“ನಮ್ಮದು ಗಾಂಧೀಜಿಯವರ ಹಿಂದುತ್ವ, ಬಿಜೆಪಿಯದು ಗೋಡ್ಸೆಯ ಹಿಂದುತ್ವ!” – Siddaramaiya

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಾಸ್ಯಾಸ್ಪದ ಹೇಳಿಕೆ !

ಮುಖ್ಯಮಂತ್ರಿ ಸಿದ್ದರಾಮಯ್ಯ

ದಾವಣಗೆರೆ (ಕರ್ನಾಟಕ) – “ನಮ್ಮದು ಮಹಾತ್ಮ ಗಾಂಧಿಯವರ ಹಿಂದುತ್ವವಾದರೆ, ಬಿಜೆಪಿಯದು ನಥೂರಾಮ್ ಗೋಡ್ಸೆಯ ಹಿಂದುತ್ವ. ನಾವು ಗಾಂಧೀಜಿಯವರ ಹಿಂದುತ್ವದ ಆಧಾರದ ಮೇಲೆ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತೇವೆ, ಆದರೆ ಬಿಜೆಪಿ ಗೋಡ್ಸೆಯ ಹಿಂದುತ್ವದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. (ಕಾಂಗ್ರೆಸ್ ಗಾಂಧಿಯವರ ಕಥಿತ ಹಿಂದುತ್ವವನ್ನು ಪುರಸ್ಕರಿಸಿತು; ಹಾಗಾಗಿಯೇ ಕೇಂದ್ರದಲ್ಲಿ ಕಾಂಗ್ರೆಸ್‌ನ ೫೫ ವರ್ಷಗಳ ಆಡಳಿತಾವಧಿಯಲ್ಲಿ ಭಾರತ ಎಲ್ಲ ಕ್ಷೇತ್ರಗಳಲ್ಲೂ ಅಧೋಗತಿಗೆ ತಲುಪಿತು ಎಂದು ಹೇಳಿದರೆ ಅದು ತಪ್ಪಾಗಲಾರದು! – ಸಂಪಾದಕ). ಸಿದ್ದರಾಮಯ್ಯ ಅವರು ದಾವಣಗೆರೆಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದರು.

ಬಿಜೆಪಿ ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬರುತ್ತದೆ ಮತ್ತು ಭ್ರಷ್ಟಾಚಾರ ಮಾಡುತ್ತದೆ !

ಸಿದ್ದರಾಮಯ್ಯ ಅವರು ಮಾತನಾಡುತ್ತಾ, “ಬಿಜೆಪಿಯವರು ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬರುತ್ತಾರೆ. ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಕೆಲಸ ಮಾಡುವುದಿಲ್ಲ; ಕೇವಲ ಲೂಟಿ ಮಾಡುತ್ತಾರೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಅವರು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಕಾಂಗ್ರೆಸ್. ಬಿಜೆಪಿಯವರು ದೇಶಕ್ಕಾಗಿ ಎಂದಿಗೂ ಜೈಲಿಗೆ ಹೋದವರಲ್ಲ. ಭ್ರಷ್ಟಾಚಾರ ಮಾಡುವುದರಲ್ಲಿ ಅವರು ನಂಬರ್ ೧ ಸ್ಥಾನದಲ್ಲಿದ್ದಾರೆ. ರಾಜ್ಯದ ಜನರ ಪೂರ್ಣ ಆಶೀರ್ವಾದ ಪಡೆದು ಅವರು ಎಂದಿಗೂ ಅಧಿಕಾರಕ್ಕೆ ಬಂದಿಲ್ಲ. ಹಿಂಬಾಗಿಲಿನಿಂದ ‘ಆಪರೇಷನ್ ಕಮಲ’ (ಶಾಸಕರನ್ನು ಪಕ್ಷದಿಂದ ಒಡೆದು) ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ನಾವು ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇವೆ,” ಎಂದರು. (ಕಾಂಗ್ರೆಸ್‌ನ ಅಭಿವೃದ್ಧಿ ಎಂದರೆ ಮುಸ್ಲಿಮರ ಮೇಲೆ ಹಣದ ಸುರಿಮಳೆ ಮಾಡುವುದು, ಅವರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುವುದು, ಅಪರಾಧಿ ಮುಸ್ಲಿಮರ ಮೇಲೆ ಕ್ರಮ ಕೈಗೊಳ್ಳದಿರುವುದು ಮತ್ತು ಹಿಂದುತ್ವನಿಷ್ಠರ ಮೇಲೆ ದೌರ್ಜನ್ಯ ಎಸಗುವುದಾಗಿದೆ! – ಸಂಪಾದಕರು).

