Brazilian Jonas Massetti Padma Shri: ವೇದ ಪರಂಪರೆಗಾಗಿ ಶ್ರಮಿಸುತ್ತಿರುವ ನಮ್ಮ ಕುಟುಂಬಕ್ಕೆ ಸಂದ ಗೌರವ ! – ಬ್ರೆಜಿಲ್ ನ ಜೊನಾಸ್ ಮಾಸೆಟ್ಟಿ

ವೇದಗಳ ಪ್ರಚಾರ ಮತ್ತು ಪ್ರಸಾರ ಮಾಡಿದ ಬ್ರೆಜಿಲ್ ನ ಜೊನಾಸ್ ಮಾಸೆಟ್ಟಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರೆತ ನಂತರದ ಉದ್ಗಾರ

ನವದೆಹಲಿ – ಇತ್ತೀಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮ ಪ್ರಶಸ್ತಿಗಳನ್ನು ವಿತರಿಸಿದರು. ರಾಜಕೀಯ, ಸಾಮಾಜಿಕ, ಕಲೆ, ಆಧ್ಯಾತ್ಮ, ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರಿಗೆ ಈ ಪ್ರಶಸ್ತಿಗಳನ್ನು ನೀಡಲಾಯಿತು. ಸಾಧ್ವಿ ಋತಂಬರಾ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಯಿತು ಹಾಗೂ ಬ್ರೆಜಿಲ್ ನ ವಿಶ್ವ ವಿದ್ಯಾ ಗುರುಕುಲದ ಸಂಸ್ಥಾಪಕ ಜೋನಾಸ್ ಮಾಸೆಟ್ಟಿ ಅವರಿಗೆ ವೇದ ಮತ್ತು ಭಗವದ್ಗೀತೆಯ ಪ್ರಚಾರ ಮತ್ತು ಪ್ರಸಾರಕ್ಕಾಗಿ ಪದ್ಮಶ್ರೀ ಪ್ರಶಸ್ತಿಯೊಂದಿಗೆ ಗೌರವಿಸಲಾಯಿತು. ಈ ಕುರಿತು ಜೊನಾಸ್ ಮಾಸೆಟ್ಟಿ ಮಾತನಾಡಿ, “ನನಗೆ ಇದು ಅನಿರೀಕ್ಷಿತವಾಗಿದೆ. ಇದು ದೊಡ್ಡ ಗೌರವವಾಗಿದೆ. ಬ್ರೆಜಿಲ್‌ನಲ್ಲಿ ಅನೇಕ ಜನರು ವೇದಗಳನ್ನು ಕಲಿಯುತ್ತಿದ್ದಾರೆ. ಇದು ಕೇವಲ ನನಗೊಬ್ಬನಿಗೆ ಸಂದ ಗೌರವವಲ್ಲ, ಬದಲಿಗೆ ಈ ಪರಂಪರೆಗಾಗಿ ಶ್ರಮಿಸುತ್ತಿರುವ ನಮ್ಮ ಕುಟುಂಬಕ್ಕೂ ಸಂದ ಗೌರವವಾಗಿದೆ” ಎಂದು ಹೇಳಿದರು.

ವೇದಗಳ ಅಧ್ಯಯನದ ನಂತರ, ಮಾಸೆಟ್ಟಿ ಅವರು ಬ್ರೆಜಿಲ್ ನ ರಿಯೊ ಡಿ ಜನೈರೊದಲ್ಲಿ ವಿಶ್ವ ವಿದ್ಯಾ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆಯಲ್ಲಿ ಅವರು ವೇದ, ಸಂಸ್ಕೃತ, ಭಗವದ್ಗೀತೆ ಮತ್ತು ಧ್ಯಾನದ ಕೋರ್ಸ್ಗಳನ್ನು ಪ್ರಾರಂಭಿಸಿದರು. ಮಾಸೆಟ್ಟಿ ಅವರು ಯೋಗ ಮತ್ತು ವೇದಗಳ ಕುರಿತು ಪೋರ್ಚುಗೀಸ್ ಮತ್ತು ಆಂಗ್ಲ ಭಾಷೆಗಳಲ್ಲಿ ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.