ತ್ರಿಪುರಾದಲ್ಲಿ ಗ್ರಾಮಸ್ಥರ ಮೇಲೆ ಮಾರಣಾಂತಿಕ ದಾಳಿ ನಡೆಸಿದ 3 ಬಾಂಗ್ಲಾದೇಶದ ಗೋಕಳ್ಳರನ್ನು ಕೊಂದ ಗ್ರಾಮಸ್ತರು !

ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಬಾಂಗ್ಲಾದೇಶದಿಂದ ಭಾರತಕ್ಕೆ ಆಗ್ರಹ

ಅಗರ್ತಲಾ (ತ್ರಿಪುರಾ) – ಅಕ್ಟೋಬರ್ 15 ರಂದು ತ್ರಿಪುರಾದ ಬಿದ್ಯಾಬಿಲ್ ಗ್ರಾಮದಲ್ಲಿ ಸ್ಥಳೀಯ ಗ್ರಾಮಸ್ಥರೊಂದಿಗೆ ನಡೆದ ಘರ್ಷಣೆಯಲ್ಲಿ 3 ಬಾಂಗ್ಲಾದೇಶದ ಗೋ ಕಳ್ಳರು ಸಾವನ್ನಪ್ಪಿದ್ದಾರೆ. ‘ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ, ಭಾರತವು ಅಪರಾಧಿಗಳಿಗೆ ಶಿಕ್ಷೆ ನೀಡಬೇಕು. ಅವರ ರಾಷ್ಟ್ರೀಯತೆ ಏನೇ ಇರಲಿ, ಪ್ರತಿಯೊಬ್ಬ ವ್ಯಕ್ತಿಯನ್ನು ರಕ್ಷಿಸಬೇಕು’ ಎಂದು ಬಾಂಗ್ಲಾದೇಶದ ಸರಕಾರವು ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ‘ಈ ಮೂವರು ಜಾನುವಾರುಗಳನ್ನು ಕದಿಯಲು ಪ್ರಯತ್ನಿಸಿದರು ಮತ್ತು ಘರ್ಷಣೆಯಲ್ಲಿ ಅವರು ಹತರಾಗಿದ್ದಾರೆ’ ಎಂದು ಹೇಳಿದೆ. ಗಡಿಯಲ್ಲಿನ ಕಳ್ಳಸಾಗಣೆಯನ್ನು ತಡೆಯಲು ಬೇಲಿ ನಿರ್ಮಿಸಲು ಬಾಂಗ್ಲಾದೇಶವು ಭಾರತಕ್ಕೆ ಸಹಾಯ ಮಾಡಬೇಕು ಎಂದು ಭಾರತವು ಮನವಿ ಮಾಡಿದೆ.

ಗೋ ಕಳ್ಳರು ಗ್ರಾಮಸ್ಥರ ಮೇಲೆ ಶಸ್ತ್ರಾಸ್ತ್ರಗಳಿಂದ ದಾಳಿ ಮಾಡಿದ್ದರಿಂದ ಪ್ರತ್ಯುತ್ತರವಾಗಿ ಕಳ್ಳರು ಹತರಾದರು

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು, ಈ ಘಟನೆಯು ತ್ರಿಪುರಾದ ಭಾರತ-ಬಾಂಗ್ಲಾದೇಶ ಗಡಿಯಿಂದ ಸುಮಾರು 3 ಕಿಲೋಮೀಟರ್ ಪ್ರದೇಶದೊಳಗೆ ನಡೆದಿದೆ. ಈ ಬಾಂಗ್ಲಾದೇಶಿ ಕಳ್ಳಸಾಗಾಣಿಕೆದಾರರು ಗಡಿ ದಾಟಿ ಬಿದ್ಯಾಬಿಲ್ ಗ್ರಾಮದಲ್ಲಿ ಜಾನುವಾರುಗಳನ್ನು ಕದಿಯಲು ಪ್ರಯತ್ನಿಸಿದ್ದಾರೆ. ಅವರು ಸ್ಥಳೀಯ ಗ್ರಾಮಸ್ಥರ ಮೇಲೆ ಕಬ್ಬಿಣದ ಆಯುಧಗಳು ಮತ್ತು ಚಾಕುಗಳಿಂದ ಹಲ್ಲೆ ಮಾಡಿದ್ದಾರೆ. ಅದರಲ್ಲಿ ಒಬ್ಬ ಗ್ರಾಮಸ್ಥನು ಸಾವನ್ನಪ್ಪಿದ್ದು, ಇತರರು ಗಾಯಗೊಂಡಿದ್ದಾರೆ. ಗ್ರಾಮಸ್ಥರು ಪ್ರತಿ ದಾಳಿಯಾಗಿ, ಮೂವರು ಕಳ್ಳರನ್ನು ಹಿಡಿದಿದ್ದಾರೆ. ಈ ಘರ್ಷಣೆಯಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮೂರನೆಯವನು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಮೂವರ ಮೃತದೇಹಗಳನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸಲಾಗಿದ್ದು, ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ, ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಗಡಿಯಲ್ಲಿ ಪ್ರತಿದಿನ ನಡೆಯುತ್ತಿರುವ ನುಸುಳುವಿಕೆಯನ್ನು ತಡೆಯಲು ಆಗುತ್ತಿಲ್ಲವಾದ್ದರಿಂದ, ಇಂತಹ ಪರಿಸ್ಥಿತಿ ಉಂಟಾಗಿದೆ. ಗೋ ಕಳ್ಳರು ಭಾರತದೊಳಗೆ ನುಸುಳುತ್ತಾರೆ, ಜಾನುವಾರುಗಳನ್ನು ಕದಿಯುತ್ತಾರೆ, ಭಾರತೀಯರ ಮೇಲೆ ದಾಳಿ ಮಾಡಿ ಮತ್ತೆ ಬಾಂಗ್ಲಾದೇಶಕ್ಕೆ ಹೋಗಲು ಪ್ರಯತ್ನಿಸುತ್ತಾರೆ, ಇದು ನಾಚಿಕೆಗೇಡಿನ ಸಂಗತಿ.
  • ಭಾರತದಿಂದ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸುತ್ತಿರುವ ಬಾಂಗ್ಲಾದೇಶಕ್ಕೆ ನಾಚಿಕೆಯಾಗುವುದಿಲ್ಲವೇ? ಭಾರತವು ಗ್ರಾಮಸ್ಥರ ಮೇಲೆ ಯಾವುದೇ ಕ್ರಮ ಕೈಗೊಳ್ಳಬಾರದು, ಎಂದು ಜನರಿಗೆ ಅನ್ನಿಸುತ್ತದೆ!