ಸಂಸತ್ತಿನ ಭದ್ರತಾ ಲೋಪ !

ಇಬ್ಬರು ಲೋಕಸಭೆಯಲ್ಲಿ ಸಂದರ್ಶನ ಗ್ಯಾಲರಿಯಿಂದ ಜಿಗಿದು ಬಣ್ಣದ ಹೊಗೆ ಹಾರಿಸಿದರು !

ಇನ್ನೂ ಇಬ್ಬರು ಸಂಸತ್ತಿನ ಹೊರಗೆ ಕೂಡ ಹೊಗೆಯನ್ನು ಹಾರಿಸಿದರು

ಒಟ್ಟು 6 ಜನರಿಂದ ಸಂಚು : 4 ಮಂದಿ ಬಂಧನ

ನವ ದೆಹಲಿ – ಡಿಸೆಂಬರ್ 13 ರಂದು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆಯ ಪ್ರೇಕ್ಷಕರ ಗ್ಯಾಲರಿಯಿಂದ ಇಬ್ಬರು ವ್ಯಕ್ತಿಗಳು ಸದನಕ್ಕೆ ಜಿಗಿದಿದ್ದಾರೆ. ಅವರು ತಮ್ಮ ಬೂಟುಗಳಲ್ಲಿ ಅಡಗಿದ್ದ ಬಣ್ಣದ ಫ್ಯೂಮಿಂಗ್ ಪೌಡರ್ ಅನ್ನು ಎಸೆದರು. ಇದರಿಂದ ಸಭಾಂಗಣದಲ್ಲಿ ಹಳದಿ ಹೊಗೆ ಆವರಿಸಿತು. ಇವರಿಬ್ಬರನ್ನೂ ಸಂಸದರು ಹಿಡಿದು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಬಳಿಕ ಭದ್ರತಾ ಸಿಬ್ಬಂದಿ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆಯಿಂದಾಗಿ ಸದನದ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ‘ಈ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸದನದಲ್ಲಿ ಮಂಡಿಸಲಾಗುವುದು’ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸದಸ್ಯರಿಗೆ ಭರವಸೆ ನೀಡಿದರು. ಈ ಕೃತ್ಯದ ಹಿಂದಿರುವ ಆರೋಪಿಗಳ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ಡಿಸೆಂಬರ್ 13, 2001 ರಂದು, ಜಿಹಾದಿ ಭಯೋತ್ಪಾದಕರು ಸಂಸತ್ತಿನ ಹೊರಗೆ ದಾಳಿ ನಡೆಸಿದ್ದರು. ಇದೇ ದಿನಾಂಕದಂದು ಇಂತಹ ಘಟನೆ ನಡೆದಿದ್ದು, ಅದರ ಹಿಂದಿನ ಸಂದರ್ಭ ಏನು ?, ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

ಮಧ್ಯಾಹ್ನ 12:30ರ ಸುಮಾರಿಗೆ ಈ ಘಟನೆ ನಡೆದಿದೆ. ಆಗ ಸಂಸತ್ತಿನಲ್ಲಿ ಪ್ರಶ್ನೋತ್ತರ ಕಲಾಪ ನಡೆಯುತ್ತಿತ್ತು. ಇಬ್ಬರೂ ಜಿಗಿದ ನಂತರ ಸದಸ್ಯರ ಆಸನಗಳಿಂದ ಜಿಗಿದು ಸಭಾಪತಿ ಸ್ಥಾನದತ್ತ ಓಡಿದರು. ಆ ವೇಳೆ ಅವರು ಪೌಡರ್ ಮೂಲಕ ಹೊಗೆ ಬಿಡುತ್ತಿದ್ದರು. ನಂತರ ಅವರನ್ನು ಬಂಧಿಸಲಾಯಿತು.

ಇಬ್ಬರೂ ಸಂಸತ್ತಿನ ಹೊರಗೆ ಹೊಗೆ ಬಿಟ್ಟರು !

