ಶಾಲೆಗೆ ಪೂಜ್ಯ ಹೆಡ್ಗೆವಾರ್ ಅವರ ಹೆಸರಿಗೆ ಕಾಂಗ್ರೆಸ್ ಮತ್ತು ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷದಿಂದ ವಿರೋಧ

ಪಾಲಕ್ಕಾಡ (ಕೇರಳ) – ಭಾಜಪ ಅಧಿಕಾರದಲ್ಲಿರುವ ಪಾಲಕ್ಕಾಡ ಪುರಸಭೆಯು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರಾದ ಕೇಶವ ಬಲಿರಾಮ ಹೆಡ್ಗೆವಾರ್ ಅವರ ಹೆಸರನ್ನು ಅಲ್ಲಿನ ಒಂದು ಶಾಲೆಗೆ ಇಡಲು ಬಯಸಿದೆ. ಆದರೆ ಈ ಕ್ರಮವನ್ನು ಅಲ್ಲಿನ ಕಾಂಗ್ರೆಸ್ ಮತ್ತು ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷ ತೀವ್ರವಾಗಿ ವಿರೋಧಿಸಿವೆ.

1. ವಿಶೇಷ ಚೇತನ ಮಕ್ಕಳಿಗಾಗಿ ನಿರ್ಮಿಸಲಾಗುತ್ತಿರುವ ಈ ಶಾಲೆಗೆ ಹೆಡ್ಗೆವಾರ್ ಅವರ ಹೆಸರನ್ನಿಡುವ ಪ್ರಸ್ತಾಪವನ್ನು ಪುರಸಭೆಯು ಅಂಗೀಕರಿಸಿತು. ಆದರೆ ವಿರೋಧ ಪಕ್ಷದ ಸದಸ್ಯರು ‘ಹೆಡ್ಗೆವಾರ್ ಯಾರು?’ ಎಂದು ಪ್ರಶ್ನಿಸಿದರು. ಆಗ ಭಾಜಪ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ವಾಗ್ವಾದ ನಡೆಯಿತು.

2. ಪುರಸಭೆಯ ಅಧ್ಯಕ್ಷೆ ಮತ್ತು ಭಾಜಪ ನಾಯಕಿ ಪ್ರಮಿಳಾ ಶಶಿಧರನ್ ಅವರು ಈ ಬಗ್ಗೆ ಸ್ಪಷ್ಟವಾಗಿ ಹೇಳಿಕೆ ನೀಡಿದ್ದು, ‘ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಕಾಂಗ್ರೆಸ್ ಮತ್ತು ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷ ಎಷ್ಟೇ ವಿರೋಧಿಸಿದರೂ ಪಾಲಕ್ಕಾಡನಲ್ಲಿ ಭಾಜಪ ಅಧಿಕಾರದಲ್ಲಿದೆ ಮತ್ತು ನಾವು ಸಂಸ್ಥೆಗಳಿಗೆ ಹೆಸರನ್ನಿಡುತ್ತೇವೆ.’ ಈ ಚರ್ಚೆಯ ವೇಳೆ ಶಶಿಧರನ್ ಅವರು 1921 ರಲ್ಲಿ ನಡೆದ ಮೊಪ್ಲಾ ಹತ್ಯಾಕಾಂಡವನ್ನು ಮಾಡಿದ ವರಿಯಂಕುನ್ನತ ಕುನ್ಹಾಮ್ಮದ್ ಹಾಜಿ ಅವರ ಉಲ್ಲೇಖ ಮಾಡಿದರು. ‘ಮಲಪ್ಪುರಂನಲ್ಲಿರುವ ಟೌನ್ ಹಾಲ್ ಗೆ ಹಾಜಿ ಅವರ ಹೆಸರನ್ನು ಇಟ್ಟಿರುವುದು ನಿಮಗೆ ಸರಿ ಎನಿಸುತ್ತದೆಯೇ? ಅವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರೇ?’ ಎಂದು ಶಶಿಧರನ್ ಪ್ರಶ್ನಿಸಿದರು.

