ಬಜರಂಗದಳದ ನಾಯಕ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ!

ಬೆಂಗಳೂರು – ರಾಜ್ಯದ ಬಜರಂಗದಳದ ನಾಯಕ ಸುಹಾಸ್ ಶೆಟ್ಟಿ ಅವರ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗೆ ಹಸ್ತಾಂತರಿಸಿದೆ. ಈ ಹತ್ಯೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಜೊತೆ ಸಂಬಂಧ ಹೊಂದಿರುವ ಆರೋಪಿಗಳು ಭಾಗಿಯಾಗಿದ್ದಾರೆ. ಮೇ ೧ ರಂದು ಸುಹಾಸ್ ಶೆಟ್ಟಿ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಹತ್ಯೆಯ ಉದ್ದೇಶ ಜನರಲ್ಲಿ ಭಯ ಮತ್ತು ಆತಂಕವನ್ನು ಸೃಷ್ಟಿಸುವುದಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರು ಇಲ್ಲಿಯವರೆಗೆ ೧೬ ಜನರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಅಬ್ದುಲ್ ಸಫ್ರಾನ್, ನಿಯಾಜ್, ಮೊಹಮ್ಮದ್ ಮುಜಾಮ್ಮಿಲ್, ಕಲಂದರ್ ಶಫಿ, ಆದಿಲ್ ಮೆಹರೂಫ್, ರಿಜ್ವಾನ್ ಮುಂತಾದವರು ಸೇರಿದ್ದಾರೆ.

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾದಳವು ತನಿಖೆಗೆ ತೆಗೆದುಕೊಂಡಿರುವುದು ಅತ್ಯಂತ ಸ್ವಾಗತಾರ್ಹ ! – ಹಿಂದೂ ರಾಷ್ಟ್ರ ಸಮನ್ವಯ ಸಮಿತಿ

ಹಿಂದೂ ಸಂಘಟನೆಗಳ ಸಂಘಟಿತ ಪ್ರಯತ್ನಕ್ಕೆ ಸಂದ ಜಯ !

ಶ್ರೀ. ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ದಕ್ಷಿಣ ಕನ್ನಡ ಜಿಲ್ಲೆಯ ಬಜರಂಗದಳದ ಗೋರಕ್ಷಾ ಪ್ರಮುಖರಾದ ಸುಹಾಸ್ ಶೆಟ್ಟಿಯವರ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳವು ವಹಿಸಿಕೊಂಡಿರುವುದು ಅತ್ಯಂತ ಸ್ವಾಗತಾರ್ಹವಾಗಿದೆ. ಇದನ್ನು ಸಮಸ್ತ ಹಿಂದೂಪರ ಸಂಘಟನೆಗಳ ಒಕ್ಕೂಟವಾದ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯು ಸ್ವಾಗತ ಮಾಡುತ್ತದೆ. ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯು ಈ ಪ್ರಕರಣದಲ್ಲಿ ರಾಜ್ಯವ್ಯಾಪಿ ಆಂದೋಲನ ಮಾಡಿ, ಈ ಹತ್ಯೆಯ ಹಿಂದೆ ನಿಷೇಧಿತ ಸಂಘಟನೆಯಾದ ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ (ಪಿಎಫ್‌ಐ) ಸಂಘಟನೆಯ ಸದಸ್ಯರ ಕೈವಾಡವಿರುವ ಶಂಕೆಯಿದೆ, ಹಾಗಾಗಿ ಇದನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕು. ಎಂಬ ಬೇಡಿಕೆಯನ್ನು ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಅಡಿಯಲ್ಲಿ ಎಲ್ಲ ಸಂಘಟನೆಗಳ ಜೊತೆಗೆ ಸೇರಿ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಶಿವಮೊಗ್ಗ, ಕಾರವಾರ ಮತ್ತು ವಿಜಯಪುರ ಮುಂತಾದ ಜಿಲ್ಲಾ ಕೇಂದ್ರಗಳಲ್ಲಿ ಆಂದೋಲನ ಮಾಡಿ, ಮನವಿಯನ್ನು ರಾಜ್ಯಪಾಲರಿಗೆ ಸಲ್ಲಿಸಿತ್ತು. ಈಗ ರಾಷ್ಟ್ರೀಯ ತನಿಖಾ ದಳವು ಈ ಪ್ರಕರಣವನ್ನು ಕೈಗೆ ತೆಗೆದುಕೊಂಡಿರುವುದು ಅತ್ಯಂತ ಶ್ಲಾಘನೀಯ. ಇದು ಸಮಸ್ತ ಹಿಂದೂಪರ ಸಂಘಟನೆಗಳ ಸಂಘಟಿತ ಹೊರಾಟಕ್ಕೆ ಸಿಕ್ಕ ಮೊದಲ ವಿಜಯವಾಗಿದೆ. ರಾಷ್ಟ್ರೀಯ ತನಿಖಾ ದಳವು ಈ ಪ್ರಕರಣವನ್ನು ಗಂಭೀರವಾಗಿ ತನಿಖೆ ಮಾಡಿ, ಇದರ ಹಿಂದೆ ಇರುವ ಅಪರಾಧಿಗಳನ್ನು ಬಂಧನ ಮಾಡಿ ಸುಹಾಸ್ ಶೆಟ್ಟಿ ಹಂತಕರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಬೇಕೆಂದು ಆಗ್ರಹ ಮಾಡುತ್ತದೆ. ಅದರಿಂದಲೇ ಕರಾವಳಿ ಜಿಲ್ಲೆಗಳಲ್ಲಿ ನಿಜವಾಗಿ ಕೋಮುಸೌಹಾರ್ದವು ಉಳಿಯುವುದು ಮತ್ತು ಹಿಂದೂ ನಾಯಕರ ರಕ್ಷಣೆಯಾಗುವುದು ಎಂಬ ಭರವಸೆ ಇದೆ.