ಕುಟುಂಬದಲ್ಲಿ ನಿಯಮಿತ ಸಂವಾದ, ಹುಡುಗಿಯರಲ್ಲಿ ಜಾಗೃತಿ ಮತ್ತು ಕಠಿಣ ಕ್ರಮಗಳಿಂದ ಲವ್ ಜಿಹಾದ್ ತಡೆಯಲು ಸಾಧ್ಯ!

‘ಲವ್ ಜಿಹಾದ್’ ತಡೆಯಲು ಪ.ಪೂ. ಸರಸಂಘಚಾಲಕ ಡಾ. ಮೋಹನ್ ಜಿ ಭಾಗವತ್ ಹೇಳಿದ ಉಪಾಯ!

ಭೋಪಾಲ್ (ಮಧ್ಯಪ್ರದೇಶ) – ಕುಟುಂಬದಲ್ಲಿ ನಿಯಮಿತ ಸಂವಾದ, ಹುಡುಗಿಯರಲ್ಲಿ ಜಾಗೃತಿ ಮತ್ತು ಆತ್ಮರಕ್ಷಣೆಯ ಭಾವನೆಯನ್ನು ಮೂಡಿಸುವುದು ಹಾಗೂ ‘ಲವ್ ಜಿಹಾದ್’ ಬಲೆಯಲ್ಲಿ ಸಿಲುಕಿಸುವವರ ವಿರುದ್ಧ ಸರಕಾರ ಕಠಿಣ ಕಾನೂನು ಕ್ರಮದ ಮೊರೆ ಹೋಗುವುದು – ಈ ತ್ರಿಸೂತ್ರಗಳ ಮೂಲಕ ಲವ್ ಜಿಹಾದ್ ಅನ್ನು ತಡೆಗಟ್ಟಬಹುದು ಎಂದು ಪ.ಪೂ. ಸರಸಂಘಚಾಲಕ ಡಾ. ಮೋಹನ ಜಿ ಭಾಗವತ ಅವರು ಇಲ್ಲಿ ಮಾರ್ಗದರ್ಶನ ಮಾಡಿದರು. ಇಂತಹ ಯಾವುದೇ ಘಟನೆಗಳ ಬಗ್ಗೆ ಸಾಮಾಜಿಕ ಸಂಘಟನೆಗಳು ಜಾಗರೂಕರಾಗಿರಬೇಕು. ಸಮಾಜವು ಒಗ್ಗೂಡಿ ಇಂತಹ ಘಟನೆಗಳನ್ನು ವಿರೋಧಿಸಿದರೆ ಮಾತ್ರ ಲವ್ ಜಿಹಾದ್ ಗೆ ತೃಪ್ತಿಕರ ಪರಿಹಾರ ಸಿಗಲು ಸಾಧ್ಯ, ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. ಭೋಪಾಲ್ ನ ಶಿವನೇರಿ ಭವನದಲ್ಲಿ ಆಯೋಜಿಸಲಾಗಿದ್ದ ‘ಸ್ತ್ರೀ ಶಕ್ತಿ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಸಂವಾದದ ಕೊರತೆಯಿಂದಲೇ ‘ಲವ್ ಜಿಹಾದ್’

ಪ.ಪೂ. ಸರಸಂಘಚಾಲಕರು ಮುಂದೆ ಮಾತನಾಡಿ, ಅಪರಿಚಿತ ವ್ಯಕ್ತಿಯು ನಮ್ಮ ಮಗಳನ್ನು ಹೇಗೆ ಮರುಳು ಮಾಡಲು ಸಾಧ್ಯ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಕುಟುಂಬದಲ್ಲಿನ ಅಸಮಾಧಾನ ಮತ್ತು ಸದಸ್ಯರ ನಡುವಿನ ಸಂವಾದದ ಕೊರತೆಯೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಕುಟುಂಬದಲ್ಲಿ ಮಕ್ಕಳೊಂದಿಗೆ ನಿಯಮಿತವಾಗಿ ಸಂವಾದ ನಡೆಸಿದರೆ, ಅವರಿಗೆ ಧರ್ಮ, ಸಂಸ್ಕೃತಿ ಮತ್ತು ಪರಂಪರೆಗಳ ಬಗ್ಗೆ ಅರಿವಾಗುತ್ತದೆ, ಜೊತೆಗೆ ಅವರ ಬಗ್ಗೆ ಸ್ವಾಭಾವಿಕ ಗೌರವ ಮೂಡುತ್ತದೆ, ಎಂದರು.

ಮಹಿಳೆಯರಿಂದಲೇ ಧರ್ಮ ಮತ್ತು ಸಂಸ್ಕೃತಿ ಸುರಕ್ಷಿತ

ಸಮಾಜವು ನಾಗರಿಕತೆಯ ಬಗ್ಗೆ ಹೆಮ್ಮೆ ಪಡುವಾಗ, ಅದರಲ್ಲಿ ಮಹಿಳೆಯರ ಪಾತ್ರ ಅತ್ಯಂತ ನಿರ್ಣಾಯಕವಾಗಿರುತ್ತದೆ. ನಮ್ಮ ಧರ್ಮ, ಸಂಸ್ಕೃತಿ ಮತ್ತು ಸಾಮಾಜಿಕ ವ್ಯವಸ್ಥೆಯು ಮಹಿಳೆಯರಿಂದಾಗಿ ಸುರಕ್ಷಿತವಾಗಿದೆ. ಪುರುಷರು ಮತ್ತು ಮಹಿಳೆಯರಿಬ್ಬರೂ ಸೇರಿ ಸಮಾಜವನ್ನು ಮುನ್ನಡೆಸುತ್ತಾರೆ. ಆದ್ದರಿಂದ ಇಬ್ಬರೂ ಜಾಗರೂಕರಾಗಿರುವುದು ಮತ್ತು ಜಾಗೃತರಾಗಿರುವುದು ಅವಶ್ಯಕವಾಗಿದೆ. ಭಾರತೀಯ ಸಂಸ್ಕೃತಿಯು ಅತ್ಯುನ್ನತ ಸ್ಥಾನದಲ್ಲಿದೆ, ಎಂದು ಪ.ಪೂ. ಸರಸಂಘಚಾಲಕರು ಹೇಳಿದರು.