ಸಮೀರ್ ವಾಂಖೆಡೆ ಬಡ್ತಿ ಪ್ರಕರಣ : ಕೇಂದ್ರ ಸರಕಾರದ ಅರ್ಜಿಯನ್ನು ತಿರಸ್ಕರಿಸಿ ದಂಡ ವಿಧಿಸಿದ ದೆಹಲಿ ಉಚ್ಚ ನ್ಯಾಯಾಲಯ !

ಮುಂಬಯಿ – ಐ.ಆರ್.ಎಸ್. (ಇಂಟರ್ನಲ್ ರೆವೆನ್ಯೂ ಸರ್ವಿಸ್ – ಭಾರತೀಯ ಕಂದಾಯ ಸೇವೆ) ಅಧಿಕಾರಿ ಸಮೀರ್ ವಾಂಖೆಡೆ ಅವರ ಬಡ್ತಿಗೆ ಸಂಬಂಧಿಸಿದ ಪ್ರಕರಣದಲ್ಲಿ ದೆಹಲಿ ಉಚ್ಚ ನ್ಯಾಯಾಲಯವು ರಾಜ್ಯ ಸರ್ಕಾರದ ಮೇಲೆ ೨೦,೦೦೦ ರೂಪಾಯಿ ದಂಡ ವಿಧಿಸಿದೆ. ಅರ್ಜಿಯೊಂದರಲ್ಲಿ ಕೇಂದ್ರ ಸರ್ಕಾರವು ಪ್ರಮುಖ ಮಾಹಿತಿಯನ್ನು ಮರೆಮಾಚಿದ್ದಕ್ಕಾಗಿ ಈ ದಂಡವನ್ನು ವಿಧಿಸಲಾಗಿದೆ.

ಆರ್ಯನ್ ಖಾನ್ ಪ್ರಕರಣದಲ್ಲಿ ವಾಂಖೆಡೆ ಅವರ ಮೇಲಿನ ಮೊಕದ್ದಮೆಗಳಿಂದಾಗಿ ಕೇಂದ್ರ ಸರ್ಕಾರವು ಅವರ ಬಡ್ತಿಯನ್ನು ‘ಮೊಹರು ಮಾಡಿದ’ ಲಕೋಟೆಯಲ್ಲಿ ಇಟ್ಟಿತ್ತು. ದೆಹಲಿ ಉಚ್ಚ ನ್ಯಾಯಾಲಯವು ವಾಂಖೆಡೆ ಅವರ ಬಡ್ತಿಯ ಕುರಿತು ಕೇಂದ್ರ ಲೋಕಸೇವಾ ಆಯೋಗದ ಶಿಫಾರಸುಗಳ ಮೇಲೆ ನಿರ್ಧಾರ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಹಾಗೆ ಮಾಡಿದರೆ, ಅವರಿಗೆ ಜನವರಿ ೧, ೨೦೨೧ ರಿಂದ ಹೆಚ್ಚುವರಿ ಆಯುಕ್ತರ ಸ್ಥಾನಮಾನ ನೀಡುವಂತೆ ನಿರ್ದೇಶನ ನೀಡಿತ್ತು; ಆದರೆ, ಕೇಂದ್ರ ಸರ್ಕಾರವು ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿತು. ವಾಂಖೆಡೆ ಅವರು ಇದು ತೊಂದರೆ ನೀಡುವ ತಂತ್ರ ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸುವಂತೆ ಕೋರಿದರು. ಅದರ ನಂತರ, ದೆಹಲಿ ಉಚ್ಚ ನ್ಯಾಯಾಲಯವು ಕೇಂದ್ರದ ಮರುಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಿತು ಮತ್ತು ಪ್ರಮುಖ ಮಾಹಿತಿಯನ್ನು ಮರೆಮಾಚಿದ್ದಕ್ಕಾಗಿ ಸರ್ಕಾರವನ್ನು ಟೀಕಿಸಿ ದಂಡ ವಿಧಿಸಿತು.

ಬಡ್ತಿ ಆದೇಶವು ೨೦೨೧ ರಲ್ಲಿ ಆಗಿದ್ದರೂ, ಕೇಂದ್ರ ಸರ್ಕಾರವು ಅದರ ಅನುಷ್ಠಾನವನ್ನು ಹಲವು ತಿಂಗಳುಗಳವರೆಗೆ ವಿಳಂಬ ಮಾಡಿದೆ ಎಂದು ವಾಂಖೆಡೆ ವಿಷಾದ ವ್ಯಕ್ತಪಡಿಸಿದರು.

ವಾಂಖೆಡೆ ಅವರು ಮಾದಕ ದ್ರವ್ಯ ನಿಗ್ರಹ ದಳದ ಮುಂಬಯಿ ವಿಭಾಗದ ನಿರ್ದೇಶಕರಾಗಿದ್ದಾಗ, ನಟ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್‌ನನ್ನು ಕ್ರೂಸ್‌ನಲ್ಲಿನ ಮಾದಕ ದ್ರವ್ಯ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿ ೨೫ ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಅವರ ಮೇಲಿದೆ.