ಶ್ರೀಮದ್ಭಗವದ್ಗೀತೆಯನ್ನು ಮಾತ್ರ ಕಲಿಸಲಾಗುತ್ತದೆ ಎಂಬ ಮಾತ್ರಕ್ಕೆ ಸಂಸ್ಥೆಯನ್ನು ‘ಧಾರ್ಮಿಕ’ ಎಂದು ಕರೆಯುವುದು ತಪ್ಪು! – ಮದ್ರಾಸ ಉಚ್ಚ ನ್ಯಾಯಾಲಯ – Madras High Court Bhagavad Gita

ಗೀತೆಯು ಕೇವಲ ಧಾರ್ಮಿಕ ಗ್ರಂಥವಲ್ಲ, ಅದು ನೈತಿಕ ಶಾಸ್ತ್ರವೆಂದು ಅದನ್ನು ಒಂದು ಧರ್ಮದ ಚೌಕಟ್ಟಿನಲ್ಲಿ ಇರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ!

ಚೆನ್ನೈ (ತಮಿಳುನಾಡು) – ಶ್ರೀಮದ್ಭಗವದ್ಗೀತೆಯು ಕೇವಲ ಧಾರ್ಮಿಕ ಗ್ರಂಥವಲ್ಲ, ಬದಲಾಗಿ ಅದೊಂದು ನೈತಿಕ ಶಾಸ್ತ್ರವಾಗಿದೆ. ಇದು ಭಾರತೀಯ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗವಾಗಿದೆ. ಆದ್ದರಿಂದ ಇದನ್ನು ಯಾವುದೇ ಒಂದು ಧರ್ಮದ ಚೌಕಟ್ಟಿಗೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಗೀತೆಯನ್ನು ಮಾತ್ರ ಕಲಿಸಲಾಗುತ್ತದೆ ಎಂಬ ಕಾರಣಕ್ಕೆ ಸಂಸ್ಥೆಯನ್ನು ‘ಧಾರ್ಮಿಕ’ ಎಂದು ವರ್ಗೀಕರಿಸುವುದು ತಪ್ಪು ಎಂದು ಮದ್ರಾಸ ಉಚ್ಚ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಅಲ್ಲದೆ, ಶ್ರೀಮದ್ಭಗವದ್ಗೀತೆ ಮತ್ತು ಯೋಗ ಶಿಕ್ಷಣವನ್ನು ನೀಡುವ ‘ಆರ್ಷ ವಿದ್ಯಾ ಗುರುಕುಲ ಟ್ರಸ್ಟ್’ನ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್.ಸಿ.ಆರ್.ಎ.) ಅಡಿಯಲ್ಲಿನ ನೋಂದಣಿಯನ್ನು ತಿರಸ್ಕರಿಸುವ ನಿರ್ಧಾರವನ್ನು ಉಚ್ಚ ನ್ಯಾಯಾಲಯವು ರದ್ದುಗೊಳಿಸಿದೆ. ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರ ಪೀಠವು ಈ ತೀರ್ಪನ್ನು ನೀಡಿದೆ. ಈ ಗುರುಕುಲಕ್ಕೆ ಎಫ್.ಸಿ.ಆರ್.ಎ. ನೋಂದಣಿಯನ್ನು ನಿರಾಕರಿಸುವ ಕೇಂದ್ರ ಗೃಹ ಸಚಿವಾಲಯದ ನಿರ್ಧಾರವು ದೋಷಪೂರಿತವಾಗಿದೆ ಎಂದು ಹೇಳುತ್ತಾ ಉಚ್ಚ ನ್ಯಾಯಾಲಯವು ಆ ಆದೇಶವನ್ನು ವಜಾಗೊಳಿಸಿದೆ.

೧. ೨೦೨೧ ರಲ್ಲಿ ಈ ಟ್ರಸ್ಟ್ ನೋಂದಣಿಗಾಗಿ ಅರ್ಜಿ ಸಲ್ಲಿಸಿತ್ತು; ಆದರೆ ಆ ಅರ್ಜಿಯ ಪ್ರಕ್ರಿಯೆಯು ಅಕ್ಟೋಬರ್ ೨೦೨೪ ರಲ್ಲಿ ಪ್ರಾರಂಭವಾಯಿತು. ಈ ವಿಳಂಬದ ಬಗ್ಗೆ ನ್ಯಾಯಾಲಯವು ಅಸಮಾಧಾನ ವ್ಯಕ್ತಪಡಿಸಿದ್ದು, ‘ಅಧಿಕಾರಿಗಳು ನಿಷ್ಪಕ್ಷಪಾತವಾಗಿ ವರ್ತಿಸುವುದು ನಿರೀಕ್ಷಿತವಾಗಿದೆ ಮತ್ತು ಇದು ಸುಶಾಸನದ ಪ್ರಾಥಮಿಕ ತತ್ವವಾಗಿದೆ’ ಎಂದು ಹೇಳಿದೆ. (ಇಂತಹ ವಿಳಂಬ ಮಾಡುವ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ನ್ಯಾಯಾಲಯವು ಕಠಿಣ ಕ್ರಮಕ್ಕೆ ಆದೇಶಿಸಬೇಕು ಎಂದು ಜನತೆಗೆ ಅನ್ನಿಸುತ್ತದೆ! – ಸಂಪಾದಕರು)

೨. ಆರ್ಷ ವಿದ್ಯಾ ಟ್ರಸ್ಟ್ ಕಾನೂನಿನ ಅಡಿಯಲ್ಲಿ ನೋಂದಣಿ ನಿರ್ಧಾರಕ್ಕಾಗಿ ನ್ಯಾಯಾಲಯದ ಹಸ್ತಕ್ಷೇಪವನ್ನು ಕೋರಿ ಅರ್ಜಿಯನ್ನು ಸಲ್ಲಿಸಿತ್ತು. ಎರಡು ಕಾರಣಗಳಿಗಾಗಿ ಈ ಹಿಂದೆ ಅವರ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಮೊದಲನೆಯ ಕಾರಣ, ಅರ್ಜಿದಾರರು ಪೂರ್ವಾನುಮತಿ ಇಲ್ಲದೆ ವಿದೇಶಿ ನಿಧಿಯನ್ನು ಪಡೆದಿದ್ದರು ಮತ್ತು ಅದನ್ನು ಮತ್ತೊಂದು ಸಂಸ್ಥೆಗೆ ದೇಣಿಗೆಯಾಗಿ ವರ್ಗಾಯಿಸಿದ್ದರು. ಎರಡನೆಯದಾಗಿ, ಸಂಸ್ಥೆಯ ಸ್ವರೂಪವು ಧಾರ್ಮಿಕವಾಗಿದೆ ಎಂಬ ಕಾರಣ ನೀಡಿ ಕೇಂದ್ರ ಗೃಹ ಸಚಿವಾಲಯವು ಅರ್ಜಿಯನ್ನು ತಿರಸ್ಕರಿಸಿತ್ತು. ಇದರ ವಿರುದ್ಧ ಮದ್ರಾಸ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.