ಶ್ರೀ ಗುರುನಾನಕರ ಜಯಂತಿ ನಿಮಿತ್ತ (ನವೆಂಬರ್ ೩೦)

ಶ್ರೀ ಗುರುನಾನಕರಿಗೆ ಈಶ್ವರನ ಮೇಲಿದ್ದ ಭಕ್ತಿ

ಗುರುನಾನಕರು ಸಿಕ್ಖ್ ಪಂಥದ ಸ್ಥಾಪಕರಾಗಿದ್ದಾರೆ. ನಮ್ಮ ಶರೀರವು ಒಂದು ಸುಂದರವಾದ ಹೊಲ. ನಮ್ಮ ಮನಸ್ಸು ರೈತ. ಈಶ್ವರನ ನಾಮವೆಂಬ ಬೀಜವನ್ನು ಈ ಹೊಲದಲ್ಲಿ ಬಿತ್ತಬೇಕು. ಪ್ರೇಮದಿಂದಲೇ ಈ ಬೀಜಗಳು ಮೊಳಕೆಯೊಡೆಯುತ್ತವೆ, ಅರಳುತ್ತವೆ ಹಾಗೂ ಫಲ ನೀಡುತ್ತವೆ. ನನ್ನ ಹೊಲದಿಂದ ನಾನು ಈ ರೀತಿಯಲ್ಲಿ ನನ್ನ ಕುಟುಂಬಕ್ಕೆ ಸಾಕಷ್ಟು ಆದಾಯ ದೊರಕುವಷ್ಟು ಫಸಲು ತೆಗೆಯುತ್ತೇನೆ’ ಇವು ಗುರುನಾನಕರ ಬೋಧನೆಯಾಗಿದೆ.

ಪಂಜಾಬಿನ ತಳವಡೆ ಎಂಬಲ್ಲಿ ಕಾಳೂ ಎಂಬ ಓರ್ವ ರೈತ ಮತ್ತು ಅವನ ಹೆಂಡತಿ ವಾಸಿಸುತ್ತಿದ್ದರು. ಆ ರೈತ ದಂಪತಿಗೆ ಒಬ್ಬ ಮಗ ಹುಟ್ಟಿದನು. ಅವನಿಗೆ ‘ನಾನಕ’ ಎಂದು ಹೆಸರಿಡಲಾಯಿತು. ನಾನಕನು ಚಿಕ್ಕಂದಿನಿಂದಲೇ ಧಾರ್ಮಿಕ ವೃತ್ತಿಯವನಾಗಿದ್ದನು. ನಾನಕನು ಸ್ವಲ್ಪ ದೊಡ್ಡವನಾದಾಗ ಅವನ ತಂದೆ ಅವನನ್ನು ಶಾಲೆಗೆ ಸೇರಿಸಿದರು. ಶಾಲೆಯ ನಂತರ ಅವನು ದನಕರುಗಳನ್ನು ಮೇಯಿಸಲು ಅರಣ್ಯಕ್ಕೆ ಕರೆದುಕೊಂಡು ಹೋಗುತ್ತಿದ್ದನು. ಅಲ್ಲಿ ಹೋಗಿ ಅವನು ದೇವರ ನಾಮಸ್ಮರಣೆ ಮಾಡುತ್ತಿದ್ದನು.

