ಅಂಬರನಾಥ (ಜಿಲ್ಲೆ ಠಾಣೆ): ಇಲ್ಲಿ ಬೀದಿ ನಾಯಿಯ ದಾಳಿಯಿಂದ 11 ವರ್ಷದ ಬಾಲಕಿಗೆ ಗಂಭೀರ ಗಾಯ!

ಅಂಬರನಾಥ – ಇಲ್ಲಿನ ವಾಂದ್ರಾಪಾಡಾ ಪ್ರದೇಶದಲ್ಲಿ ವಂಶಿಕಾ ನಾಗರ್ (ವಯಸ್ಸು 11 ವರ್ಷ) ತನ್ನ ಸಹೋದರನೊಂದಿಗೆ ಶಾಲೆಯಿಂದ ಮನೆಗೆ ಬರುತ್ತಿದ್ದಳು. ಆಗ ಇದ್ದಕ್ಕಿದ್ದಂತೆ ಬೀದಿ ನಾಯಿಯೊಂದು ಅವರ ಮೇಲೆರಗಿತು. ತನ್ನ ಸಹೋದರನಿಗೆ ಏನೂ ಆಗಬಾರದೆಂದು ವಂಶಿಕಾ ಮಧ್ಯೆ ಬಂದಳು. ನಾಯಿಯೊಂದಿಗೆ ಅವಳು ಹೋರಾಡಿದಳು. ಈ ವೇಳೆ ನಾಯಿ ಕಚ್ಚಿದ್ದರಿಂದ ಅವಳು ಗಂಭೀರವಾಗಿ ಗಾಯಗೊಂಡಳು. ಈ ಸಂಪೂರ್ಣ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಥಳೀಯ ನಾಗರಿಕರು ಅವಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅವಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಅಂಬರನಾಥ ನಗರಸಭೆಗೆ ತಡವಾಗಿ ಬಂದ ಜ್ಞಾನೋದಯ!

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಅಂಬರನಾಥ ನಗರಸಭೆಯ ಆರೋಗ್ಯ ಇಲಾಖೆಯು ತಕ್ಷಣವೇ ಕ್ರಮ ಕೈಗೊಂಡು, ಆ ಪ್ರದೇಶದ 18 ಬೀದಿ ನಾಯಿಗಳನ್ನು ಹಿಡಿದು ಅವುಗಳನ್ನು ಸಂತಾನಹರಣ ಚಿಕಿತ್ಸೆ ಮತ್ತು ಲಸಿಕೆ ಹಾಕಲು ಕೇಂದ್ರಕ್ಕೆ ರವಾನಿಸಿದೆ.

ನಾಯಿ ಹಿಡಿಯುವ ಜಾಲರಿಯೊಂದಿಗೆ ಶಿವಸೇನಾ ನಗರಸೇವಕರಿಂದ ಪ್ರತಿಭಟನೆ!

ಶಿವಸೇನೆಯ ಸ್ಥಳೀಯ ನಗರಸೇವಕ ವಿಕಾಸ್ ಸೋಮೇಶ್ವರ್ ಅವರು ನಗರಸಭೆಯಲ್ಲಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ನಾಯಿಗಳನ್ನು ಹಿಡಿಯಲು ಬಳಸುವ ಜಾಲರಿಯನ್ನು ಹಿಡಿದುಕೊಂಡೇ ಅವರು ಪಾಲಿಕೆಯನ್ನು ಪ್ರವೇಶಿಸಿ, ಆಡಳಿತದ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಜವಾಬ್ದಾರಿಯ ಅರಿವು ಮೂಡಿಸಲು ಆರೋಗ್ಯ ಇಲಾಖೆಯ ಅಧಿಕಾರಿಗಳನ್ನೇ ಇಂತಹ ಜಾಲರಿಯಲ್ಲಿ ಹಿಡಿದು ಕೇಂದ್ರಕ್ಕೆ ಬಿಡುವ ಸಮಯ ಬಂದಿದೆ’ ಎಂದು ಅವರು ಹೇಳಿದರು.

ನಾಯಿಗಳಿಗಾಗಿ 2 ಆಶ್ರಯ ಕೇಂದ್ರಗಳ ನಿರ್ಮಾಣ ಪ್ರಕ್ರಿಯೆ ಚಾಲ್ತಿಯಲ್ಲಿದೆ!

ನಗರದಲ್ಲಿ ಬೀದಿ ನಾಯಿಗಳ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ತಲಾ ಸುಮಾರು 1 ಸಾವಿರದ 200 ನಾಯಿಗಳ ಸಾಮರ್ಥ್ಯವಿರುವ 2 ನಾಯಿ ಆಶ್ರಯ ಕೇಂದ್ರಗಳನ್ನು ನಿರ್ಮಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ಅದಕ್ಕಾಗಿ ಅಗತ್ಯವಿರುವ ಜಾಗವನ್ನೂ ಗುರುತಿಸಲಾಗಿದೆ.

ಸಂಪಾದಕೀಯ ನಿಲುವು

  • ಬೀದಿ ನಾಯಿಗಳ ದಾಳಿಯಿಂದ ಗಾಯಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವುದು ಇದು ಆಡಳಿತ ವ್ಯವಸ್ಥೆಯ ವೈಫಲ್ಯ ಎಂದೇ ಹೇಳಬೇಕಾಗುತ್ತದೆ!
  • ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಆಡಳಿತವು ಕಾರ್ಯಪ್ರವೃತ್ತವಾಗಬೇಕು ಮತ್ತು ನಾಗರಿಕರು ಸುರಕ್ಷಿತವಾಗಿ ಓಡಾಡುವಂತೆ ಭರವಸೆ ನೀಡಬೇಕು!