ಮಕ್ಕಳಿಗೆ ಕುರಾನ್ ಬೋಧಿಸುತ್ತಿದ್ದ ಖಾಸಗಿ ಶಾಲೆ ಮುಚ್ಚುವಂತೆ ಕೇರಳ ಉಚ್ಚ ನ್ಯಾಯಾಲಯದ ಆದೇಶ Kerala HC Order School Closure

ಕಾನೂನಿನಡಿಯಲ್ಲಿ ಧರ್ಮ ಶಿಕ್ಷಣಕ್ಕೆ ಅವಕಾಶವಿಲ್ಲ ಎಂದು ನ್ಯಾಯಾಲಯದಿಂದ ಸ್ಪಷ್ಟನೆ

 

ತಿರುವನಂತಪುರಂ (ಕೇರಳ) – ಕೇರಳದ ಉಚ್ಚ ನ್ಯಾಯಾಲಯವು ತ್ರಿಶೂರ್ ಜಿಲ್ಲೆಯ ಖಾಸಗಿ ಶಾಲೆಯೊಂದನ್ನು ಮುಚ್ಚುವಂತೆ ಆದೇಶಿಸಿದೆ. ಈ ಶಾಲೆಯಲ್ಲಿ ಸುಮಾರು ೩೦೦ ಮಕ್ಕಳಿಗೆ ಕುರಾನ್ ಬೋಧಿಸಲಾಗುತ್ತಿತ್ತು. ಅಗತ್ಯ ಮಾನ್ಯತೆ ಇಲ್ಲದೆ ಶಾಲೆಯನ್ನು ನಡೆಸುತ್ತಿರುವುದು ‘ಶಿಕ್ಷಣ ಹಕ್ಕು ಕಾಯ್ದೆ’ಯ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ ಮತ್ತು ಶಾಲೆಯನ್ನು ಮುಚ್ಚಲು ನಿರ್ದೇಶನ ನೀಡಿದೆ. ಪ್ರಸಕ್ತ ಶೈಕ್ಷಣಿಕ ವರ್ಷ ೨೦೨೫-೨೬ ಮುಗಿಯುವವರೆಗೆ ಶಾಲೆ ನಡೆಸಲು ಅವಕಾಶ ನೀಡಲಾಗಿದ್ದು, ಇದರಿಂದ ಮಕ್ಕಳು ಮತ್ತು ಪಾಲಕರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಸಮಯ ಸಿಗಲಿದೆ. ಅದರ ನಂತರ ಶಾಲೆಯನ್ನು ಮುಚ್ಚಲಾಗುವುದು ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.

೧. ನ್ಯಾಯಾಲಯವು, ಶಾಲೆಯು ‘ಶಿಕ್ಷಣ ಹಕ್ಕು ಕಾಯ್ದೆ, ೨೦೦೯’ ರ ಕಲಂ ೧೮ ಅನ್ನು ಉಲ್ಲಂಘಿಸಿದೆ ಎಂದು ಸ್ಪಷ್ಟಪಡಿಸಿದೆ. ರಾಜ್ಯ ಸರಕಾರದಿಂದ ಅಗತ್ಯ ಮಾನ್ಯತೆ ಪಡೆಯದೆ ಶಾಲೆಯನ್ನು ನಡೆಸುತ್ತಿರುವುದು ಕಂಡುಬಂದಿದೆ. ಕಾನೂನಿನ ಪ್ರಕಾರ ಪ್ರತಿಯೊಂದು ಶಾಲೆಯು ರಾಜ್ಯ ಸರಕಾರದ ಮಾನ್ಯತೆ ಪಡೆಯುವುದು ಕಡ್ಡಾಯವಾಗಿದೆ ಎಂದು ನ್ಯಾಯಾಲಯವು ಒತ್ತಿ ಹೇಳಿದೆ.

೨. ಶಾಲಾ ಆಡಳಿತ ಮಂಡಳಿ ರಾಷ್ಟ್ರೀಯ ಮುಕ್ತ ಶಿಕ್ಷಣ ಸಂಸ್ಥೆಯಿಂದ ಮಾನ್ಯತೆ ಪಡೆದಿರುವುದಾಗಿ ವಾದಿಸಿತು; ಆದರೆ ಈ ಸಂಸ್ಥೆಯ ಮಾನ್ಯತೆಯು ಶಿಕ್ಷಣ ಹಕ್ಕು ಕಾಯ್ದೆಯಡಿ ಅಗತ್ಯವಿರುವ ಮಾನ್ಯತೆಗೆ ಪರ್ಯಾಯವಾಗಲು ಸಾಧ್ಯವಿಲ್ಲ ಎಂದು ಉಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿತು.

೩. ಶಿಕ್ಷಣ ಹಕ್ಕು ಕಾಯ್ದೆಯಡಿ ಮಾನ್ಯತೆ ಪಡೆದ ನಂತರವೂ, ರಾಜ್ಯ ಸರಕಾರದ ವಿಶೇಷ ಅನುಮತಿಯಿಲ್ಲದೆ ಯಾವುದೇ ಶಾಲೆಯು ಒಂದು ಧರ್ಮದ ಏಕಪಕ್ಷೀಯ ಧಾರ್ಮಿಕ ಶಿಕ್ಷಣವನ್ನು ನೀಡಲು ಸಾಧ್ಯವಿಲ್ಲ. ಈ ಕಾರಣಗಳಿಂದಾಗಿ ಈ ಶಾಲೆಯು ಕಾನೂನುಬದ್ಧವಾಗಿ ನಡೆಯುತ್ತಿಲ್ಲ ಎಂಬ ತೀರ್ಮಾನಕ್ಕೆ ಬಂದ ನ್ಯಾಯಾಲಯವು, ಅದನ್ನು ಮುಚ್ಚುವುದೇ ಸೂಕ್ತ ಎಂದು ಹೇಳಿದೆ.