ಭಾರತ-ಪಾಕಿಸ್ತಾನ ಯುದ್ಧದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಗಳ ನಿರ್ಧಾರ
ಮುಂಬಯಿ – ಭಾರತ-ಪಾಕಿಸ್ತಾನ ಯುದ್ಧದ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ವಿಪತ್ತು ನಿರ್ವಹಣಾ ಇಲಾಖೆಗಳ ಎಲ್ಲಾ ಹಿರಿಯ ಅಧಿಕಾರಿಗಳ ರಜೆ ರದ್ದುಗೊಳಿಸುವ ನಿರ್ಧಾರವನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಅಧ್ಯಕ್ಷತೆಯಲ್ಲಿ ‘ವರ್ಷಾ’ ನಿವಾಸದಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಮುಖ್ಯಮಂತ್ರಿಗಳು ಪೊಲೀಸ್ ಮತ್ತು ಆಡಳಿತಾತ್ಮಕ ವ್ಯವಸ್ಥೆಗಳಿಂದ ರಾಜ್ಯದ ಭದ್ರತೆ ಮತ್ತು ಸನ್ನದ್ಧತೆಯ ಪರಿಶೀಲನೆ ನಡೆಸಿದರು. ಮಾಕ್ ಡ್ರಿಲ್ (ತುರ್ತು ಸನ್ನದ್ಧತೆ ತರಬೇತಿ) ಮತ್ತು ಬ್ಲ್ಯಾಕ್ ಔಟ್ (ಉದ್ದೇಶಪೂರ್ವಕ ವಿದ್ಯುತ್ ಕಡಿತ) ಗಳ ಕುರಿತು ಅವರು ಸೂಚನೆಗಳನ್ನು ನೀಡಿದರು.
ಮುಖ್ಯಮಂತ್ರಿಗಳು ನೀಡಿದ ಸೂಚನೆಗಳು!
1. ಪ್ರತಿ ಜಿಲ್ಲೆಯಲ್ಲೂ ‘ಮಾಕ್ ಡ್ರಿಲ್’ ನಡೆಸಿರಿ.
2. ಕೇಂದ್ರ ಸರಕಾರದ ‘ಯೂನಿಯನ್ ವಾರ್ ಬುಕ್’ ಅನ್ನು ಆಳವಾಗಿ ಅಧ್ಯಯನ ಮಾಡಿ ಮತ್ತು ಅದರ ಬಗ್ಗೆ ಎಲ್ಲರಿಗೂ ಮಾಹಿತಿ ನೀಡಿರಿ.
3. ಮುಂಬಯಿ ಮಹಾನಗರ ಪ್ರದೇಶ ವ್ಯಾಪ್ತಿಯ ಎಲ್ಲಾ ಮಹಾನಗರ ಪಾಲಿಕೆಗಳಿಗೆ ‘ಬ್ಲ್ಯಾಕ್ ಔಟ್’ ಕುರಿತು ಜಾಗೃತಿ ಮೂಡಿಸಲು ಹೇಳಿರಿ. ಇದರಲ್ಲಿ ಸಹಕಾರಿ ಗೃಹ ನಿರ್ಮಾಣ ಸಂಸ್ಥೆಗಳನ್ನು ಸೇರಿಸಿಕೊಳ್ಳಿರಿ.
4. ಸರಕಾರದ ಅತಿ ಮುಖ್ಯ ಮೂಲಸೌಕರ್ಯಗಳ ಮೇಲೆ ಸೈಬರ್ ದಾಳಿಗಳಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಸೈಬರ್ ವಿಭಾಗದಿಂದ ತಕ್ಷಣವೇ ಸೈಬರ್ ‘ಆಡಿಟ್’ (ಲೆಕ್ಕಪರಿಶೋಧನೆ) ನಡೆಸಬೇಕು. ಸರಕಾರ ಮತ್ತು ಭದ್ರತಾ ವ್ಯವಸ್ಥೆಗಳ ನಡುವೆ ಹೆಚ್ಚಿನ ಸಮನ್ವಯಕ್ಕಾಗಿ ಮುಂಬಯಿಯ ಮೂರು ಸೇನಾ ದಳಗಳು ಮತ್ತು ಕರಾವಳಿ ರಕ್ಷಣಾ ಪಡೆಯ ಮುಖ್ಯಸ್ಥರನ್ನು ಮುಂದಿನ ಸಭೆಗೆ ಆಹ್ವಾನಿಸಿರಿ.
