ಶಾಲಾ ಗ್ರಂಥಾಲಯದಲ್ಲಿ ಭಯೋತ್ಪಾದಕರನ್ನು ವೈಭವೀಕರಿಸುವ ಪುಸ್ತಕ? : Kashmir Controversy

ಪುಸ್ತಕದಲ್ಲಿ ಭಯೋತ್ಪಾದಕ ಮಕ್ಬೂಲ್ ಭಟ್‌ನನ್ನು ‘ಶಹೀದ್’ (ಹುತಾತ್ಮ) ಎಂದೂ, ಪ್ರತ್ಯೇಕತಾವಾದಿಗಳನ್ನು ‘ಸ್ವಾತಂತ್ರ್ಯ ಹೋರಾಟಗಾರರು’ ಎಂದೂ ಉಲ್ಲೇಖ

ಭಯೋತ್ಪಾದಕ ಮಕ್ಬೂಲ್ ಭಟ್

ಶ್ರೀನಗರ (ಕಾಶ್ಮೀರ) – ಒಂದೆಡೆ ರಾಜ್ಯದಲ್ಲಿ ಪರಿಸ್ಥಿತಿ ಸಹಜವಾಗಿದೆ ಎಂದು ಸರಕಾರ ದಾವೆ ಮಾಡುತ್ತಿದ್ದರೆ, ಇನ್ನೊಂದೆಡೆ ಇಲ್ಲಿನ ಹೊಸ ಪೀಳಿಗೆಗೆ ಹಿಂಸಾಚಾರದ ಪಾಠಗಳನ್ನು ಕಲಿಸಲಾಗುತ್ತಿದೆ ಎಂಬುದು ಬಹಿರಂಗವಾಗಿದೆ. ಜಮ್ಮು ಮತ್ತು ಕಾಶ್ಮೀರದ ಸಮಗ್ರ ಶಿಕ್ಷಣ ನೀತಿಯಡಿ ಶಾಲೆಗಳ ಗ್ರಂಥಾಲಯಗಳಲ್ಲಿ ಲಭ್ಯವಾಗುವಂತೆ ಮಾಡಲಾದ ‘ಗ್ರೇಟ್ ಆಂಡ್ ಲೆಜೆಂಡರಿ ಪರ್ಸನಾಲಿಟೀಸ್ ಆಫ್ ಜಮ್ಮು ಆಂಡ್ ಕಾಶ್ಮೀರ್’ ಹೆಸರಿನ ಪುಸ್ತಕದಲ್ಲಿ ಭಯೋತ್ಪಾದಕ ಮಕ್ಬೂಲ್ ಭಟ್‌ನನ್ನು ‘ಶಹೀದ್’ ಎಂದೂ, ಪ್ರತ್ಯೇಕತಾವಾದಿಗಳನ್ನು ‘ಸ್ವಾತಂತ್ರ್ಯ ಹೋರಾಟಗಾರರು’ ಎಂದೂ ವೈಭವೀಕರಿಸಲಾಗಿದೆ. ಈ ಪುಸ್ತಕವನ್ನು ‘ಒಬೆರಾಯ್ ಬುಕ್ಸ್ ಸರ್ವಿಸಸ್’ ಎಂಬ ಖಾಸಗಿ ಪ್ರಕಾಶನ ಸಂಸ್ಥೆ ಪ್ರಕಟಿಸಿದ್ದು, ಇದನ್ನು ಹಿಲಾಲ್ ಅಹ್ಮದ್ ಮತ್ತು ಸಂತೋಷ್ ಮೀನಾ ಬರೆದಿದ್ದಾರೆ.

೧. ‘ಜಮ್ಮು ಮತ್ತು ಕಾಶ್ಮೀರ್ ಪೀಪಲ್ಸ್ ಫೋರಂ’ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಈ ಪುಸ್ತಕವನ್ನು ಸಾರ್ವಜನಿಕಗೊಳಿಸಿ, ರಾಜ್ಯ ಸರಕಾರದ ಉದ್ದೇಶಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ ಮತ್ತು ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.

