ದೆಹಲಿಯ ಹೋಟೆಲ್‌ ನಲ್ಲಿ ಭೀಕರ ಅಗ್ನಿ ದುರಂತ: 21 ಜನರ ಸಾವು

  • ಮೃತ ಪಟ್ಟವರಲ್ಲಿ ವಿದೇಶಿ ನಾಗರಿಕರು ಹೆಚ್ಚು

  • ಹೋಟೆಲ್ ನಿಂದ ಸರಕಾರಿ ನಿಯಮಗಳ ಉಲ್ಲಂಘನೆಯಿಂದಾಗಿ ಹೆಚ್ಚಿದ ಸಾವಿನ ಸಂಖ್ಯೆ

ನವದೆಹಲಿ – ದೆಹಲಿಯ ಮಾಳವೀಯ ನಗರದಲ್ಲಿರುವ ‘ಲೆಮನ್ ಗ್ರೀನ್ ರೆಸ್ಟೋರೆಂಟ್’ ಹೋಟೆಲ್‌ ನಲ್ಲಿ ಜೂನ್ 3 ರ ಬೆಳಗ್ಗೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 21 ಜನರು ಸಾವನ್ನಪ್ಪಿದ್ದಾರೆ. ಮೃತರ ಪೈಕಿ ವಿದೇಶಿ ನಾಗರಿಕರೇ ಹೆಚ್ಚಾಗಿದ್ದಾರೆ. ಗಾಯಗೊಂಡ 39 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ 15 ಜನರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಅಗ್ನಿ ದುರಂತಕ್ಕೀಡಾದ ಕಟ್ಟಡವು 6 ಅಂತಸ್ತಿನದ್ದಾಗಿದ್ದು, ಈ ಹಿಂದೆ ಇದರಲ್ಲಿ ‘ಫ್ಲೋರಿಸ್ ಸ್ಟೇ’ ಹೋಟೆಲ್ ಕಾರ್ಯನಿರ್ವಹಿಸುತ್ತಿತ್ತು. ಇದುವರೆಗೆ ಕಟ್ಟಡದಿಂದ ಸುಮಾರು 37 ಜನರನ್ನು ಸುರಕ್ಷಿತವಾಗಿ ಹೊರತರಲಾಗಿದೆ. ಬೆಂಕಿ ಎಷ್ಟು ಭೀಕರವಾಗಿತ್ತೆಂದರೆ, ಹಲವರು ಪ್ರಾಣ ಉಳಿಸಿಕೊಳ್ಳಲು ಹೋಟೆಲ್‌ ನ ಮೇಲಿನ ಅಂತಸ್ತುಗಳಿಂದ ಕೆಳಗೆ ಜಿಗಿದಿದ್ದಾರೆ. ರಕ್ಷಣಾ ಕಾರ್ಯದ ಸಮಯದಲ್ಲಿ 10 ಮಂದಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಅವರನ್ನೂ ಸಹ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿ ತಗುಲಲು ನಿಖರವಾದ ಕಾರಣ ಏನೆಂಬುದು ಇದುವರೆಗೂ ಸ್ಪಷ್ಟವಾಗಿಲ್ಲ.

ವಿದ್ಯುತ್ ಸ್ಥಗಿತಗೊಂಡು ಎಲೆಕ್ಟ್ರಾನಿಕ್ ಪ್ರವೇಶ ದ್ವಾರ ಮುಚ್ಚಿ ಕೊಂಡಿದ್ದರಿಂದ ಜನರು ಒಳಗೇ ಸಿಲುಕಿದರು !

ಕಟ್ಟಡದ ಮುಖ್ಯ ಪ್ರವೇಶ ದ್ವಾರವು ಎಲೆಕ್ಟ್ರಾನಿಕ್ ವ್ಯವಸ್ಥೆಯನ್ನು ಹೊಂದಿತ್ತು. ಬೆಂಕಿ ಹೊತ್ತಿಕೊಂಡಾಗ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಈ ದ್ವಾರವು ಸ್ವಯಂಚಾಲಿತವಾಗಿ ಮುಚ್ಚಿ ಕೊಂಡಿತು. ಇದರಿಂದಾಗಿ ಜನರು ಹೊರಗೆ ಬರುವ ದಾರಿ ಮುಚ್ಚಿ ಕೊಂಡಿತು. ಸ್ಥಳೀಯರು ತಕ್ಷಣವೇ ಗಾಜುಗಳನ್ನು ಒಡೆದು ಒಳಗೆ ಸಿಲುಕಿದ್ದ ಜನರಿಗೆ ಸಹಾಯ ಮಾಡಲು ಯತ್ನಿಸಿದರು. ಕೆಲವು ಜನರು ಎರಡನೇ ಅಂತಸ್ತಿನಿಂದ ಕೆಳಗೆ ಜಿಗಿದಿದ್ದರಿಂದ ತೀವ್ರವಾಗಿ ಗಾಯಗೊಂಡರು. ಮೇಲಿಂದ ಜಿಗಿಯುವವರ ಪ್ರಾಣ ಉಳಿಸಲು ಸ್ಥಳೀಯರು ಹತ್ತಿರದ ಹೋಟೆಲ್‌ ಗಳಿಂದ ಹಾಸಿಗೆಗಳನ್ನು ತಂದು ನೆಲದ ಮೇಲೆ ಹಾಸಿದರು. ಮಹಿಳೆಯೊಬ್ಬರು ಹಗ್ಗದ ಸಹಾಯದಿಂದ ಕೆಳಗೆ ಇಳಿಯಲು ಪ್ರಯತ್ನಿಸುತ್ತಿದ್ದಾಗ ಕೈ ಜಾರಿ ಹಾಸಿಗೆಯ ಮೇಲೆ ಬಿದ್ದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಗ್ನಿಶಾಮಕ ದಳ ಬರುವವರೆಗೂ ಸ್ಥಳೀಯರೇ ನಿರಂತರವಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.

