ರಾಜ್ಯದಲ್ಲಿ ಹಿಂದೂಗಳನ್ನೇ ಗುರಿಯಾಗಿಸಲಾಗುತ್ತಿದೆ – ಚಿಂತಕ ಶ್ರೀ. ಚಕ್ರವರ್ತಿ ಸೂಲಿಬೆಲೆ

ಮೇವಾತ್, ದೆಹಲಿ ಮತ್ತು ಮಣಿಪುರದ ಹಿಂಸಾಚಾರದಲ್ಲಿ ಹಿಂದೂಗಳ ಹತ್ಯೆ ಖಂಡಿಸಿ ಮತ್ತು ಹಿಂದೂಗಳಿಗೆ ನ್ಯಾಯ ನೀಡಲು ಆಗ್ರಹಿಸಿ ಬೆಂಗಳೂರಿನಲ್ಲಿ ಹಿಂದೂ ಸಂಘಟನೆಗಳ ಪ್ರತಿಭಟನೆ

(ಎಡದಿಂದ) ಶ್ರೀ. ವಿಕ್ರಮ ಶೆಟ್ಟಿ, ಶ್ರೀ. ಸಂತೋಷ್ ಕೆಂಚಾಂಬ, ಶ್ರೀ. ರಾಮಕೃಷ್ಣಪ್ಪ, ಶ್ರೀ. ಚಕ್ರವರ್ತಿ ಸೂಲಿಬೆಲೆ, ನ್ಯಾಯವಾದಿ ದೊರೆರಾಜು, ಶ್ರೀ. ಪ್ರವೀಣ ಮಾನೆ, ಶ್ರೀ. ಶಿವಪ್ರಸಾದ ಹಾಗೂ ಪೂರ್ಣಿಮಾ ಬಾರಿಮನಿ

ಬೆಂಗಳೂರು : ‘ಹರಿಯಾಣದ ಮೇವಾತ ನುಹ್‌ನಲ್ಲಿ ಸಾವಿರಾರು ಹಿಂದೂ ಭಕ್ತರ ಮೇಲೆ ಆಧುನಿಕ ಶಸ್ತ್ರದಿಂದ ಮತಾಂಧರು ದಾಳಿ ಮಾಡಿ, ೭ ಹಿಂದೂಗಳ ಹತ್ಯೆ, ನೂರಾರು ಹಿಂದೂಗಳ ವಾಹನವನ್ನು ಸುಟ್ಟು ಹಾಕುವ ಮೂಲಕ ವ್ಯವಸ್ಥಿತ ಭಯೋತ್ಪಾದನಾ ದಾಳಿ ಮಾಡಿದರು. ರಾಜ್ಯದಲ್ಲಿ ಹಿಂದೂಗಳಿಗೆ ಅನ್ಯಾಯ ಮಾಡಲಾಗುತ್ತಿದೆ. ಪ್ರಸ್ತುತ ಹಿಂದೂಗಳನ್ನೇ ಗುರಿಯಾಗಿಸಿ ಅವರ ಮೇಲೆ ಸುಳ್ಳು ದೂರುಗಳನ್ನು ದಾಖಲಿಸಿಕೊಂಡು ಬಂಧನ ಮಾಡಲಾಗುತ್ತಿದೆ’, ಎಂದು ಚಿಂತಕ ಶ್ರೀ. ಚಕ್ರವರ್ತಿ ಸೂಲಿಬೆಲೆಯವರು ಹೇಳಿದ್ದಾರೆ. ಅವರು ಆಗಸ್ಟ್ ೨೧ ರಂದು ‘ಫ್ರೀಡಂ ಪಾರ್ಕ್’ನಲ್ಲಿ ಹಿಂದೂ ಸಂಘಟನೆಗಳು ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ನಡೆದ ಪ್ರತಿಭಟನೆಯ ವೇಳೆ ಮಾತನಾಡುತ್ತಿದ್ದರು.

