ಗೋಧಿ ಸಂಗ್ರಹಕ್ಕಾಗಿ ಬಳಸಿದ ಸಲ್ಫಾಸ್ ಕೀಟನಾಶಕದಿಂದ ವಿಷಕಾರಿ ಅನಿಲ ನಿರ್ಮಾಣ: 2 ಮಕ್ಕಳ ಸಾವು, ಪೋಷಕರು ಅಸ್ವಸ್ಥ : Sulfas Pesticide Death

ಗ್ವಾಲಿಯರ್ (ಮಧ್ಯಪ್ರದೇಶ) – ಇಲ್ಲಿ ವಿಷಕಾರಿ ಅನಿಲದಿಂದಾಗಿ ಸತ್ಯೇಂದ್ರ ಶರ್ಮಾ ಅವರ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಶರ್ಮಾ ಮತ್ತು ಅವರ ಪತ್ನಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ. ಶರ್ಮಾ ವಾಸಿಸುತ್ತಿದ್ದ ಮನೆಯ ಮಾಲೀಕರು ಒಂದು ಕೋಣೆಯಲ್ಲಿ 25 ಕ್ವಿಂಟಾಲ್ ಗೋಧಿಯನ್ನು ಸಂಗ್ರಹಿಸಿದ್ದರು. ಅದರಲ್ಲಿ ಹುಳಗಳು ಬೀಳಬಾರದು ಎಂದು ಗೋಣಿಚೀಲಗಳಲ್ಲಿ ಸಲ್ಫಾಸ್ ಕೀಟನಾಶಕವನ್ನು ಇರಿಸಲಾಗಿತ್ತು. ಈ ಔಷಧವು ನೀರಿನ ಸಂಪರ್ಕಕ್ಕೆ ಬಂದ ಕಾರಣ, ಫಾಸ್ಫೀನ್ ಅನಿಲವು ಉತ್ಪತ್ತಿಯಾಗಲು ಪ್ರಾರಂಭಿಸಿತು.

ಕೂಲರ್‌ನಿಂದಾಗಿ ವಿಷಕಾರಿ ಅನಿಲವು ಕೋಣೆಯಾದ್ಯಂತ ಹರಡಿತು. ಇದರಿಂದ ಮಧ್ಯರಾತ್ರಿಯ ಸುಮಾರಿಗೆ ಇಡೀ ಶರ್ಮಾ ಕುಟುಂಬಕ್ಕೆ ಉಸಿರಾಡಲು ಕಷ್ಟವಾಗಲಾರಂಭಿಸಿತು. ಎಲ್ಲರಿಗೂ ವಾಂತಿ ಶುರುವಾಯಿತು. ಇದರಲ್ಲಿ ಅವರ ಚಿಕ್ಕ ಮಗ ಮತ್ತು ಮಗಳು ಮೃತಪಟ್ಟಿದ್ದಾರೆ. ಈ ಘಟನೆಯ ನಂತರ ಸ್ಥಳೀಯರು ಆಸ್ಪತ್ರೆಯ ಹೊರಗೆ ಬಂದು ರಸ್ತೆ ತಡೆ ನಡೆಸಿದರು. ಮನೆ ಮಾಲೀಕರ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು. ಸಂತ್ರಸ್ತ ಕುಟುಂಬಕ್ಕೆ ಆರ್ಥಿಕ ನೆರವು ನೀಡುವಂತೆ ಸಹ ಬೇಡಿಕೆ ಇಡಲಾಗಿದೆ.

‘ಕ್ರಿಟಿಕಲ್ ಕೇರ್ ಸ್ಪೆಷಲಿಸ್ಟ್’ ಡಾ. ಮನೀಶ್ ಗುಪ್ತಾ ಅವರು ಸಲ್ಫಾಸ್ (ಅಲ್ಯುಮಿನಿಯಂ ಫಾಸ್ಫೈಡ್) ನಿಂದಾಗುವ ಅಪಾಯಗಳನ್ನು ವಿವರಿಸಿದ್ದಾರೆ. ಫಾಸ್ಫೀನ್ ಅನಿಲವು ಬಣ್ಣರಹಿತವಾಗಿರುತ್ತದೆ. ಕೊಳೆತ ಮೀನು ಅಥವಾ ಬೆಳ್ಳುಳ್ಳಿಯಂತಹ ವಾಸನೆ ಇರುತ್ತದೆ. ಈ ಅನಿಲವು ಉಸಿರಾಟದ ಸಾಮರ್ಥ್ಯ ಮತ್ತು ಹೃದಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಒಂದೇ ಬಾರಿಗೆ ಅನೇಕ ಅಂಗಗಳು ನಿಷ್ಕ್ರಿಯಗೊಳ್ಳುತ್ತವೆ. ಸಲ್ಫಾಸ್‌ನಿಂದ ಉಂಟಾಗುವ ತೊಂದರೆಗಳಿಗೆ ಆಸ್ಪತ್ರೆಯಲ್ಲಿ ಮಾತ್ರ ಚಿಕಿತ್ಸೆ ನೀಡಲಾಗುತ್ತದೆ. ಈ ಅನಿಲದ ಅಲ್ಪ ಪ್ರಮಾಣವೂ ಮಾರಕವಾಗಬಹುದು, ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ಕೀಟನಾಶಕಗಳ ದುಷ್ಪರಿಣಾಮಗಳನ್ನು ತಿಳಿದು, ಆ ಬಗ್ಗೆ ಎಚ್ಚರ ವಹಿಸುವುದು ಮತ್ತು ಪರಿಹಾರೋಪಾಯಗಳನ್ನು ಕೈಗೊಳ್ಳುವುದು ಅಗತ್ಯ ಎಂಬುದು ಈ ಘಟನೆಯಿಂದ ತಿಳಿಯುತ್ತದೆ!