಲಿದ್ದನು. ಕುಟುಂಬದವರು ಈ ಬಗ್ಗೆ ಶಾಲೆಗೆ ತಿಳಿಸಿದಾಗ, ವಿದ್ಯಾರ್ಥಿಯನ್ನು ಶಾಲೆಯಿಂದ ತೆಗೆದುಹಾಕಲಾಗುವುದೆಂದು ಶಾಲೆಯ ಆಡಳಿತ ಮಂಡಳಿ ಬೆದರಿಕೆ ಹಾಕಿತು.

ಪತ್ರದಲ್ಲಿ ವ್ಯಕ್ತಪಡಿಸಿದ ಕೊನೆಯ ಇಚ್ಛೆ!

ಶೌರ್ಯನು ತನ್ನ ಪತ್ರದಲ್ಲಿ, ‘ಶಾಲೆಯ ಶಿಕ್ಷಕರು ನನ್ನನ್ನು ಆತ್ಮಹತ್ಯೆಗೆ ಪ್ರೇರೇಪಿಸಿದರು. ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು, ಇದರಿಂದ ಬೇರೆ ಯಾವುದೇ ವಿದ್ಯಾರ್ಥಿ ಇಂತಹ ಹೆಜ್ಜೆ ಇಡಬಾರದು ಎಂಬುದು ನನ್ನ ಕೊನೆಯ ಆಸೆ’ ಎಂದು ಬರೆದಿದ್ದಾನೆ. ಅವನು ತನ್ನ ಅಂಗಾಂಗ ದಾನದ ಇಚ್ಛೆಯನ್ನೂ ವ್ಯಕ್ತಪಡಿಸಿದ್ದಾನೆ.

ಹಿಂದೂ ಆಗಿದ್ದರಿಂದ ಕಿರುಕುಳ! – ಪ್ರತಿಭಟನಾಕಾರರ ಆರೋಪ

ಶಾಲೆಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದವರ ಪ್ರತಿಕ್ರಿಯೆಗಳನ್ನು ‘ಇಂಡಿಯಾ ಟಿವಿ’ ಸುದ್ದಿ ವಾಹಿನಿಯಲ್ಲಿ ತೋರಿಸಲಾಗುತ್ತಿತ್ತು, ಈ ವೇಳೆ ಒಬ್ಬ ಪ್ರತಿಭಟನಾಕಾರನು, ವಿದ್ಯಾರ್ಥಿ ಮರಾಠಿ ಆಗಿದ್ದನು ಮತ್ತು ಶಾಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಉಲ್ಲೇಖಿಸಿದ್ದನು, ಅಂದಿನಿಂದ ಈ ಕ್ರೈಸ್ತ ಶಾಲೆಯಿಂದ ಆತನಿಗೆ ಕಿರುಕುಳ ಶುರುವಾಯಿತು. ಕ್ರೈಸ್ತ ಶಾಲೆಗಳಿಂದ ಹಿಂದೂಗಳಿಗೆ ಕಿರುಕುಳ ನೀಡಲಾಗುತ್ತಿದೆ, ಈ ಘಟನೆ ಇದಕ್ಕೆ ಒಂದು ಉದಾಹರಣೆಯಾಗಿದೆ ಎಂದು ಆರೋಪಿಸಿದರು.

ಸಂಪಾದಕೀಯ ನಿಲುವು

ಕಾನ್ವೆಂಟ್ ಶಾಲೆಗಳಿಗೆ ಕಡಿವಾಣ ಹಾಕಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಠಿಣ ಕಾನೂನುಗಳನ್ನು ಜಾರಿಗೊಳಿಸುವುದು ಅವಶ್ಯಕ!