೨. ‘ಜಮ್ಮು ಮತ್ತು ಕಾಶ್ಮೀರ್ ಪೀಪಲ್ಸ್ ಫೋರಂ’ನ ಉಪಾಧ್ಯಕ್ಷ ರಘು ಮೆಹ್ತಾ ಮತ್ತು ಟ್ರಸ್ಟಿ ದೀಪಕ್ ಕಪೂರ್ ಅವರು, ಈ ಪುಸ್ತಕದಲ್ಲಿ ಭಯೋತ್ಪಾದಕ ಮಕ್ಬೂಲ್ ಭಟ್‌ನನ್ನು ‘ಶಹೀದ್-ಎ-ಆಜಮ್’ ಎಂದೂ ಮತ್ತು ಪ್ರತ್ಯೇಕತಾವಾದಿ ನಾಯಕರಾದ ಸೈಯದ್ ಅಲಿ ಶಾ ಗೀಲಾನಿ, ಶಬ್ಬೀರ್ ಅಹ್ಮದ್ ಶಾ, ಮಸ್ರತ್ ಆಲಂ ಮತ್ತು ಮೌಲ್ವಿ ಫಾರೂಕ್ ಅವರನ್ನು ‘ಕಾಶ್ಮೀರದ ಸ್ವಾತಂತ್ರ್ಯ ಹೋರಾಟಗಾರರು’ ಎಂದು ಚಿತ್ರಿಸಲಾಗಿದೆ ಎಂದು ತಿಳಿಸಿದ್ದಾರೆ.

೩. ರಾಜ್ಯ ಸರಕಾರವು ‘ಸಮಗ್ರ ಶಿಕ್ಷಣ ಯೋಜನೆ’ಯಡಿ ೨೦೨೫-೨೬ರ ಶೈಕ್ಷಣಿಕ ವರ್ಷಕ್ಕಾಗಿ ಈ ಪುಸ್ತಕವನ್ನು ಖರೀದಿಸಿದ್ದು, ರಾಜ್ಯದ ಎಲ್ಲಾ ಸರಕಾರಿ ಶಾಲೆಗಳ ಗ್ರಂಥಾಲಯಗಳಲ್ಲಿ ಲಭ್ಯವಾಗುವಂತೆ ಮಾಡಿದೆ.

೪. ಈ ಪುಸ್ತಕದಲ್ಲಿ ಮಕ್ಬೂಲ್ ಭಟ್ ಆಧಾರಿತ ಅಧ್ಯಾಯವೊಂದರಲ್ಲಿ ಭಾರತವನ್ನು ‘ಆಕ್ರಮಣಕಾರಿ’ ಎಂದು ಚಿತ್ರಿಸಲಾಗಿದೆ. ಇದರೊಂದಿಗೆ ಮಕ್ಬೂಲ್ ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾನೆ ಎಂದು ಹೇಳಲಾಗಿದೆ.

೫. ವಾಸ್ತವವಾಗಿ, ಆಗಿನ ಅಪರಾಧ ತನಿಖಾ ಇಲಾಖೆಯ (ಸಿಐಡಿ) ಪೊಲೀಸ್ ಅಧಿಕಾರಿ ಅಮರ್ ಚಂದ್ ಮತ್ತು ಭಾರತೀಯ ರಾಜತಾಂತ್ರಿಕರ ಕೊಲೆ ಪ್ರಕರಣದಲ್ಲಿ ಮಕ್ಬೂಲ್‌ನನ್ನು ಫೆಬ್ರವರಿ ೧೧.೧೯೮೪ ರಂದು ಗಲ್ಲಿಗೇರಿಸಲಾಗಿತ್ತು.

ಸಂಪಾದಕೀಯ ನಿಲುವು

  • ಇದರಿಂದ ‘ಕಾಶ್ಮೀರದಲ್ಲಿ ಆರ್ಟಿಕಲ್ 370 ಅನ್ನು ರದ್ದುಗೊಳಿಸಲಾಗಿದ್ದರೂ, ನ್ಯಾಷನಲ್ ಕಾನ್ಫರೆನ್ಸ್ ಸರಕಾರ ಮತ್ತು ಆಡಳಿತದ ಭಯೋತ್ಪಾದಕರು ಹಾಗೂ ಪ್ರತ್ಯೇಕತಾವಾದಿಗಳನ್ನು ವೈಭವೀಕರಿಸುವ ಪ್ರವೃತ್ತಿ ದೂರವಾಗಿಲ್ಲ’ ಎಂಬುದು ಸ್ಪಷ್ಟವಾಗುತ್ತದೆ. ಇಂತಹವರ ಆಡಳಿತದಲ್ಲಿ ಕಾಶ್ಮೀರದಲ್ಲಿ ಮತ್ತೆ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದ ಬೆಳೆದರೆ ಆಶ್ಚರ್ಯಪಡಬೇಕಾಗಿಲ್ಲ!
  • ಎಲ್ಲಿ ಸರಕಾರಿ ಮಟ್ಟದಲ್ಲೇ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದವನ್ನು ಪೋಷಿಸಲಾಗುತ್ತಿದೆಯೋ, ಅಲ್ಲಿ ಎಂದಾದರೂ ದೇಶಭಕ್ತಿ ಮೂಡಲು ಸಾಧ್ಯವೇ?