ಲೋಕಸಭೆಯಲ್ಲಿ ನಡೆದ ಘಟನೆಗೂ ಮುನ್ನ ಸಂಸತ್ತಿನ ಹೊರಗೆ ಇಬ್ಬರು ‘ಕಲರ್ ಸ್ಮೋಕ್ ಟ್ಯೂಬ್’ ಮೂಲಕ ಹಳದಿ ಹೊಗೆಯನ್ನು ಬಿಡುಗಡೆ ಮಾಡಿದ್ದರು. ಅವರನ್ನೂ ಭದ್ರತಾ ಸಿಬ್ಬಂದಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಲೋಕಸಭೆಯಲ್ಲಿ ಜಿಗಿದು ಹೊಗೆ ಬಿಟ್ಟ ನಾಲ್ವರು ಹೊರಗೆ ಹೊಗೆ ಬಿಟ್ಟಿದ್ದು ಪರಸ್ಪರ ಸಂಪರ್ಕದಲ್ಲಿದ್ದು ಬೆಳಕಿಗೆ ಬಂದಿದೆ. ಅವರು ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕದಲ್ಲಿದ್ದು, ಘಟನೆಗೆ ಸಂಚು ರೂಪಿಸಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅದರಲ್ಲಿ ‘ಸರ್ವಾಧಿಕಾರಿ ಆಡಳಿತ ನಡೆಯುವುದಿಲ್ಲ’ ಎಂದು ಕೂಗುತ್ತಿದ್ದ ಮಹಿಳೆಯೂ ಸೇರಿದ್ದರು.

ಆರೋಪಿಗಳು ಯಾರು?

ಲೋಕಸಭೆಯ ಸಭಾಂಗಣಕ್ಕೆ ಜಿಗಿದವರ ಹೆಸರು ಸಾಗರ್ ಶರ್ಮಾ ಮತ್ತು ಮನೋರಂಜನ್ ಎಂದಾಗಿದೆ. ಕರ್ನಾಟಕ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಪತ್ರದ ಮೂಲಕ ಸಂಸತ್ತಿನ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತುಕೊಳ್ಳಲು ಇಬ್ಬರಿಗೆ ಪಾಸ್ ನೀಡಲಾಗಿತ್ತು. ಮನೊರಂಜನ್ ಕರ್ನಾಟಕದವರಾಗಿದ್ದಾನೆ, ಸಾಗರ್ ಶರ್ಮಾ ಲಕ್ಷ್ಮಣಪುರಿ (ಉತ್ತರ ಪ್ರದೇಶ) ನಿವಾಸಿಯಾಗಿದ್ದಾರೆ. ಇಬ್ಬರ ಬಳಿಯೂ ಸೆಲ್ ಫೋನ್, ಬ್ಯಾಗ್ ಅಥವಾ ಸ್ವಂತ ಗುರುತಿನ ಚೀಟಿ ಇರಲಿಲ್ಲ.

ಸಂಸತ್ತಿನ ಹೊರಗೆ ಹೊಗೆ ಬಿಟ್ಟವರ ಹೆಸರು ಅಮೋಲ್ ಶಿಂದೆ ಮತ್ತು ನೀಲಂ ಸಿಂಗ್ ಎಂದಾಗಿದೆ. ಅಮೋಲ್ ಮಹಾರಾಷ್ಟ್ರದ ಲಾತೂರ್ ಮೂಲದವರಾಗಿದ್ದರೆ, ಅವರ ಸಹಚರ ನೀಲಂ ಸಿಂಗ್ ಹರಿಯಾಣದ ಹಿಸಾರ್ ಮೂಲದವಳಾಗಿದ್ದಾಳೆ. ಈ ನಾಲ್ವರ ಜೊತೆಗೆ ಇನ್ನೂ ಇಬ್ಬರು ಈ ಷಡ್ಯಂತ್ರದಲ್ಲಿ ಭಾಗಿಯಾಗಿದ್ದಾರೆ. ಐದನೇ ಆರೋಪಿಯ ಹೆಸರು ಲಲಿತ್ ಝಾ ಎಂದು ತಿಳಿಯಲಾಗಿದ್ದರೂ, ಆರನೇ ಆರೋಪಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಈ 6 ಜನರಲ್ಲಿ 5 ಮಂದಿ ದೆಹಲಿ ಹೊರಗಿನವರಾಗಿದ್ದಾರೆ. ಅವರೆಲ್ಲರೂ ಡಿಸೆಂಬರ್ 12 ರಂದು ಗುರುಗ್ರಾಮ್ (ಹರಿಯಾಣ) ನಲ್ಲಿರುವ ಲಲಿತ್ ಝಾ ಅವರ ಮನೆಗೆ ಬಂದು ತಂಗಿದ್ದರು. ನಂತರ ಡಿಸೆಂಬರ್ 13 ರಂದು ದೆಹಲಿಯ ಸಂಸತ್ ಭವನದ ಬಳಿ ತಲುಪಿದರು. ಇಂತಹ ಕೃತ್ಯ ಎಸಗಿರುವ ಹಿಂದಿನ ಉದ್ದೇಶವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ? ಘಟನೆಯ ಸಂದರ್ಭದಲ್ಲಿ ಅವರು ಯಾವುದೇ ಘೋಷಣೆಗಳನ್ನು ಅಥವಾ ಕರಪತ್ರಗಳನ್ನು ಎಸೆಯಲಿಲ್ಲ. ಉಳಿದ ಇಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

