ಉತ್ತರಾಖಂಡದ ಜೋಶಿ ಮಠದ ಬಳಿ ಹಿಮಪಾತದಿಂದಾಗಿ ಪ್ರವಾಹದಂತಹ ಪರಿಸ್ಥಿತಿ: ೧೫೦ ಕ್ಕೂ ಹೆಚ್ಚು ಜನರು ನಾಪತ್ತೆ

೧ ಜಲವಿದ್ಯುತ್ ಯೋಜನೆ, ೨ ಸೇತುವೆಗಳು ಕೊಚ್ಚಿ ಹೋದವು

ಸೇನೆಯಿಂದ ಸೇತುವೆ ನಿರ್ಮಿಸುವ ಪ್ರಯತ್ನ

ಭಾರತದಲ್ಲಿ ಆಪತ್ಕಾಲ ಪ್ರಾರಂಭವಾಗಿದೆ ಮತ್ತು ಅದು ಪ್ರತಿದಿನ ನಿಧಾನವಾಗಿ ತನ್ನ ರೌದ್ರರೂಪವನ್ನು ತೋರಿಸುತ್ತಿದೆ. ಜೋಶಿ ಮಠದಲ್ಲಿ ಹಠಾತ್ ಹಿಮಪಾತದಿಂದ ಪ್ರವಾಹದಂತಹ ಪರಿಸ್ಥಿತಿ ಉದ್ಭವಿಸುವುದು ಆಪತ್ಕಾಲದ ಪ್ರಸಂಗವಾಗಿದೆ. ಇಂತಹ ಘಟನೆಗಳು ನಿರಂತರವಾಗಿ ಸಂಭವಿಸುತ್ತಿದ್ದರೆ, ಇದರಿಂದ ಇಡೀ ಗಂಗಾ ನದಿಯ ಮೇಲೆ ಪರಿಣಾಮವಾಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗುವುದರಲ್ಲಿ ಸಂದೇಹವಿಲ್ಲ !

ಜೋಶಿ ಮಠ (ಉತ್ತರಾಖಂಡ) – ಹಿಮಾಲಯದಲ್ಲಿ ಬೆಳಿಗ್ಗೆ ೧೦ ಗಂಟೆ ಸುಮಾರಿಗೆ ಒಂದು ಹಿಮಖಂಡ ಕುಸಿದು ಉದ್ಭವಿಸಿದ ಪ್ರವಾಹದಂತಹ ಸ್ಥಿತಿಯಿಂದಾಗಿ ಇಲ್ಲಿನ ಧೌಲಿ ಗಂಗಾ ನದಿಯಲ್ಲಿ ಕಾಮಗಾರಿ ನಡೆಯುತ್ತಿದ್ದ ಒಂದು ಜಲವಿದ್ಯುತ್ ಯೋಜನೆ ಕೊಚ್ಚಿ ಹೋಗಿದೆ. ತಪೋವನ್ ಪ್ರದೇಶದ ಯೋಜನೆಯೊಂದರಲ್ಲಿದ್ದ ೧೫೦ ಕ್ಕೂ ಹೆಚ್ಚು ಕಾರ್ಮಿಕರು ನಾಪತ್ತೆಯಾಗಿದ್ದು, ನದಿಗೆ ಅಡ್ಡಲಾಗಿರುವ ಎರಡು ಸೇತುವೆಗಳೂ ಕೊಚ್ಚಿ ಹೋಗಿವೆ. ಮಲಾರಿಯನ್ನು ಗಡಿಗೆ ಸಂಪರ್ಕಿಸುವ ಸೇತುವೆಯು ಕೊಚ್ಚಿ ಹೋಗಿದೆ. ಈ ಸೇತುವೆಯು ಭಾರತೀಯ ಸೇನೆಯನ್ನು ಗಡಿಗೆ ಸಂಪರ್ಕಿಸುತ್ತದೆ. ಸೇತುವೆ ಕೊಚ್ಚಿ ಹೋಗುತ್ತಿದ್ದಂತೆ, ಸೇನೆಯು ೨೦೦ ‘ಐಟಿಬಿಪಿ’ಯ ಸೈನಿಕರನ್ನು ಜೋಶಿ ಮಠಕ್ಕೆ ಕಳುಹಿಸಿತು ಮತ್ತು ಮತ್ತೊಂದು ತಂಡವನ್ನು ಘಟನಾಸ್ಥಳಕ್ಕೆ ಕಳುಹಿಸಲಾಗಿದೆ. ಸೇತುವೆ ನಿರ್ಮಿಸಲು ಸೈನಿಕರ ತಂಡವನ್ನು ಸಹ ಕಳುಹಿಸಲಾಗಿದೆ. ಈ ಪರಿಸ್ಥಿತಿಯ ಬಗ್ಗೆ ಗೃಹ ಸಚಿವಾಲಯವು ನಿಗಾ ಇಟ್ಟಿದೆ. ಈ ನದಿಯ ಪ್ರವಾಹದಿಂದಾಗಿ ಗಂಗಾ ನದಿತೀರದಲ್ಲಿರುವ ಉತ್ತರ ಪ್ರದೇಶದ ಕಾನ್ಪುರ್ ನಗರದ ವರೆಗೆ ಎಚ್ಚರಿಕೆಯನ್ನು ನೀಡಲಾಯಿತು; ಆದರೆ ಇದರ ಪರಿಣಾಮವು ಚಮೋಲಿಯವರೆಗೆ ಮಾತ್ರ ಅನುಭವಿಸಲ್ಪಟ್ಟಿತು. ಘಟನೆಯ ನಂತರ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಆಡಳಿತವು ಪ್ರಯತ್ನಗಳನ್ನು ಪ್ರಾರಂಭಿಸಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧೀಕ್ಷಕರು ಘಟನಾಸ್ಥಳಕ್ಕೆ ಹೋಗಿದ್ದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸೈನಿಕರು ಸಹಾಯ ಮಾಡುತ್ತಿದ್ದಾರೆ ಮತ್ತು ಅನೇಕರನ್ನು ಅಪಾಯಕಾರಿ ಸ್ಥಳದಿಂದ ಸ್ಥಳಾಂತರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಘಟನೆಯನ್ನು ಗಮನಿಸಿ ರಾಜ್ಯ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರಿಗೆ ರಕ್ಷಣಾ ಕಾರ್ಯಾಚರಣೆಗಾಗಿ ಸೂಚನೆ ನೀಡಿದ್ದಾರೆ.

