ಮೂರ್ತಿಕಾರರ ಸಂಕಷ್ಟ: ಪಿಒಪಿ ನಿಷೇಧದಿಂದ ಮಹಾರಾಷ್ಟ್ರದಲ್ಲಿ ಶೇ. 80 ರಷ್ಟು ಕೆಲಸ ಸ್ಥಗಿತ!

  • 3 ತಿಂಗಳಲ್ಲಿ ಲಕ್ಷಾಂತರ ಮಣ್ಣಿನ ಮೂರ್ತಿಗಳ ನಿರ್ಮಾಣ, ಕುಶಲಕರ್ಮಿಗಳ ಮುಂದೆ ಸವಾಲು !

  • ಸಾರ್ವಜನಿಕ ಮಂಡಳಿಗಳ ಒಲವು ‘ಫೈಬರ್’ ಕಡೆಗೆ!

(ಪಿಒಪಿ ಎಂದರೆ ಪ್ಲಾಸ್ಟರ್ ಆಫ್ ಪ್ಯಾರಿಸ್)

ಪುಣೆ – ಕೆಲವು ವರ್ಷಗಳ ಹಿಂದೆ ಮುಂಬಯಿ ಹೈಕೋರ್ಟ್ ವಿಧಿಸಿದ ‘ಪಿಒಪಿ’ ಮೇಲಿನ ನಿಷೇಧಕ್ಕೆ ಸಂಬಂಧಿಸಿದಂತೆ ಪುಣೆ ಮಹಾನಗರ ಪಾಲಿಕೆ ಈ ವರ್ಷ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ. ಪಾಲಿಕೆಯ ಆಡಳಿತವು ಅಭಿಯಾನವನ್ನು ತೀವ್ರಗೊಳಿಸಿರುವುದರಿಂದ ರಾಜ್ಯದ 80 ಪ್ರತಿಶತ ಮೂರ್ತಿ ತಯಾರಿಕಾ ಶಾಲೆಗಳಲ್ಲಿ ಗಣೇಶ ಮೂರ್ತಿಗಳನ್ನು ತಯಾರಿಸುವ ಕೆಲಸ ಸ್ಥಗಿತಗೊಂಡಿದೆ. ಪುಣೆಯ ಮೂರ್ತಿ ತಯಾರಿಕಾ ಶಾಲೆಗಳಲ್ಲಿ 80 ಪ್ರತಿಶತ ಮೂರ್ತಿಗಳನ್ನು ‘ಪಿಒಪಿ’ಯಿಂದ ಮತ್ತು 20 ಪ್ರತಿಶತ ಮೂರ್ತಿಗಳನ್ನು ಮಣ್ಣಿನಿಂದ ತಯಾರಿಸಲಾಗುತ್ತದೆ. ಮಣ್ಣಿನ ಮೂರ್ತಿಗಳ ಕೆಲಸವನ್ನು ಈಗಿನಿಂದಲೇ ಪ್ರಾರಂಭಿಸಿದರೆ, ಕೇವಲ 3 ತಿಂಗಳು ಮಾತ್ರ ಸಮಯ ಸಿಗುತ್ತದೆ. ಮೂರ್ತಿ ತಯಾರಕರು ಮೂರ್ತಿ ಸಿದ್ಧವಾದ ನಂತರ ಅದನ್ನು ಬಣ್ಣ ಬಳಿಯಬೇಕು, ಅದಕ್ಕೆ ಸಮಯ ಬೇಕಾಗುತ್ತದೆ. ಬಣ್ಣ ಹಾಕದ ಮೂರ್ತಿ ಮಳೆಗಾಲದಲ್ಲಿ ತೇವಾಂಶದಿಂದ ಒಡೆದು ಹೋಗುವ ಸಾಧ್ಯತೆ ಇರುತ್ತದೆ. ಸದ್ಯ ಪುಣೆಯಲ್ಲಿ ಗಣೇಶ ಮೂರ್ತಿಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನಿಸಿದರೆ, ಕಡಿಮೆ ಸಿಬ್ಬಂದಿಯಲ್ಲಿ ‘ಮಣ್ಣಿನ ಮೂರ್ತಿಗಳನ್ನು ಹೇಗೆ ತಯಾರಿಸುವುದು?’ ಎಂಬ ಪ್ರಶ್ನೆ ಉದ್ಭವಿಸಿದೆ.

