ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ; 5 ರಾಜ್ಯಗಳಲ್ಲಿ ಪ್ರಶ್ನೆಪತ್ರಿಕೆ ಮಾರಾಟ: ಮಹಾರಾಷ್ಟ್ರದಲ್ಲೇ ಅತಿ ಹೆಚ್ಚು ಖರೀದಿ!

ಪ್ರಶ್ನೆಪತ್ರಿಕೆ ಖರೀದಿಸಿದ ಪೋಷಕರ ಪಟ್ಟಿ ಸಿದ್ಧ!

ಮುಂಬಯಿ – ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಮುಖ್ಯ ಕೇಂದ್ರಬಿಂದು ಮಹಾರಾಷ್ಟ್ರ ಎಂಬುದು ಕೇಂದ್ರೀಯ ತನಿಖಾ ದಳದ (‘ಸಿಬಿಐ’ನ) ತನಿಖೆಯಿಂದ ಸ್ಪಷ್ಟವಾಗಿದೆ. ಮಹಾರಾಷ್ಟ್ರದಿಂದ ರಾಜಸ್ಥಾನ ಹಾಗೂ ಇತರ 5 ರಾಜ್ಯಗಳಿಗೆ ಈ ಜಾಲ ಹರಡಿದ್ದು, ಸೋರಿಕೆಯಾದ ಪ್ರಶ್ನೆಪತ್ರಿಕೆ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಮಾರಾಟವಾಗಿದ್ದು ರಾಜಸ್ಥಾನದಲ್ಲಿ ಕೂಡ ಹೆಚ್ಚು ಮಾರಾಟ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಜನರನ್ನು ಸದ್ಯ ಬಂಧಿಸಲಾಗಿದ್ದು, 7 ಆರೋಪಿಗಳು ಮಹಾರಾಷ್ಟ್ರದವರಾಗಿದ್ದಾರೆ.

ಹಣ ವರ್ಗಾವಣೆ ಮಾಡಿದ ಪೋಷಕರ ವಿಚಾರಣೆ ಆರಂಭವಾಗಿದ್ದು, ಮೇ 21 ರ ರಾತ್ರಿಯಿಂದ ‘ಸಿಬಿಐ’ ಮಹಾರಾಷ್ಟ್ರದಲ್ಲಿ ದೊಡ್ಡ ಮಟ್ಟದ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿದೆ. ಕೆಲವು ಪೋಷಕರು ತಾವೇ ಪ್ರಶ್ನೆಪತ್ರಿಕೆಯನ್ನು ಖರೀದಿಸಿ, ಅದನ್ನು ಇತರ ವಿದ್ಯಾರ್ಥಿಗಳಿಗೆ ಮಾರಾಟ ಮಾಡುವ ಮೂಲಕ ದೊಡ್ಡ ಜಾಲವನ್ನೇ ಸೃಷ್ಟಿಸಿದ್ದಾರೆ. ಇದರಿಂದಾಗಿ ನಿಖರವಾಗಿ ಎಷ್ಟು ವಿದ್ಯಾರ್ಥಿಗಳಿಗೆ ಈ ಪ್ರಶ್ನೆಪತ್ರಿಕೆ ತಲುಪಿದೆ? ಎಂಬ ನಿಖರವಾದ ಸಂಖ್ಯೆ ಪತ್ತೆಹಚ್ಚುವುದು ತನಿಖಾ ಸಂಸ್ಥೆಗೆ ದೊಡ್ಡ ಸವಾಲಾಗಿದೆ. ಮುಖ್ಯ ಶಂಕಿತರಾದ ಪ್ರಾ. ಶಿವರಾಜ ಮೋಟೆಗಾಂವ್ಕರ್, ಪಿ.ವಿ.ಕುಲಕರ್ಣಿ ಮತ್ತು ಪುಣೆಯ ಅವರ ಸಹವರ್ತಿ ಮನೀಷಾ ವಾಘಮಾರೆ ಅವರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ ಎಲ್ಲಾ ಪೋಷಕರ ಪಟ್ಟಿಯನ್ನು ‘ಸಿಬಿಐ’ ಸಿದ್ಧಪಡಿಸಿದೆ. ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ ಮುಖ್ಯ ಸೂತ್ರಧಾರನನ್ನು ಬಂಧಿಸಿದ ನಂತರ, ‘ಸಿಬಿಐ’ನ ಮೂರು ವಿಶೇಷ ತಂಡಗಳು ಪ್ರಶ್ನೆಪತ್ರಿಕೆ ಖರೀದಿಸಿದ ಪೋಷಕರು ಮತ್ತು ವಿದ್ಯಾರ್ಥಿಗಳನ್ನು ಪತ್ತೆಹಚ್ಚುತ್ತಿವೆ.

ಮಹಾರಾಷ್ಟ್ರದ ನಂತರ ಶೀಘ್ರದಲ್ಲೇ ಇತರ ರಾಜ್ಯಗಳ ಮೇಲೂ ದಾಳಿ ನಡೆಸಲಾಗುವುದು. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (‘ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ’) ಒಳಗಿನ ನೌಕರರನ್ನು ಹೊರತುಪಡಿಸಿ, ಹೊರಗಿನ ಕೆಲವು ಪ್ರಭಾವಿ ವ್ಯಕ್ತಿಗಳೂ ಕೂಡ ಈ ಜಾಲದಲ್ಲಿ ಭಾಗಿಯಾಗಿರುವ ಶಂಕೆಯಿದೆ. ಶಂಕಿತರ ವಿರುದ್ಧ ಪುರಾವೆಗಳನ್ನು ಸಂಗ್ರಹಿಸಲು ‘ಸಿಬಿಐ’ನ ಎರಡು ತಂಡಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿವೆ. ಜೈಪುರದಲ್ಲಿ ಮೇ 21 ರಂದು ಕಾಂಗ್ರೆಸ್ ಕಾರ್ಯಕರ್ತರು ರಸ್ತೆಗಿಳಿದು ‘ನೀಟ್’ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದರು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.