೧. ಚಮೋಲಿ ಜಿಲ್ಲೆಯ ರೆಣಿಯಲ್ಲಿರುವ ಜೋಶಿ ಮಠ ಪ್ರದೇಶದಲ್ಲಿ ಹಿಮಕುಸಿತ ಸಂಭವಿಸಿದೆ. ಪರಿಣಾಮವಾಗಿ ಅಣೆಕಟ್ಟಿನೊಳಗೆ ದೊಡ್ಡ ಪ್ರಮಾಣದ ನೀರು ಹರಿಯಿತು. ಈ ಹರಿವು ಧೌಲಿಗಂಗಾ ನದಿಯ ರಿಷಿ ಗಂಗಾ ವಿದ್ಯುತ್ ಯೋಜನೆಗೆ ಹೆಚ್ಚಿನ ಹಾನಿಯನ್ನುಂಟು ಮಾಡಿತು. ಈ ಅಣೆಕಟ್ಟಿನ ಗೋಡೆಯು ಧ್ವಂಸಗೊಂಡಿದ್ದರಿಂದ ಧೌಲಿಗಂಗಾ ನದಿಯ ನೀರಿನ ಮಟ್ಟವು ಭಾರಿ ಹೆಚ್ಚಳ ಕಂಡಿದೆ. ಒಮ್ಮಿಂದೊಮ್ಮೆಲೆ ಪ್ರವಾಹ ಬಂದಿದ್ದರಿಂದ ನದಿಯ ದಡದಲ್ಲಿರುವ ಮನೆಗಳಿಗೆ ಹಾನಿಯಾಗಿದ್ದು ಅನೇಕರು ನಾಪತ್ತೆಯಾಗಿದ್ದಾರೆ.

(ಸೌಜನ್ಯ : The Tribune)

೨. ಆಡಳಿತವು ರಿಷಿ ಗಂಗಾ ಜೊತೆಗೆ ಅಲಕನಂದಾ ನದಿಯುದ್ದಕ್ಕೂ ವಾಸಿಸುವ ನಾಗರಿಕರಿಗೆ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಮನವಿ ಮಾಡಿದೆ. ಅಲಕನಂದಾ ಪ್ರದೇಶದಲ್ಲಿ ಸಿಲುಕಿದ್ದ ನಾಗರಿಕರನ್ನು ಸಹ ಸ್ಥಳಾಂತರಿಸಲಾಗಿದೆ.

೩. ಅಲಕನಂದಾ ನದಿಗೆ ಪ್ರವಾಹ ಬರಬಾರದೆಂದು ಮುನ್ನೆಚ್ಚರಿಕೆ ಕ್ರಮವಾಗಿ ಭಾಗೀರಥಿ ನದಿಯ ಹರಿವನ್ನು ಮುಚ್ಚಲಾಗಿದೆ ಎಂದು ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದಾರೆ. ರಾವತ್ ಕೂಡ ಘಾಟನಾಸ್ಥಳಕ್ಕೆ ಧಾವಿಸಿದ್ದಾರೆ.