ದೇವಾಲಯಗಳು, ಮಠಗಳು ಮುಂತಾದ ಸ್ಥಳಗಳಿಂದ ೫ ಕಿ.ಮೀ ಸುತ್ತಲಿನ ಪ್ರದೇಶದಲ್ಲಿ ಗೋಮಾಂಸ ಖರೀದಿ, ಮಾರಾಟವನ್ನು ನಿಷೇಧಿಸಲಾಗುವುದು !

ಅಸ್ಸಾಂ ಸರಕಾರದ ಹೊಸ ಗೋ ಸಂರಕ್ಷಣಾ ಮಸೂದೆ

ಅಗತ್ಯ ಪ್ರಮಾಣಪತ್ರವನ್ನು ಪಡೆಯದೆ ದನಗಳ ಹತ್ಯೆ ಮಾಡುವಂತಿಲ್ಲ !

ಅಸ್ಸಾಂ ರಾಜ್ಯವು ಇಂತಹ ಕಾನೂನನ್ನು ಮಾಡಬಲ್ಲದು ಎಂದಾದರೆ ಕೇಂದ್ರ ಸರಕಾರ ಮತ್ತು ಇತರ ರಾಜ್ಯಗಳು ಸಹ ಇದನ್ನು ಮಾಡಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !

ಗೌಹಾಟಿ (ಅಸ್ಸಾಂ) – ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಅವರ ಸರಕಾರವು ಹೊಸ ‘ಗೋ ಸಂರಕ್ಷಣಾ ಮಸೂದೆ’ಯನ್ನು ವಿಧಾನಸಭೆಯಲ್ಲಿ ಮಂಡಿಸಿದೆ. ಹಸುಗಳನ್ನು ರಕ್ಷಿಸುವ ಈ ಮಸೂದೆಯ ಪ್ರಕಾರ, ಹಿಂದೂಗಳು, ಜೈನರು, ಸಿಖ್ಖರು ಮತ್ತು ಗೋಮಾಂಸ ಸೇವಿಸದವರು ವಾಸಿಸುವ ಪ್ರದೇಶಗಳಲ್ಲಿ ಗೋಮಾಂಸ ಅಥವಾ ಗೋಮಾಂಸ ಉತ್ಪನ್ನಗಳ ಖರೀದಿ ಮತ್ತು ಮಾರಾಟವನ್ನು ನಿಷೇಧಿಸಲಾಗುವುದು. ಯಾವುದೇ ದೇವಾಲಯ, ಮಠ ಇತ್ಯಾದಿಗಳ ೫ ಕಿ.ಮೀ ವ್ಯಾಪ್ತಿಯಲ್ಲಿ ಈ ನಿಷೇಧವು ಜಾರಿಯಲ್ಲಿರುತ್ತದೆ. ಕೆಲವು ಧಾರ್ಮಿಕ ಹಬ್ಬಗಳಲ್ಲಿ ಇದಕ್ಕೆ ರಿಯಾಯಿತಿ ನೀಡಬಹುದು.

 

ಮುಖ್ಯಮಂತ್ರಿ ಸರಮಾ ತಮ್ಮ ಮಾತನ್ನು ಮುಂದುವರೆಸುತ್ತಾ,

೧. ದನಗಳ ಹತ್ಯೆ ಮತ್ತು ಅಕ್ರಮ ಕಳ್ಳಸಾಗಣೆಯನ್ನು ನಿಯಂತ್ರಿಸುವುದೇ ಈ ಮಸೂದೆಯ ಉದ್ದೇಶವಾಗಿದೆ. ಈ ಮಸೂದೆಯು ಅಂಗೀಕೃತವಾದಲ್ಲಿ, ಅದು ಅಸ್ಸಾಂ ಗೋ ಸಂರಕ್ಷಣಾ ಕಾಯ್ದೆ ೧೯೫೦ ರ ಸ್ಥಾನದಲ್ಲಿ ಬರಲಿದೆ. ಹಿಂದಿನ ಕಾನೂನು ಹತ್ಯೆ, ಪ್ರಾಣಿಗಳ ಸೇವನೆ ಮತ್ತು ಸಾರಿಗೆಯನ್ನು ನಿಯಂತ್ರಿಸಲು ಸಾಕಷ್ಟು ಕಾನೂನು ನಿಬಂಧನೆಗಳನ್ನು ಹೊಂದಿರಲಿಲ್ಲ. ಈಗ, ಹೊಸ ಮಸೂದೆ ಅಂಗೀಕಾರವಾದರೆ, ಹಿಂದಿನ ಕಾನೂನನ್ನು ರದ್ದುಗೊಳಿಸಲಾಗುವುದು.

೨. ಕೆಲವು ಸ್ಥಳಗಳನ್ನು ಹೊರತುಪಡಿಸಿ ಇತರೆಡೆ ಎಲ್ಲಿಯೂ ಗೋಮಾಂಸ ಖರೀದಿಯನ್ನು ಮತ್ತು ಮಾರಾಟವನ್ನು ನಿಷೇಧಿಸುವುದೇ ಈ ಕಾನೂನಿನ ಉದ್ದೇಶವಾಗಿದೆ. ದೇಶದಲ್ಲಿ ಅನೇಕ ರಾಜ್ಯಗಳು ತಮ್ಮದೇ ಆದ ಹತ್ಯೆ ವಿರೋಧಿ ಕಾನೂನುಗಳನ್ನು ಹೊಂದಿವೆ; ಆದರೆ, ಗೋಮಾಂಸ ಮತ್ತು ಗೋಮಾಂಸ ಉತ್ಪನ್ನಗಳನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಅಸ್ಸಾಂನ ಪ್ರಸ್ತಾಪದಂತೆ ನಿರ್ದಿಷ್ಟ ಪ್ರದೇಶಗಳನ್ನು ಹೊರತುಪಡಿಸಿಲ್ಲ.