15 ದಿನಗಳ ಹಿಂದೆಯೇ ದಾಳಿಯ ಮಾಹಿತಿ ಸಿಕ್ಕಿತ್ತು ! – ಕಾಂಗ್ರೆಸ್

ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರು ಸಂಸತ್ತಿನ ಮೇಲಿನ ದಾಳಿಯ ಬಗ್ಗೆ 15 ದಿನಗಳ ಹಿಂದೆಯೇ ಗೌಪ್ಯ ಮಾಹಿತಿ ಲಭಿಸಿದೆ ಎಂದು ಹೇಳಿದ್ದಾರೆ.

‘ಕಲರ್ ಸ್ಮೋಕ್ ಟ್ಯೂಬ್’ ಅನ್ನು ಎಲ್ಲಿ ಬಳಸಲಾಗುತ್ತದೆ?

ದೀಪಾವಳಿ ಅಥವಾ ಮದುವೆಯ ಸಮಯದಲ್ಲಿ ಛಾಯಾಚಿತ್ರಗಳನ್ನು ತೆಗೆದುಕೊಳ್ಳಲು ಬಣ್ಣದ ಹೊಗೆ ಕೊಳವೆಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಈ ಟ್ಯೂಬ್ ನಲ್ಲಿ ಬಣ್ಣ ತುಂಬಿರುತ್ತದೆ ಮತ್ತು ತೆರೆದಾಗ ಬಣ್ಣದ ಹೊಗೆಯನ್ನು ಹೊರಸೂಸುತ್ತದೆ. ಟ್ಯೂಬ್ ಸಣ್ಣ ಪೈಪ್ ಆಕಾರದಲ್ಲಿದೆ ಮತ್ತು ಕನಿಷ್ಠ 2-3 ಗಂಟೆಗಳ ಕಾಲ ಹೊಗೆಯನ್ನು ಬಿಡುಗಡೆ ಮಾಡಬಹುದು. ಇದು ಯಾವುದೇ ಹಾನಿ ಮಾಡುವುದಿಲ್ಲ.

ಸಂಪಾದಕರ ನಿಲುವು

* ಇದು ಭಾರತದ ಅತ್ಯಾಧುನಿಕ ಸಂಸತ್ತಿನ ಭದ್ರತೆಗೆ ಸವಾಲೆಸೆದ ಘಟನೆಯಾಗಿದೆ ! ಬಣ್ಣದ ಹೊಗೆಯ ಬದಲು ವಿಷಕಾರಿ ಹೊಗೆಯನ್ನು ತಂದಿದ್ದರೆ ಏನಾಗುತ್ತಿತ್ತು ? ಇದನ್ನು ಉಹಿಸಲಾಗವುದು !

* ಸಂಸತ್ತಿನ ಮೇಲಿನ ದಾಳಿಯ 22 ನೇ ವಾರ್ಷಿಕೋತ್ಸವದಂದು ಇಂತಹ ಘಟನೆ ಸಂಭವಿಸಿದ್ದು ಇದು ಭದ್ರತಾ ಪಡೆಗಳಿಗೆ ನಾಚಿಕೆಗೇಡು !