ಹುಡುಗಿಯರು ಹುಡುಗರ ಜೊತೆ ಓಡಿಹೋಗುತ್ತಾರೆ ಮತ್ತು ನಂತರ ಗರ್ಭಿಣಿಯಾಗುತ್ತಾರೆ, ಇಂತಹ ಪರಾಕ್ರಮಗಳನ್ನು ಮಾಡಬೇಡಿ!

ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೇನ್ ಪಟೇಲ್ ಅವರ ಹೇಳಿಕೆ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ನನ್ನದೇನೂ ಪ್ರೇಮ ವಿವಾಹಕ್ಕೆ ವಿರೋಧವಿಲ್ಲ. ಯಾವಾಗ ಪೋಷಕರು ಮಕ್ಕಳ ಸಂಬಂಧವನ್ನು ಒಪ್ಪಿಕೊಳ್ಳುವುದಿಲ್ಲವೋ, ಆಗ ಜೋಡಿಗಳು ಓಡಿಹೋಗಿ ಮದುವೆಯಾಗುತ್ತಾರೆ. ಇದರಿಂದಾಗಿ ಹಲವು ಬಾರಿ ಹುಡುಗಿಯರು ಶಿಕ್ಷಣ ಪಡೆಯುತ್ತಿರುವಾಗಲೇ ಗರ್ಭಿಣಿಯಾಗಿ ಮಕ್ಕಳಿಗೆ ಜನ್ಮ ನೀಡುತ್ತಾರೆ. ಅಂತಹ ಮಕ್ಕಳ ಪಾಲನೆ ಪೋಷಣೆಯ ಜವಾಬ್ದಾರಿ ಹಲವು ಬಾರಿ ಸರಕಾರದ ಮೇಲೆ ಬರುತ್ತದೆ. ಇವು ನಿಮ್ಮ ಪರಾಕ್ರಮಗಳಾಗಿವೆ. ಇಂತಹ ಪರಾಕ್ರಮಗಳನ್ನು ಮಾಡಬೇಡಿ ಎಂದು ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೇನ್ ಪಟೇಲ್ ಅವರು ಇಲ್ಲಿನ ಕಾರ್ಯಕ್ರಮವೊಂದರಲ್ಲಿ ಕರೆ ನೀಡಿದರು. ಅವರ ಈ ಹೇಳಿಕೆಯು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಆಗುತ್ತಿದ್ದು, ಇದರ ಮೇಲೆ ಅವರ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ.

ರಾಜ್ಯಪಾಲೆ ಪಟೇಲ್ ಅವರು ಮುಂದೆ ಮಾತನಾಡುತ್ತಾ, ನನ್ನ ಮಗ ಬೆಂಗಳೂರಿಗೆ ಶಿಕ್ಷಣ ಪಡೆಯಲು ಹೋಗಿದ್ದನು. ನಾನು ಅವನಿಗೆ ಹೇಳಿದ್ದೆ, ನಿನಗೆ ಯಾರಾದರೂ ಹುಡುಗಿ ಇಷ್ಟವಾದರೆ ನನಗೆ ತಿಳಿಸು, ನಾನೇ ಮದುವೆ ಮಾಡಿಸುತ್ತೇನೆ, ಆದರೆ ಅವನು ಹಾಗೇನೂ ಮಾಡಲಿಲ್ಲ. ಒಂದು ವೇಳೆ ನಿಮಗೆ ಯಾರಾದರೂ ಇಷ್ಟವಾದರೆ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಿ. ಮೊದಲು ಸ್ವಾವಲಂಬಿಗಳಾಗಿ, ಆಮೇಲೆ ಮದುವೆಯಾಗಿ, ಎಂದರು.

ಹುಡುಗಿಯರು ಐ.ಎ.ಎಸ್. ಆಗುವ ಮುನ್ನ ಉತ್ತಮ ತಾಯಿಯಾಗಬೇಕು!

ರಾಜ್ಯಪಾಲೆ ಆನಂದಿಬೇನ್ ಪಟೇಲ್ ಅವರು ಮುಂದುವರಿದು ಮಾತನಾಡುತ್ತಾ, ಇತ್ತೀಚಿನ ದಿನಗಳಲ್ಲಿ ಹುಡುಗಿಯರು ಮದುವೆಯಾಗಿ ಗಂಡನ ಮನೆಗೆ ಹೋಗುತ್ತಾರೆ, ಆಗ ಯೂಟ್ಯೂಬ್ ನೋಡಿ ಅಡುಗೆ ಮಾಡುತ್ತಾರೆ. ವಿಡಿಯೋ ನೋಡಿ ಅರೆಬರೆ ಅಡುಗೆ ಮಾಡುತ್ತಾರೆ. ನಂತರ ಅತ್ತೆಯ ಮಾತುಗಳನ್ನು ಕೇಳಬೇಕಾಗುತ್ತದೆ. ಅದಕ್ಕಾಗಿಯೇ ನಾನು ಮಹಿಳೆಯರಿಗೆ ಹೇಳುತ್ತೇನೆ, ಕನಿಷ್ಠ ಪಕ್ಷ ಅಡುಗೆ ಮಾಡುವುದಾದರೂ ಅವರಿಗೆ ಬರಲೇಬೇಕು. ನೀವು ಶಿಕ್ಷಕರಾಗಿ ಅಥವಾ ಐ.ಎ.ಎಸ್. (ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವಿಸ್ – ಭಾರತೀಯ ಆಡಳಿತ ಸೇವೆ) ಅಧಿಕಾರಿಯಾಗಿ, ಆದರೆ ಅದಕ್ಕಿಂತ ಮುಂಚೆ ನೀವು ಉತ್ತಮ ತಾಯಿಯಾಗಬೇಕು ಎಂದು ಹೇಳಿದರು.