೩. ಈ ಮಸೂದೆಯ ಪ್ರಕಾರ, ನೋಂದಾಯಿತ ಪಶುವೈದ್ಯ ಅಧಿಕಾರಿಯಿಂದ ಅಗತ್ಯ ಪ್ರಮಾಣಪತ್ರವನ್ನು ಪಡೆಯದೆ ದನಗಳನ್ನು ಕೊಲ್ಲಲಾಗುವುದಿಲ್ಲ. ದನಕರುಗಳು ೧೪ ವರ್ಷಕ್ಕಿಂತ ಮೇಲ್ಪಟ್ಟಿದ್ದರೆ ಮಾತ್ರ ಅಧಿಕಾರಿಗಳು ಪ್ರಮಾಣಪತ್ರವನ್ನು ನೀಡಬಹುದು. ಒಂದುವೇಳೆ ಹಸು ಅಥವಾ ಕರು ದಿವ್ಯಾಂಗ(ಅಂಗವಿಕಲ)ವಾಗಿದ್ದರೆ, ಅವುಗಳನ್ನು ಕೊಲ್ಲಬಹುದು. ಜಾನುವಾರುಗಳ ಹತ್ಯೆಗೆ ಪರವಾನಗಿ ಪಡೆದ ಕಸಾಯಿಖಾನೆಗಳಿಗೆ ಮಾತ್ರ ಅವಕಾಶವಿರುತ್ತದೆ.

೪. ಈ ಮಸೂದೆಯ ಪ್ರಕಾರ, ತಪ್ಪಿತಸ್ಥರೆಂದು ಕಂಡುಬಂದಲ್ಲಿ ಕನಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ೫ ಲಕ್ಷ ರೂಪಾಯಿವರೆಗೆ ದಂಡ ವಿಧಿಸಬಹುದು. ಯಾರಾದರೂ ಎರಡನೇ ಬಾರಿಗೆ ತಪ್ಪಿತಸ್ಥರೆಂದು ಕಂಡುಬಂದಲ್ಲಿ, ಅವರಿಗೆ ಎರಡು ಪಟ್ಟು ಶಿಕ್ಷೆಯಾಗುತ್ತದೆ; ಎಂದು ಹೇಳಿದರು

‘ಮುಸಲ್ಮಾನರನ್ನು ಗುರಿಯಾಗಿಸುವ ಕಾನೂನು !’(ಅಂತೆ) – ಕಾಂಗ್ರೆಸ್

ಕಾಂಗ್ರೆಸ್ ಜಾತ್ಯತೀತ ಭಾರತದ ರಾಜಕೀಯ ಪಕ್ಷವೋ ಅಥವಾ ಇಸ್ಲಾಮಿಕ್ ದೇಶಗಳ ಮುಸಲ್ಮಾನರ ಪಕ್ಷವೋ ? ಪ್ರತಿ ಬಾರಿಯೂ ಮುಸಲ್ಮಾನರ ಬಗ್ಗೆ ವಿಚಾರ ಮಾಡುವ ಈ ಪಕ್ಷವನ್ನು ಬಹುಸಂಖ್ಯಾತ ಹಿಂದೂಗಳು ಅಧಿಕಾರದಿಂದ ಉಚ್ಚಾಟಿಸಿದ ನಂತರವೂ ಹಿಂದೂ ವಿರೋಧಿ ನಿಲುವನ್ನು ತೆಗೆದುಕೊಳ್ಳುವ ಕಾಂಗ್ರೆಸ್ ಪ್ರಯತ್ನವೆಂದರೆ ಆತ್ಮಹತ್ಯೆ ಎಂಬುದನ್ನು ನೆನಪಿನಲ್ಲಿಡಬೇಕು !

ಈ ಮಸೂದೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ವಿರೋಧ ಪಕ್ಷದ ನಾಯಕ ದೆಬಾಬ್ರತ್ ಸೈಕಿಯಾ ಇವರು, ಮುಸಲ್ಮಾನರನ್ನು ಗುರಿಯಾಗಿಸಲು ಕಾನೂನನ್ನು ಜಾರಿಗೆ ತರಲಾಗುತ್ತಿದೆ ಈ ಮಸೂದೆಯನ್ನು ಅಧ್ಯಯನ ಮಾಡುವ ಅವಶ್ಯಕತೆಯಿದೆ. ಇದರಲ್ಲಿ ೫ ಕಿ.ಮೀ ವ್ಯಾಪ್ತಿಯ ಏರ್ಪಾಡು ಹಾಸ್ಯಾಸ್ಪದವಾಗಿದೆ. ಯಾರು ಎಲ್ಲಿ ಬೇಕಾದರೂ ದೇವಾಲಯವನ್ನು ನಿರ್ಮಿಸಬಹುದು; ಆದ್ದರಿಂದ ಈ ಮಸೂದೆಯು ಬಹಳ ಅಸ್ಪಷ್ಟವಾಗಿದೆ. ಆದ್ದರಿಂದ ಇದು ಜನಾಂಗೀಯ ಉದ್ವಿಗ್ನತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.