ಬೋರಿವಲಿ(ಮುಂಬಯಿ): (9 ಗಜದ ಕಚ್ಚೆ ಸೀರೆ) ನೌವಾರಿ ಉಟ್ಟು ನಡೆಯುವ ಸ್ಪರ್ಧೆ; ಸಾಂಪ್ರದಾಯಿಕ ಉಡುಪಿಗೆ ಗೌರವ ನೀಡುವ ಉದ್ದೇಶ!

ಮುಂಬಯಿ – ಬೋರಿವಲಿಯಲ್ಲಿ ಮುಂಬರುವ ನವೆಂಬರ್‌ನಲ್ಲಿ ನಡೆಯಲಿರುವ ‘ಸಂಸದರ ಕ್ರೀಡಾ ಮಹೋತ್ಸವ ೨೦೨೫’ ರಲ್ಲಿ ನೌವಾರಿ ಸೀರೆ ಉಟ್ಟು ನಡೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಉತ್ತರ ಮುಂಬಯಿನ ಬಿಜೆಪಿ ಸಂಸದ ಪಿಯೂಷ್ ಗೋಯಲ್ ಅವರು ಈ ಮಹೋತ್ಸವವನ್ನು ಆಯೋಜಿಸಿದ್ದಾರೆ. ‘ಭಾರತೀಯ ಸಂಸ್ಕೃತಿ, ಸ್ವದೇಶಿ ಮತ್ತು ಸಾಂಪ್ರದಾಯಿಕ ಉಡುಪಿಗೆ ಗೌರವ ನೀಡುವುದು’, ಈ ಸ್ಪರ್ಧೆಯ ಹಿಂದಿನ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು. ‘ಸೀರೆಯು ಸಾಂಪ್ರದಾಯಿಕ ಉಡುಪಾಗಿರುವುದರಿಂದ, ನೌವಾರಿ ಸೀರೆ ಉಟ್ಟು ನಡೆಯುವ ಸ್ಪರ್ಧೆಯಿಂದ ಹಳೆಯ ಸಂಪ್ರದಾಯಕ್ಕೆ ಪುನಶ್ಚೇತನ ಸಿಗಲಿದೆ’ ಎಂದೂ ಅವರು ಹೇಳಿದರು.

ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಈ ಸೀರೆ ಧರಿಸಿ ೨ ರಿಂದ ೩ ಕಿ.ಮೀ. ನಡೆಯಬೇಕಾಗುತ್ತದೆ. ಪ್ರಸ್ತುತ ಉದ್ಯೋಗಸ್ಥ ಮಹಿಳೆಯರು ಬಹಳ ವಿರಳವಾಗಿ ಸೀರೆ ಉಡುತ್ತಾರೆ. ಸೀರೆ ಉಟ್ಟು ವಾಹನದಲ್ಲಿ ಪ್ರಯಾಣಿಸುವುದು ಮತ್ತು ಇಡೀ ದಿನ ಕಛೇರಿಯಲ್ಲಿ ಓಡಾಡುವುದು ಸಾಧ್ಯವಾಗದ ಕಾರಣ ಈ ಉಡುಗೆ ಕಾಲಬಾಹಿರವಾಗುತ್ತಿದೆ. ಸರಳ ಸೀರೆ ಉಟ್ಟು ನಡೆಯುವುದು ಕೂಡಾ ಹೊಸ ಪೀಳಿಗೆಯ ಯುವತಿಯರಿಗೆ ಕೌಶಲ್ಯದ ಭಾಗವಾಗಿ ಮಾರ್ಪಟ್ಟಿದೆ. ‘ವಾಕಥಾನ್’ (ನಡಿಗೆಯ ಮೂಲಕ ಜಾಗೃತಿ) ಈ ಉಪಕ್ರಮವನ್ನು ‘ಪ್ರತಿದಿನ ನಡೆಯಿರಿ, ಆರೋಗ್ಯ ಕಾಪಾಡಿ’ ಎಂಬ ಸಂದೇಶ ನೀಡಲು ಹಮ್ಮಿಕೊಳ್ಳಲಾಗಿದೆ. ಇದರ ಮೂಲಕ ಸಾಮೂಹಿಕವಾಗಿ ನಡೆಯುವ ರೂಢಿ ಬೆಳೆಸಲು ಪ್ರಯತ್ನಿಸಲಾಗುವುದು.

ಈ ಸ್ಪರ್ಧೆಗಾಗಿ ನವೆಂಬರ್ ೨ ರವರೆಗೆ ಪೋರ್ಟಲ್‌ನಲ್ಲಿ ನೋಂದಣಿ ನಡೆಯಲಿದೆ. ಈ ಮಹೋತ್ಸವದಲ್ಲಿ (ಚೀಣಿ ಕೋಲು) ವಿಟಿ-ದಾಂಡು, (ಕುಂಟಾಟ) ಲಂಗಡಿ, ಲಗೋರಿ, ಮಲ್ಲಖಂಬ, ಕಬಡ್ಡಿ, ಖೋ-ಖೋ ಮುಂತಾದ ಭಾರತೀಯ ಆಟಗಳ ಜೊತೆಗೆ ಕ್ರಿಕೆಟ್, ಅಥ್ಲೆಟಿಕ್ಸ್, ವಾಲಿಬಾಲ್ ಆಟಗಳನ್ನು ಕೂಡಾ ‘ಖೇಲೇಗಾ ಇಂಡಿಯಾ, ತೋ ಬಢೇಗಾ ಇಂಡಿಯಾ’ ಎಂಬ ಘೋಷವಾಕ್ಯದಡಿಯಲ್ಲಿ ನಡೆಸಲಾಗುವುದು.

ಸಂಪಾದಕೀಯ ನಿಲುವು

ಆಧುನಿಕ ಬಟ್ಟೆಗಳಿಗಿಂತ ಸಾಂಪ್ರದಾಯಿಕ ಬಟ್ಟೆಗಳಲ್ಲಿ ಹೆಚ್ಚು ಸಾತ್ತ್ವಿಕತೆ ಇರುತ್ತದೆ; ಏಕೆಂದರೆ ಸಾಂಪ್ರದಾಯಿಕ ಬಟ್ಟೆಗಳು ಒಂದೇ ವಸ್ತ್ರವಾಗಿರುತ್ತದೆ ಮತ್ತು ಅವುಗಳನ್ನು ಸರಿಯಾದ ಪದ್ಧತಿಯಲ್ಲಿ ಧರಿಸುವುದರಿಂದ ದೈವಿಕ ಚೈತನ್ಯವು ಆಕರ್ಷಿತವಾಗುತ್ತವೆ ಹಾಗೂ ಸಾಂಪ್ರದಾಯಿಕ ಬಟ್ಟೆ ಧರಿಸುವ ಮಹಿಳೆಗೆ ಪ್ರಯೋಜನಕಾರಿಯಾಗಿದೆ. ಇದರಿಂದ ಮಹಿಳೆಯ ಸುತ್ತಲಿನ ಸಕಾರಾತ್ಮಕತೆ ಹೆಚ್ಚುವುದರಿಂದ ಹೆಚ್ಚು ಉತ್ಸಾಹದಿಂದ ಕೂಡಿರುತ್ತಾರೆ. ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ಅನೇಕ ವೈಜ್ಞಾನಿಕ ಉಪಕರಣಗಳ ಸಹಾಯದಿಂದ ಇಂತಹ ವಿವಿಧ ಸಂಶೋಧನೆಯನ್ನು ಮಾಡಿದೆ!