ಶ್ರೀರಾಮಲಲ್ಲಾನ ಮೂರ್ತಿ ನಿರ್ಮಿಸಿದ ಶಿಲ್ಪಿ ಅರುಣ ಯೋಗಿರಾಜ ಅವರಿಗೆ ದೆಹಲಿಯಲ್ಲಿ ನಡೆಯುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಆಹ್ವಾನ Sculptor Arun Yogiraj Invited

ಎಡಭಾಗದಲ್ಲಿ ಶ್ರೀ. ಅರುಣ ಯೋಗಿರಾಜ ಅವರಿಗೆ ಆಹ್ವಾನ ನೀಡುತ್ತಿರುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಮತ್ತು ಪಕ್ಕದಲ್ಲಿ ಶ್ರೀ. ವಿನಾಯಕ ಶಾನಭಾಗ

ಮೈಸೂರು – ದೆಹಲಿಯಲ್ಲಿ ಡಿಸೆಂಬರ್ 13 ಮತ್ತು 14ರಂದು ನಡೆಯಲಿರುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ಕ್ಕೆ ಶ್ರೀರಾಮಲಲ್ಲಾನ ಭಾವನಾತ್ಮಕ ಮೂರ್ತಿ ನಿರ್ಮಿಸಿದ ಶಿಲ್ಪಿ ಶ್ರೀ. ಅರುಣ ಯೋಗಿರಾಜ ಅವರಿಗೆ ಆಹ್ವಾನ ನೀಡಲಾಗಿದೆ. ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರು ಇತ್ತೀಚೆಗೆ ಮೈಸೂರಿನಲ್ಲಿರುವ ಶ್ರೀ. ಅರುಣ ಯೋಗಿರಾಜ ಅವರ ಶಿಲ್ಪಶಾಲೆಗೆ ಭೇಟಿ ನೀಡಿ, ಅವರನ್ನು ಭೇಟಿಯಾಗಿ ವಿಶೇಷ ಆಹ್ವಾನ ನೀಡಿದರು. ಶ್ರೀ. ಅರುಣ ಯೋಗಿರಾಜ ಅವರು ಸಹ ದೆಹಲಿಯ ಮಹೋತ್ಸವದಲ್ಲಿ ಉಪಸ್ಥಿತರಿರುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಲಕ್ಷ್ಮೀಪೂಜೆ ದಿನವಾದ ಅಕ್ಟೋಬರ್ 21ರಂದು ಶ್ರೀ. ಅರುಣ ಯೋಗಿರಾಜ ಮತ್ತು ಅವರ ಪತ್ನಿ ಸೌ. ವಿಜಯತಾ ಅವರು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರ ಆಶೀರ್ವಾದ ಪಡೆದು ತಮ್ಮ ಶಿಲ್ಪಶಾಲೆಯನ್ನು ಅವರಿಗೆ ತೋರಿಸಿದರು.

ಈ ಸಂದರ್ಭ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು ಶ್ರೀ. ಅರುಣ ಯೋಗಿರಾಜ ಅವರೊಂದಿಗೆ ಮಾತನಾಡಿ, ಶ್ರೀರಾಮನ ಮೂರ್ತಿ ನಿರ್ಮಿಸುವಾಗ ಅವರಿಗೆ ಬಂದ ಅನುಭವಗಳು ಮತ್ತು ಅನುಭೂತಿಗಳ ಕುರಿತು ಸಂದರ್ಶನ ನಡೆಸಿದರು. (ಈ ಸಂದರ್ಶನವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು – ಸಂಪಾದಕರು)

ಕೋಟ್ಯಂತರ ಭಾರತೀಯರ ಆಶೆಗಳಿಗೆ ರೂಪ ನೀಡಿದ ಅರುಣ ಯೋಗಿರಾಜ !

ಶ್ರೀರಾಮಲಲ್ಲಾನ ಮೂರ್ತಿ ನಿರ್ಮಿಸುತ್ತಿರುವ ಶ್ರೀ. ಅರುಣ ಯೋಗಿರಾಜ

2024ರ ಜನವರಿ 22 ಕೇವಲ ಒಂದು ದಿನವಲ್ಲ, ಅದು ಹೊಸ ಯುಗದ ಪ್ರಾರಂಭವಾಗಿತ್ತು. ಆ ಐತಿಹಾಸಿಕ ಕ್ಷಣದ ಕೇಂದ್ರಬಿಂದುವಿನಲ್ಲಿ ಇದ್ದರು ಶಿಲ್ಪಿ ಶ್ರೀ. ಅರುಣ ಯೋಗಿರಾಜ. ಅವರು ಕೋಟ್ಯಂತರ ಭಾರತೀಯರ ಆಶೆ-ಆಕಾಂಕ್ಷೆಗಳಿಗೆ ಆಕಾರ ನೀಡಿದ ಶಿಲ್ಪಿಯಾದರು. ಅವರ ಸೃಷ್ಟಿ ಕೇವಲ ಒಂದು ಮೂರ್ತಿ ಅಲ್ಲ ಅದು 500 ವರ್ಷಗಳಿಂದಲೂ ನಡೆದ ಅನೇಕ ತ್ಯಾಗ, ಹೋರಾಟ ಮತ್ತು ಪ್ರಾರ್ಥನೆಗಳ ಸಂಗ್ರಹವಾಗಿದೆ. ಅದು ಭಾರತವು ದೇವಸ್ವರೂಪಿ ಶ್ರೀರಾಮಲಲ್ಲಾನನ್ನು ಒಂದು ಗುಡಾರದಿಂದ ಅದ್ಭುತ ಅಯೋಧ್ಯಾ ದೇವಸ್ಥಾನದಲ್ಲಿ ಅವರ ಯೋಗ್ಯ ಸ್ಥಾನದಲ್ಲಿ ವಾಸಿಸುತ್ತಿರುವುದನ್ನು ಕಂಡ ಕ್ಷಣವಾಗಿತ್ತು.