ಡಾ. ತಾವಡೆಯವರಿಗೆ ಜಾಮೀನು ಮಂಜೂರಾಗಿರುವುದಕ್ಕೆ ನನಗೆ ಸಂತೋಷ! – ನ್ಯಾಯವಾದಿ ಪುಷ್ಪಾ ಗನೇಡಿವಾಲಾ

ಉಚ್ಚ ನ್ಯಾಯಾಲಯದ ನ್ಯಾಯವಾದಿ ಪುಷ್ಪಾ ಗನೇಡಿವಾಲಾ ಅವರು

ಕೊಲ್ಲಾಪುರ – ಇಲ್ಲಿನ ಮುಂಬಯಿ ಉಚ್ಚ ನ್ಯಾಯಾಲಯದ ‘ಸರ್ಕ್ಯೂಟ್ ಬೆಂಚ್’ ನಿಂದ ಕಾಮ್ರೇಡ್ ಗೋವಿಂದ ಪಾನ್ಸರೆ ಹತ್ಯೆ ಪ್ರಕರಣದ ಶಂಕಿತ ಡಾ. ವೀರೇಂದ್ರಸಿಂಗ್ ತಾವಡೆಯವರಿಗೆ ಜಾಮೀನು ಮಂಜೂರಾಗಿರುವುದು ನನಗೆ ಸಂತೋಷವಾಗಿದೆ. ಡಾ. ತಾವಡೆಯವರು ಕಾಮ್ರೇಡ್ ಗೋವಿಂದ ಪಾನ್ಸರೆ ಪ್ರಕರಣದ ಒಬ್ಬ ಶಂಕಿತರಾಗಿದ್ದು, ಅವರಿಗೆ ಸುಮಾರು 9 ವರ್ಷಗಳ ಕಾಲ ಕಾರಾಗೃಹದಲ್ಲಿ ಇರಬೇಕಾಯಿತು. ಡಾ. ವೀರೇಂದ್ರಸಿಂಗ್ ತಾವಡೆಯವರಿಗೆ 2018 ರಲ್ಲಿ ಕೊಲ್ಲಾಪುರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು; ಆದರೆ ಅದೇ ನ್ಯಾಯಾಲಯದ ನಂತರದ ನ್ಯಾಯಾಧೀಶರು ‘ಅವರ ವಿರುದ್ಧ ಸಾಕಷ್ಟು ಸಾಮಗ್ರಿಗಳು ಲಭ್ಯವಿದೆ’ ಎಂಬ ಕಾರಣ ನೀಡಿ ಆ ಜಾಮೀನನ್ನು ರದ್ದುಗೊಳಿಸಿದರು. ಡಾ. ತಾವಡೆಯವರು ಈ ನಿರ್ಧಾರವನ್ನು ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ ನಂತರ, ಅಂತಿಮವಾಗಿ ಮುಂಬಯಿ ಉಚ್ಚ ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿದೆ. ಸತ್ರ ನ್ಯಾಯಾಲಯಕ್ಕೆ ತನ್ನದೇ ಆದ ಆದೇಶವನ್ನು ಪುನರಾವಲೋಕನ ಮಾಡುವ ಅಧಿಕಾರವಿಲ್ಲ ಎಂದು ಮುಂಬಯಿ ಉಚ್ಚ ನ್ಯಾಯಾಲಯವು ಸ್ಪಷ್ಟವಾಗಿ ಹೇಳಿದೆ, ಜೊತೆಗೆ ಸಹ ಆರೋಪಿಗಳಾದ ಶರದ್ ಕಳಸ್ಕರ್ ಮತ್ತು ಅಮೋಲ್ ಕಾಳೆ ಅವರಿಗೆ ಸಮಾನತೆಯ ತತ್ವದ ಮೇಲೆ ಜಾಮೀನು ನೀಡಲಾಗಿತ್ತು. ಅವರಿಬ್ಬರೂ 6-7 ವರ್ಷಗಳ ಕಾಲ ಕಾರಾಗೃಹದಲ್ಲಿದ್ದರು. ದೀರ್ಘಾವಧಿಯ ಕಾರಾಗೃಹವಾಸ ಮತ್ತು ಪಿತೂರಿ ಕುರಿತು ದೃಢವಾದ ಪುರಾವೆಗಳ ಕೊರತೆಯಿಂದಾಗಿ ಡಾ. ತಾವಡೆಯವರಿಗೂ ಜಾಮೀನು ಮಂಜೂರು ಮಾಡಲಾಗಿದೆ.

ಸರಕಾರಿ ಪಕ್ಷದ ವಾದಗಳಲ್ಲಿ ಯಾವುದೇ ಸತ್ಯಾಂಶವಿಲ್ಲ!

ಈ ಪ್ರಕರಣದಲ್ಲಿ ವಾದ ಮಂಡಿಸುವಾಗ, ಮಾಜಿ ನ್ಯಾಯಮೂರ್ತಿ ಮತ್ತು ಮುಂಬಯಿ ಉಚ್ಚ ನ್ಯಾಯಾಲಯದ ನ್ಯಾಯವಾದಿ ಪುಷ್ಪಾ ಗನೇಡಿವಾಲಾ ಅವರು, “ಈ ಪ್ರಕರಣದಲ್ಲಿ ಪದೇ ಪದೇ ಇದು ಷಡ್ಯಂತ್ರ ಮತ್ತು ಡಾ. ತಾವಡೆಯವರ ಹೆಸರು ಪ್ರಸ್ತಾಪವಾಗುತ್ತದೆ; ಆದರೆ ಈ ಪ್ರಕರಣದಲ್ಲಿ ನಡೆಯುತ್ತಿರುವ ತನಿಖೆಯಲ್ಲಿ ಹೊಸದಾಗಿ ಏನೂ ಹೊರಬಂದಿಲ್ಲ. ಆದ್ದರಿಂದ, ಸರಕಾರಿ ಪಕ್ಷವು ಮಾಡುತ್ತಿರುವ ವಿವಿಧ ವಾದಗಳಲ್ಲಿ ಯಾವುದೇ ಸತ್ಯಾಂಶವಿಲ್ಲ” ಎಂದು ಹೇಳಿದರು.