ಪ್ರಧಾನಿ ಮೋದಿ ಅವರಿಂದ ಸಂತಾಪ

ಪ್ರಧಾನಿ ನರೇಂದ್ರ ಮೋದಿ ಅವರು ಈ ದುರಂತಕ್ಕೆ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ. (ಗಾಯಾಳುಗಳಿಗೆ ಇನ್ನೂ ಹೆಚ್ಚಿನ ಮೊತ್ತವನ್ನು ನೀಡುವುದು ಅಗತ್ಯವಾಗಿದೆ; ಏಕೆಂದರೆ ಚಿಕಿತ್ಸೆಯ ವೆಚ್ಚದ ಜೊತೆಗೆ, ಅಪಘಾತದಲ್ಲಿ ವಿಕಲಚೇತನರಾದರೆ ಜೀವನ ನಡೆಸಲು ಹೆಚ್ಚಿನ ಹಣದ ಅವಶ್ಯಕತೆ ಇರುತ್ತದೆ. – ಸಂಪಾದಕರು)

6 ಕೋಣೆಗಳಿಗೆ ಮಾತ್ರ ಅನುಮತಿ ಇತ್ತು, ಆದರೆ ಕಟ್ಟಿದ್ದು 25 ಕೋಣೆಗಳು

ಕಟ್ಟಡದ ನೆಲ ಅಂತಸ್ತಿನಲ್ಲಿ ರೆಸ್ಟೋರೆಂಟ್ ನಡೆಸಲಾಗುತ್ತಿತ್ತು, ಉಳಿದ ಭಾಗವನ್ನು ಹೋಟೆಲ್ ಆಗಿ ಬಳಸಲಾಗುತ್ತಿತ್ತು. ಹೋಟೆಲ್‌ ಗೆ ಪ್ರವೇಶಿಸಲು ಮತ್ತು ಹೊರಬರಲು ಕೇವಲ ಒಂದೇ ಒಂದು ಮಾರ್ಗವಿತ್ತು. ಹೋಟೆಲ್‌ನಲ್ಲಿ ಕೇವಲ 6 ಕೋಣೆಗಳನ್ನು ನಿರ್ಮಿಸಲು ಸರಕಾರದಿಂದ ಅನುಮತಿ ನೀಡಲಾಗಿತ್ತು; ಆದರೆ ಇಲ್ಲಿ ಕಾನೂನುಬಾಹಿರವಾಗಿ 25 ಕೋಣೆಗಳನ್ನು ನಿರ್ಮಿಸಲಾಗಿತ್ತು.

ಸಂಪಾದಕೀಯ ನಿಲುವು

  • ಹೋಟೆಲ್‌ಗಳು, ವಸತಿ ನಿಲಯಗಳು, ಕಚೇರಿಗಳು, ಖಾಸಗಿ ಸಂಸ್ಥೆಗಳು ಮತ್ತು ಅಂಗಡಿ ಮುಂಗಟ್ಟುಗಳ ಕಟ್ಟಡಗಳಲ್ಲಿ ಸರಕಾರಿ ನಿಯಮಗಳನ್ನು ಬಹಿರಂಗವಾಗಿ ಉಲ್ಲಂಘಿಸಲಾಗುತ್ತದೆ ಎಂಬುದು ಇದುವರೆಗೆ ದೇಶಾದ್ಯಂತ ನಡೆದಿರುವ ಇಂತಹ ಘಟನೆಗಳಿಂದ ಸದಾ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಇದಾದ ನಂತರವೂ ದೇಶದ ಯಾವುದೇ ಆಡಳಿತವಾಗಲಿ ಅಥವಾ ಸರಕಾರವಾಗಲಿ ಎಚ್ಚೆತ್ತುಕೊಳ್ಳುವುದಿಲ್ಲ. ಪರಿಣಾಮವಾಗಿ ಇಂತಹ ಘಟನೆಗಳು ಮರುಕಳಿಸಿ ಸಾರ್ವಜನಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಭ್ರಷ್ಟಾಚಾರವೇ ಅತ್ಯಂತ ಪ್ರಮುಖ ಕಾರಣವಾಗಿದೆ!
  • ಈ ಘಟನೆಯ ನಂತರವೂ ರಾಜಧಾನಿ ದೆಹಲಿಯಲ್ಲಿ ಆಡಳಿತ, ಪೊಲೀಸ್ ಮತ್ತು ಅಗ್ನಿಶಾಮಕ ದಳದವರು ಎಚ್ಚೆತ್ತುಕೊಂಡು ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಾರೆ ಎಂಬ ಭರವಸೆ ಜನಸಾಮಾನ್ಯರಿಗಿಲ್ಲ. ಹಾಗಾಗಿ ಇಂತಹ ದುರಂತಗಳು ಮತ್ತೆ ಸಂಭವಿಸುವ ಸಾಧ್ಯತೆ ದಟ್ಟವಾಗಿದೆ!