ಸಿದ್ದರಾಮಯ್ಯ ಅವರ ಪ್ರಶ್ನೆ: “ನಾವೇನು ಹಿಂದೂಗಳಲ್ಲವೇ?”

ಕೇವಲ ಜನ್ಮತಃ ಹಿಂದೂ ಆಗಿರುವುದರಿಂದ ಮತ್ತು ದೇವತೆಗಳ ಹೆಸರನ್ನು ಇಟ್ಟುಕೊಂಡಿರುವುದರಿಂದ ಯಾರೂ ಹಿಂದೂ ಆಗುವುದಿಲ್ಲ. ಹಿಂದೂ ಧರ್ಮಕ್ಕಾಗಿ ತನು, ಮನ, ಧನ ಮತ್ತು ಪ್ರಸಂಗ ಬಂದರೆ ಪ್ರಾಣವನ್ನೇ ಅರ್ಪಿಸುವವನೇ ನಿಜವಾದ ಹಿಂದೂ ಆಗುತ್ತಾನೆ. ಕಾಂಗ್ರೆಸ್ ಆಗಲಿ ಅಥವಾ ಸಿದ್ದರಾಮಯ್ಯನವರಾಗಲಿ ಓರ್ವ ಹಿಂದೂ ಮಾಡುವ ಯಾವುದಾದರೂ ಒಂದು ಕೆಲಸವನ್ನು ಎಂದಾದರೂ ಮಾಡಿದ್ದಾರೆಯೇ? ಇದಕ್ಕೆ ವಿರುದ್ಧವಾಗಿ, ಹಿಂದೂ ಧರ್ಮದ ಮೇಲೆ ಬೇರೆ ಯಾರೂ ಮಾಡದಷ್ಟು ಆಘಾತಗಳನ್ನು ಕಾಂಗ್ರೆಸ್ ಮತ್ತು ಅವರ ನಾಯಕರು ಮಾಡಿದ್ದಾರೆ ಎನ್ನುವುದು ಇತಿಹಾಸ!

ಸಿದ್ದರಾಮಯ್ಯ ಅವರು ಮುಂದುವರಿದು, “ನಾನು ಹಿಂದೂ ಅಲ್ಲವೇ ? ವೇದಿಕೆಯ ಮೇಲಿರುವ ನಾಯಕರು ಹಿಂದೂಗಳಲ್ಲವೇ ? ನನ್ನ ಹೆಸರೇ ಸಿದ್ದರಾಮಯ್ಯ. ಇದರಲ್ಲಿ ಎರಡು ದೇವರುಗಳ ಹೆಸರಿದೆ. ಒಬ್ಬ ಈಶ್ವರ ಮತ್ತು ಇನ್ನೊಬ್ಬ ರಾಮ. ಆದರೂ ನಾವು ಹಿಂದೂಗಳಲ್ಲವೇ?” ಎಂದು ಪ್ರಶ್ನಿಸಿದರು. (ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ನವರು ಹಿಂದೂಗಳಾಗಿದ್ದರೆ, ಅವರು ಹಿಂದೂಗಳ ಮೇಲೆ ದೌರ್ಜನ್ಯ ಮಾಡುತ್ತಿರಲಿಲ್ಲ! – ಸಂಪಾದಕರು).