ಈ ವೇಳೆ ಚಿಂತಕ ಶ್ರೀ. ಚಕ್ರವರ್ತಿ ಸೂಲಿಬೆಲೆ, ರಾಷ್ಟ್ರ ಧರ್ಮ ಸಂಘಟನೆಯ ಶ್ರೀ. ಸಂತೋಷ ಕೆಂಚಾಂಬಾ, ಹಿಂದೂ ಜನಜಾಗೃತಿ ಸಮಿತಿ ಶ್ರೀ. ಮೋಹನ ಗೌಡ, ಹಿಂದವೀ ಜಟ್ಕಾ ಮೀಟ್ ನ ಶ್ರೀ. ಮುನೇಗೌಡ, ಶ್ರೀ. ಶಿವಪ್ರಸಾದ್, ಹಿಂದೂ ರಾಷ್ಟ್ರ ರಕ್ಷಣಾ ಪಡೆಯ ಅಧ್ಯಕ್ಷ ಶ್ರೀ. ರಾಮಕೃಷ್ಣಪ್ಪ, ಶಿವಗರ್ಜನೆ ಸೇನೆ ಅಧ್ಯಕ್ಷ ಶ್ರೀ. ಪ್ರವೀಣ ಮಾನೆ, ರಾಷ್ಟ್ರ ರಕ್ಷಣಾ ಪಡೆಯ ಪೂರ್ಣಿಮಾ ಬಾರಿಮನಿ, ರಾಷ್ಟ್ರೀಯ ಹಿಂದೂ ಪರಿಷದ್ ಅಧ್ಯಕ್ಷ ಶ್ರೀ. ವಿಕ್ರಮ ಶೆಟ್ಟಿ, ನ್ಯಾಯವಾದಿ ದೊರೆರಾಜು ಹಾಗೂ ವಿವಿಧ ಹಿಂದೂ ಸಂಘಟನೆಗಳ ಮುಖಂಡರು ಸೇರಿದಂತೆ ೪೦೦ ಕ್ಕೂ ಅಧಿಕ ಹಿಂದೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪುನಿತ್ ಕೆರೆಹಳ್ಳಿ ಇವರ ಮೇಲೆ ಹಾಕಿದ ಗೂಂಡಾ ಕಾಯಿದೇ ರದ್ದು ಮಾಡಿ ! – ಪೂರ್ಣಿಮಾ ಬಾರಿಮನಿ, ರಾಷ್ಟ್ರ ರಕ್ಷಣಾ ಪಡೆ

ರಾಷ್ಟ್ರ ರಕ್ಷಣಾ ಪಡೆಯ ಪುನಿತ್ ಕೆರೆಹಳ್ಳಿಯವರು ಅನಾಥ ಮಕ್ಕಳ ಶಿಕ್ಷಣಕ್ಕಾಗಿ ಸಹಾಯ ಮಾಡುತ್ತಿದ್ದರು, ೫ ಜನ ಕ್ಯಾನ್ಸರ್ ಪೀಡಿತರ ಚಿಕಿತ್ಸೆಯ ಖರ್ಚನ್ನು ಅವರೇ ನೋಡಿಕೊಳ್ಳುತ್ತಿದ್ದರು. ಅವರ ಮೇಲೆ ದ್ವೇಷದಿಂದ ಗುಂಡಾ ಕಾಯಿದೆಯನ್ನು ಹಾಕಿರುವುದು ಖಂಡನೀಯವಾಗಿದೆ. ಅವರ ಮೇಲಿನ ಗುಂಡಾ ಕಾಯಿದೆಯನ್ನು ರದ್ದು ಮಾಡಿ, ಅವರ ಬಿಡುಗಡೆ ಮಾಡಬೇಕು.

ಮಣಿಪುರ ದಂಗೆಕೋರರಿಗೆ ಯುಎಪಿಎ ಕಾಯಿದೆಯಡಿ ಅಪರಾಧ ದಾಖಲಿಸಿ ! ಶ್ರೀ. ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಮಣಿಪುರದಲ್ಲಿ ನಡೆದ ಗಲಭೆಯಲ್ಲಿ ೧೪೧ ಜನರ ಹತ್ಯೆ ನಡೆದಿದ್ದು, ಅನೇಕ ಹಿಂದೂಗಳ ಮನೆ, ದೇವಸ್ಥಾನಗಳನ್ನು ಸುಟ್ಟು ಹಾಕಲಾಗಿದ್ದು, ಜೀವಭಯದಿಂದ ಮೈತೇಯಿ ಸಮುದಾಯದವರು ಗ್ರಾಮ ತೊರೆದು ಪಲಾಯನ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ದಂಗೆಯಲ್ಲಿ ಭಾಗಿಯಾದ ರೋಹಿಂಗ್ಯಾ, ಬಾಂಗ್ಲಾದೇಶಿ ಮುಸಲ್ಮಾನರನ್ನು ಬಂಧಿಸಿ ದೇಶದಿಂದ ಹೊರದಬ್ಬಬೇಕು. ಗಲಭೆಕೋರರ ಮೇಲೆ ಯುಎಪಿಎ, ‘ಸಂಘಟಿತ ಅಪರಾಧ’, ‘ರಾಷ್ಟ್ರೀಯ ಭದ್ರತಾ ಕಾಯ್ದೆ‘ ಅಡಿಯಲ್ಲಿ ಅಪರಾಧಗಳನ್ನು ದಾಖಲಿಸಬೇಕು‘ ಎಂದು ಒತ್ತಾಯಿಸಿದರು.