ತಿರುಪತಿ: ಗೋವಿಂದರಾಜಸ್ವಾಮಿ ದೇವಾಲಯದ ಗೋಪುರದ ಮೇಲೆ ಹತ್ತಿದ ಕುಡುಕ! Tirupati Drunk Man Govindaraja Temple

ಕೆಳಗೆ ಇಳಿದು ಬರಲು ಮದ್ಯದ ಬಾಟಲಿ ಕೇಳಿದ ಕುಡುಕ

ತಿರುಪತಿ (ಆಂಧ್ರಪ್ರದೇಶ) – ಇಲ್ಲಿನ ಶ್ರೀ ಗೋವಿಂದರಾಜಸ್ವಾಮಿ ದೇವಾಲಯದ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ದೇವಾಲಯದ ಆವರಣಕ್ಕೆ ಪ್ರವೇಶಿಸಿದ ಕುಡಿದ ವ್ಯಕ್ತಿಯೊಬ್ಬ ದೇವಾಲಯದ ಗೋಡೆಯ ಮೇಲೆ ಹತ್ತಿದನು. ಗೋಪುರದ ಮೇಲೆ ಹತ್ತಿ ಕಲಶದವರೆಗೆ ವ್ಯಕ್ತಿ ಹೋದದ್ದನ್ನು ಕಂಡು ದೇವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಜಮಾಯಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ, ದೇವಾಲಯದ ಆಡಳಿತವು ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದರು. ಗೋಪುರದ ಕಲಶದ ಮೇಲೆ ಏರಿದ ನಂತರ, “ಮದ್ಯದ ಬಾಟಲಿ ತಂದುಕೊಟ್ಟರೆ ಮಾತ್ರ ಕೆಳಗಿಳಿಯುತ್ತೇನೆ” ಎಂದು ಆ ಕುಡುಕ ಷರತ್ತು ಹಾಕಿದನು. ದೇವಾಲಯದ ಭದ್ರತಾ ಅಧಿಕಾರಿಗಳು ಆತನ ಬೇಡಿಕೆಯನ್ನು ಒಪ್ಪಿಕೊಂಡ ನಂತರ, ಆತ ತಾನಾಗಿಯೇ ಸುರಕ್ಷಿತವಾಗಿ ಕೆಳಗಿಳಿದನು. ನಂತರ ಪೊಲೀಸರು ಆತನನ್ನು ಬಂಧಿಸಿದರು.

ಈ ಮದ್ಯವ್ಯಸನಿಯ ಹೆಸರು ಕುಟ್ಟಾಡಿ ತಿರುಪತಿ (ವಯಸ್ಸು ೪೫ ವರ್ಷ) ಎಂದು ಹೇಳಲಾಗಿದೆ. ಈತ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಕುರ್ಮವಾಡದಲ್ಲಿರುವ ಪೆದ್ದಮಲ್ಲಾ ರೆಡ್ಡಿ ಕಾಲೋನಿಯ ನಿವಾಸಿ. ಅನ್ಯ ಭಕ್ತರಂತೆ ಈತ ಕೂಡ ದೇವಾಲಯ ಪ್ರವೇಶಿಸಿದ್ದ.

ಸಂಪಾದಕೀಯ ನಿಲುವು

  • ಹಿಂದೂಗಳಿಗೆ ಧರ್ಮಶಿಕ್ಷಣ, ಸಾಧನೆ  ಕಲಿಸದಿರುವ ಪರಿಣಾಮವಿದು!
  • ದೇವಾಲಯದ ಸುರಕ್ಷತೆಯಲ್ಲಿ ಲೋಪ ಎಸಗಿದ, ಸಂಬಂಧಪಟ್ಟವರ ವಿರುದ್ಧ ಕ್ರಮವಾಗಬೇಕು!