LPG Crisis :ಪಡಿತರ ಅಂಗಡಿಗಳಲ್ಲಿ ಸೀಮೆಎಣ್ಣೆ ಮಾರಾಟ ಪುನರಾರಂಭಿಸಿ !

ಎಲ್.ಪಿ.ಜಿ. ಕೊರತೆ; ಪಡಿತರ ಅಂಗಡಿಯವರಿಂದ ಕೇಂದ್ರಕ್ಕೆ ಬೇಡಿಕೆ

ನವ ದೆಹಲಿ – ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಉಂಟಾಗಿರುವ ಎಲ್.ಪಿ.ಜಿ. ಸಿಲಿಂಡರ್‌ಗಳ ಕೊರತೆಯ ಹಿನ್ನೆಲೆಯಲ್ಲಿ, ‘ಆಲ್ ಇಂಡಿಯಾ ಫೇರ್ ಪ್ರೈಸ್ ಶಾಪ್ ಡೀಲರ್ಸ್ ಫೆಡರೇಶನ್’(‘ಅಖಿಲ ಭಾರತ ನ್ಯಾಯಬೆಲೆ ಅಂಗಡಿ ವ್ಯಾಪಾರಿಗಳ ಒಕ್ಕೂಟ’) ಕೇಂದ್ರ ಸರಕಾರಕ್ಕೆ ಪತ್ರ ಬರೆದು ದೇಶಾದ್ಯಂತದ ಪಡಿತರ ಅಂಗಡಿಗಳಿಗೆ ಸೀಮೆಎಣ್ಣೆಯ ಕೋಟಾವನ್ನು ಮತ್ತೆ ಮಂಜೂರು ಮಾಡಲು ವಿನಂತಿಸಿದೆ. ‘ಅನಿಲ ಪೂರೈಕೆಯಲ್ಲಿ ಅಡಚಣೆಯಾದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಕುಟುಂಬಗಳಿಗೆ ತೊಂದರೆಯಾಗಬಾರದು ಎನ್ನುವ ದೃಷ್ಟಿಯಿಂದ ಸೀಮೆಎಣ್ಣೆಯು ಇಂಧನದ ಒಂದು ಉತ್ತಮ ಪರ್ಯಾಯ ಮೂಲವಾಗಬಲ್ಲದು’, ಎಂಬುದು ಸಂಘಟನೆಯ ಅಭಿಪ್ರಾಯವಾಗಿದೆ.

೨೦೨೦ ರಿಂದ ಸೀಮೆಎಣ್ಣೆ ವಿತರಣೆ ಸ್ಥಗಿತಗೊಳಿಸಲಾಗಿದೆ

‘ಪ್ರಧಾನಮಂತ್ರಿ ಉಜ್ವಲ ಯೋಜನೆ’ಯ ಮೂಲಕ ಬಡವರಿಗೆ ಅನಿಲ ಸಂಪರ್ಕ ದೊರೆತ ನಂತರ, ಹಾಗೂ ಸ್ವಚ್ಛ ಇಂಧನಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ೨೦೨೦-೨೧ ರಲ್ಲಿ ಪಡಿತರದಲ್ಲಿನ ಸೀಮೆಎಣ್ಣೆ ವಿತರಣೆಯನ್ನು ಅಧಿಕೃತವಾಗಿ ಸ್ಥಗಿತಗೊಳಿಸಲಾಗಿತ್ತು.

ಮುಂಬಯಿ: ಐ.ಆರ್‌.ಸಿ.ಟಿ.ಸಿ. ಊಟ ಸೇವೆ ಬಂದ್ ; ಸಿಲಿಂಡರ್ ಗಳ ಕೊರತೆಯ ಪರಿಣಾಮ

ಇಲ್ಲಿನ ಐ.ಆರ್.ಸಿ.ಟಿ.ಸಿ.ಯು (ಭಾರತೀಯ ರೈಲ್ವೆ ಆಹಾರ ಪೂರೈಕೆ ಮತ್ತು ಪ್ರವಾಸೋದ್ಯಮ ನಿಗಮ) ಮುಂಬಯಿನಲ್ಲಿರುವ ತನ್ನ ಅಡುಗೆ ಮನೆಯನ್ನು ತಾತ್ಕಾಲಿಕವಾಗಿ ಮುಚ್ಚಿದೆ. ಪ್ರಸ್ತುತ ನಡೆಯುತ್ತಿರುವ ಇರಾನ್ – ಅಮೆರಿಕ ಯುದ್ಧದ ಹಿನ್ನೆಲೆಯಲ್ಲಿ ಉಂಟಾಗಿರುವ ಸಿಲಿಂಡರ್ ಗಳ ಕೊರತೆಯಿಂದಾಗಿ ಇದನ್ನು ಮುಚ್ಚಿರಬಹುದೆಂದು ಹೇಳಲಾಗುತ್ತಿದೆ. ರೈಲ್ವೆಗಳಲ್ಲಿ ನೀಡುವ ಆಹಾರ ಸೇವೆಯ ಮೇಲೂ ಇದರ ಪರಿಣಾಮ ಉಂಟಾಗುವ ಸಾಧ್ಯತೆಯಿದೆ. ಐ.ಆರ್‌.ಸಿ.ಟಿ.ಸಿ.ಯು ಪವಯಿ, ಶಿವಡಿ ಮತ್ತು ಕುರ್ಲಾದಲ್ಲಿ ತನ್ನ ಅಡುಗೆ ಮನೆಗಳನ್ನು ಹೊಂದಿದೆ. ಆದರೆ ರೈಲ್ವೆ ಅಧಿಕಾರಿಗಳು ‘ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗುವುದು,’ ಎಂದು ಭರವಸೆ ನೀಡಿದ್ದಾರೆ.