3. ಪಾಲಕ್ಕಾಡನ ಕಾಂಗ್ರೆಸ್ ಶಾಸಕ ರಾಹುಲ ಮಂಕುಟ್ಟತಿಲ ಮಾತನಾಡಿ, ನಾವು ಈ ನಿರ್ಧಾರವನ್ನು ರಾಜಕೀಯ ಮತ್ತು ಕಾನೂನು ರೀತಿಯಲ್ಲಿ ವಿರೋಧಿಸುತ್ತೇವೆ. ಭಾಜಪ ಮತ್ತು ಸಂಘ ತಮ್ಮ ಧಾರ್ಮಿಕ ವಿಚಾರಗಳನ್ನು ಕೇವಲ ಹಿಂಸಾಚಾರದ ಮೂಲಕ ಹೇರಲು ಪ್ರಯತ್ನಿಸುತ್ತಿವೆ ಎಂದು ವಿಷಕಾರಿದರು.

4. ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷದ ಸದಸ್ಯರು ಪುರಸಭೆಯ ಹೊರಗೆ ಪ್ರತಿಭಟನೆ ನಡೆಸಿದರು. ಪಕ್ಷದ ಜಿಲ್ಲಾ ಕಾರ್ಯದರ್ಶಿ ಇ.ಎನ್. ಸುರೇಶ ಬಾಬು ಮಾತನಾಡಿ, ನಾವು ಶಾಲೆಗೆ ಹೆಡ್ಗೆವಾರ್ ಅವರ ಹೆಸರನ್ನು ಇಡಲು ಭಾಜಪ ಪಕ್ಷಕ್ಕೆ ಬಿಡುವುದಿಲ್ಲ.’ ‘ಕಾಂಗ್ರೆಸ್ ಕೇವಲ ನಾಟಕವಾಡುತ್ತಿದೆ. ಅದು ಸಂಘಕ್ಕೆ ಸಹಾಯ ಮಾಡುತ್ತಿದ್ದಾರೆ’ ಎಂದು ಬಾಬು ಅವರು ಆರೋಪಿಸಿದರು.

5. ಈ ಹಿಂದೆ, ಕೊಲ್ಲಂನ ಶ್ರೀ ಕೃಷ್ಣಸ್ವಾಮಿ ದೇವಸ್ಥಾನದಲ್ಲಿ ಹೆಡ್ಗೆವಾರ್ ಅವರ ಭಾವಚಿತ್ರವನ್ನು ಪ್ರದರ್ಶಿಸಿದಾಗಲೂ ವಿವಾದ ಉಂಟಾಗಿತ್ತು. ಈ ದೇವಸ್ಥಾನ ರಾಜ್ಯ ಸರಕಾರದ ದೇವಸ್ವಂ ಮಂಡಳಿಯ ವ್ಯಾಪ್ತಿಯಲ್ಲಿದೆ. ಮಂಡಳಿಯು ಈ ವಿವಾದದ ತನಿಖೆಗೆ ಆದೇಶಿಸಿತ್ತು.

ಸಂಪಾದಕೀಯ ನಿಲುವು

ಪೂ. ಹೆಡ್ಗೆವಾರ್ ಈ ದೇಶದ ಮಹಾಪುರುಷರಾಗಿದ್ದರು ಮತ್ತು ಅವರ ಹೆಸರನ್ನು ಶಾಲೆಗೆ ಇಡುತ್ತಿದ್ದರೆ, ಅದರಲ್ಲಿ ತಪ್ಪೇನು? ಗಾಂಧಿ ಕುಟುಂಬದ ಅನೇಕರು ನಿಜವಾಗಿಯೂ ದೇಶ ಮತ್ತು ಸಮಾಜಕ್ಕಾಗಿ ಏನನ್ನೂ ಮಾಡದಿದ್ದರೂ ಅವರ ಹೆಸರುಗಳನ್ನು ಅನೇಕ ಕಡೆಗಳಲ್ಲಿ ಬಳಸಲಾಗಿದೆ, ಆ ಬಗ್ಗೆ ಈ ರಾಜಕೀಯ ಪಕ್ಷಗಳು ಏನು ಹೇಳುತ್ತವೆ?