ಒಂದು ದಿನ ಅವನು ದೇವರಿಗೆ ಪ್ರಾರ್ಥನೆ ಮಾಡುತ್ತಿದ್ದಾಗ ಓರ್ವ ವೃದ್ಧ ರೈತನು ಅಲ್ಲಿಗೆ ಬಂದನು. ಅವನು ನಾನಕರಿಗೆ ‘ನಾನು ತೀರ್ಥಯಾತ್ರೆಗೆ ಹೋಗುತ್ತಿದ್ದೇನೆ. ನಾನು ೪ ದಿನಗಳಲ್ಲಿ ಮರಳಿ ಬರುತ್ತೇನೆ. ಅಲ್ಲಿಯವರೆಗೆ ನನ್ನ ಹೊಲವನ್ನು ಕಾಯುತ್ತಿರು, ನಾನು ನಿನಗೆ ಚೀಲತುಂಬಿ ಗೋಧಿ ಕೊಡುತ್ತೇನೆ. ನನ್ನ ಹೊಲದಲ್ಲಿ ಹತ್ತು ಚೀಲ ಗೋಧಿ ಬೆಳೆಯುತ್ತದೆ’ ಎಂದು ಹೇಳಿದನು. ನಾನಕನು ಒಪ್ಪಿಕೊಂಡನು. ಆ ರೈತನು ಆನಂದದಿಂದ ತೀರ್ಥಯಾತ್ರೆಗೆ ಹೊರಟನು. ನಾನಕನು ಅವನ ಹೊಲದ ದಿಬ್ಬದ ಮೇಲೆ ಕುಳಿತನು. ಹೊಲದಲ್ಲಿ ಗೋಧಿಯ ಸಾಕಷ್ಟು ತೆನೆಗಳು ಬಂದಿದ್ದವು. ನೋಡುತ್ತಿದ್ದಂತೆಯೇ ಹಕ್ಕಿಗಳು ಗುಂಪು ಗುಂಪಾಗಿ ಅಲ್ಲಿ ಬಂದವು. ಆ ಹಕ್ಕಿಗಳು ಗೋಧಿಯ ಕಾಳುಗಳನ್ನು ತಿನ್ನತೊಡಗಿದವು. ಆಗ ನಾನಕರು ದೇವರಿಗೆ ‘ದೇವರೇ, ರೈತನ ಗೋಧಿಯ ರಕ್ಷಣೆ ಮಾಡು. ಹಕ್ಕಿಗಳಿಗೆ ನಿನ್ನ ಕಾಳುಗಳನ್ನು ತಿನ್ನಿಸು’ ಎಂದು ಪ್ರಾರ್ಥನೆ ಮಾಡಿದರು. ೪ ದಿನಗಳವರೆಗೆ ಹೀಗೆಯೇ ನಡೆಯಿತು. ಹಕ್ಕಿಗಳು ಪ್ರತಿದಿನ ಕಾಳು ತಿನ್ನುತ್ತಿದ್ದವು. ನಾಲ್ಕು ದಿನಗಳ ನಂತರ ರೈತನು ಮರಳಿ ಬಂದನು. ಹೊಲದಲ್ಲಿ ಬೆಳೆಯ ಮೇಲಿನ ಹಕ್ಕಿಗಳ ಗುಂಪನ್ನು ನೋಡಿ ಅವನು ಕೋಪಗೊಂಡನು. ಆಗ ನಾನಕರು ‘ಅಜ್ಜ, ಕೋಪಗೊಳ್ಳದಿರಿ. ಹೊಲದಲ್ಲಿ ಪೈರು ಕೊಯ್ದು, ಕಾಳಿನ ಎಣಿಕೆ ಮಾಡಿ. ನಾನು ದೇವರ ಕಾಳನ್ನು ಹಕ್ಕಿಗಳಿಗೆ ತಿನಿಸಿದ್ದೇನೆ. ನಿಮ್ಮ ಕಾಳು ಹಾಗೆ ಇದೆ’, ಎಂದು ಹೇಳಿದರು. ಇದನ್ನು ಕೇಳಿ ರೈತನು ಹೊಲದ ಬೆಳೆಯನ್ನು ಕೊಯ್ದು. ಕಾಳುಗಳನ್ನು ಬೇರ್ಪಡಿಸಿ, ಅದನ್ನು ಅಳೆದು ನೋಡಿದಾಗ ಗೋಧಿಯ ಹನ್ನೊಂದು ಚೀಲಗಳು ತುಂಬಿದ್ದವು. ದೇವರ ಈ ಕೃಪೆಯನ್ನು ಕಂಡು ರೈತನು ನಾನಕನ ಕಾಲಿಗೆ ಬಿದ್ದನು.

ಇದರಿಂದ ಪ್ರಾರ್ಥನೆಯ ಮಹತ್ವವು ತಿಳಿಯುತ್ತದೆ. ಮನಸ್ಸಿನಿಂದ ಆರ್ತತೆಯಿಂದ ಪ್ರಾರ್ಥನೆ ಮಾಡಿದರೆ ಈಶ್ವರನು ಧಾವಿಸಿ ಬರುತ್ತಾನೆ; ಆದುದರಿಂದ ಸತತ ದೇವರ ನಾಮಸ್ಮರಣೆ, ಪ್ರಾರ್ಥನೆ ಮಾಡಬೇಕು ಹಾಗೂ ಕೃತಜ್ಞತೆಯನ್ನು ಸಲ್ಲಿಸಬೇಕು. ಪ್ರಾರ್ಥನೆಯಲ್ಲಿ ಸಾಕಷ್ಟು ಬಲವಿದೆ.

(ಆಧಾರ : www.hindujagruti.org ಜಾಲತಾಣ)