ಸಾರ್ವಜನಿಕ ಮಂಡಳಿಗಳ ಒಲವು ‘ಫೈಬರ್’ ಕಡೆಗೆ

ಮುಂಬಯಿ ಹೈಕೋರ್ಟ್, ಗಣೇಶೋತ್ಸವದಲ್ಲಿ ಸಾರ್ವಜನಿಕ ಗಣೇಶ ಮಂಡಳಿಗಳು ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸದಂತೆ ನೋಡಿಕೊಳ್ಳಲು ರಾಜ್ಯ ಸರಕಾರಕ್ಕೆ ಸೂಚಿಸಿದೆ. ಅದರಂತೆ, ಹೆಚ್ಚಿನ ಮಂಡಳಿಗಳು ‘ಫೈಬರ್’ ಮೂರ್ತಿಗಳನ್ನು ತಯಾರಿಸಲು ಒಲವು ತೋರುತ್ತಿವೆ. (ಸಾರ್ವಜನಿಕ ಮಂಡಳಿಗಳ ಗಣೇಶ ಮೂರ್ತಿಗಳು ಎತ್ತರದಲ್ಲಿ ದೊಡ್ಡದಾಗಿರುತ್ತವೆ. ಮಣ್ಣಿನಿಂದ ದೊಡ್ಡ ಮೂರ್ತಿಗಳನ್ನು ತಯಾರಿಸಲು ಸಾಧ್ಯವಿಲ್ಲ. ಆಡಳಿತವು ಮೊದಲು ಸಣ್ಣ ಮೂರ್ತಿಗಳನ್ನು ತಯಾರಿಸಲು ಮಿತಿಗಳನ್ನು ವಿಧಿಸುವುದು ಅಗತ್ಯವಾಗಿತ್ತು! – ಸಂಪಾದಕರು)

ಸಂಪಾದಕೀಯ ನಿಲುವು

  • ‘ಪಿಒಪಿ’ಯಿಂದ ನೀರಿನ ಮಾಲಿನ್ಯವಾಗುವುದಿಲ್ಲ ಎಂದು ‘ಸೃಷ್ಟಿ ಇಕೋ ರಿಸರ್ಚ್’ ಸಂಸ್ಥೆ ವರದಿ ನೀಡಿದೆ. ‘ಪಿಒಪಿ’ ಬೇಡವೆಂದಿದ್ದರೆ, ಆಡಳಿತವು ಪಿಒಪಿ ನಿಷೇಧಿಸುವ ಮೊದಲು ಮಣ್ಣಿನಂತಹ ಪರ್ಯಾಯಗಳನ್ನು ಹೇರಳವಾಗಿ ಒದಗಿಸಿದ್ದರೆ, ಇಂದು ಈ ಕಷ್ಟಕರ ಪರಿಸ್ಥಿತಿ ಬರುತ್ತಿರಲಿಲ್ಲ!
  • ಸಾಕಷ್ಟು ಪರ್ಯಾಯಗಳನ್ನು ಒದಗಿಸದೆ ‘ಪಿಒಪಿ’ಯನ್ನು ನಿಷೇಧಿಸುವುದರಿಂದ ಉಂಟಾಗುವ ಪರಿಸ್ಥಿತಿಯ ಬಗ್ಗೆ ಆಡಳಿತಕ್ಕೆ ತಿಳಿದಿಲ್ಲವೇ? ಹೀಗೆ ಮಾಡುವುದು ಬಹುಸಂಖ್ಯಾತ ಜನರನ್ನು ಧಾರ್ಮಿಕ ಆಚರಣೆಗಳಿಂದ ದೂರವಿಟ್ಟಂತಾಗುವುದಿಲ್ಲವೇ?
  • ಮಣ್ಣು, ಜೇಡಿಮಣ್ಣು ಅಥವಾ ಪ್ಲಾಸ್ಟರ್ ಆಫ್ ಪ್ಯಾರಿಸ್‌ಗಿಂತ ಫೈಬರ್ ಮೂರ್ತಿಗಳು ಹೆಚ್ಚು ಮಾಲಿನ್ಯಕಾರಕವಾಗಿವೆ. ಈ ಮಾಲಿನ್ಯಕ್ಕೆ ಯಾರು ಹೊಣೆ?