5. ಪೊಲೀಸ್ ಇಲಾಖೆಯು ಎಂದಿಗಿಂತಲೂ ಹೆಚ್ಚು ಜಾಗರೂಕತೆ ವಹಿಸಬೇಕು. ದೇಶದ್ರೋಹಿ ವ್ಯಕ್ತಿಗಳ ಚಟುವಟಿಕೆಗಳು ಹೆಚ್ಚಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಗಸ್ತು ಹೆಚ್ಚಿಸಿರಿ. ಪ್ರತಿ ಜಿಲ್ಲೆಯ ಪೊಲೀಸ್ ಸೈಬರ್ ಸೆಲ್ ಸಾಮಾಜಿಕ ಮಾಧ್ಯಮಗಳ ಮೇಲೆ ನಿಗಾ ಇರಿಸಿ ಮತ್ತು ಪಾಕಿಸ್ತಾನಕ್ಕೆ ಸಹಾಯ ಮಾಡುವ ಹ್ಯಾಂಡಲ್ (ಖಾತೆ) ಗಳನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು.
6. ಶತ್ರುಗಳಿಗೆ ಸಹಾಯ ಮಾಡುವ ಅಥವಾ ತಪ್ಪು ಮಾಹಿತಿಯನ್ನು ಹರಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು.
7. ಕಡಲ ಭದ್ರತೆಯನ್ನು ಹೆಚ್ಚಿಸಲು ‘ಫಿಶಿಂಗ್ ಟ್ರಾಲರ್’ (ಮೀನುಗಾರಿಕೆ ಹಡಗು)ಗಳನ್ನು ಬಾಡಿಗೆಗೆ ತೆಗೆದುಕೊಳ್ಳಿರಿ. ಜನರಿಗೆ ನೈಜ ಮತ್ತು ಸತ್ಯ ಮಾಹಿತಿಯನ್ನು ತಲುಪಿಸಲು ಸರಕಾರದಿಂದ ವ್ಯವಸ್ಥೆಯನ್ನು ಸ್ಥಾಪಿಸಿರಿ.
8. ‘ಬ್ಲ್ಯಾಕ್ ಔಟ್’ ಸಮಯದಲ್ಲಿ ಆಸ್ಪತ್ರೆಗಳೊಂದಿಗೆ ಸಮನ್ವಯ ವ್ಯವಸ್ಥೆಯನ್ನು ಸ್ಥಾಪಿಸಿರಿ.
9. ಪರ್ಯಾಯ ವಿದ್ಯುತ್ ವ್ಯವಸ್ಥೆಯ ಮೂಲಕ ವ್ಯವಸ್ಥೆಯನ್ನು ಚಾಲನೆಯಲ್ಲಿರಿಸಿರಿ, ಗಾಢ ಬಣ್ಣದ ಪರದೆಗಳು ಅಥವಾ ಗಾಢ ಬಣ್ಣದ ಗಾಜುಗಳನ್ನು ಬಳಸಿ ಹೊರಗಿನಿಂದ ಬೆಳಕು ಕಾಣದಂತೆ ವ್ಯವಸ್ಥೆ ಮಾಡಿರಿ.
10. ಪ್ರತಿ ಜಿಲ್ಲಾಧಿಕಾರಿಗಳಿಗೂ ತುರ್ತು ನಿಧಿಯನ್ನು ನೀಡಲಾಗುವುದು. ಅದರಿಂದ ತುರ್ತು ಸಾಮಗ್ರಿಗಳ ಖರೀದಿಯನ್ನು ಮಾಡಬಹುದು. ಈ ಬಗ್ಗೆ ಮುಖ್ಯವಾದ ಪ್ರಸ್ತಾವನೆ ಬಂದರೆ ಅದನ್ನು 1 ಗಂಟೆಯಲ್ಲಿ ಅನುಮೋದಿಸಿ. “ಸೇನಾ ಪಡೆ, ಕರಾವಳಿ ರಕ್ಷಣಾ ಪಡೆಗಳ ನಡೆಯುತ್ತಿರುವ ಸಿದ್ಧತೆಯ ಚಿತ್ರೀಕರಣವನ್ನು ಯಾರೂ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊಗಳನ್ನು ಪೋಸ್ಟ್ ಮಾಡಿ ಪ್ರಸಾರ ಮಾಡಬಾರದು” ಎಂದು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಈ ಸಮಯದಲ್ಲಿ ಹೇಳಿದರು.