ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಪರಮಾಣುಬಾಂಬುಗಳನ್ನು ಹೊತ್ತೊಯ್ಯಬಲ್ಲ ಖಂಡಾಂತರ ‘ಅಗ್ನಿ’ ಕ್ಷಿಪಣಿಯಾಸ್ತ್ರದ ಯಶಸ್ವಿ ಪರೀಕ್ಷೆ !

ಒಂದೇ ಸಮಯದಲ್ಲಿ ಅನೇಕ ಗುರಿಗಳ ಮೇಲೆ ದಾಳಿ ನಡೆಸಲು ಸಾಧ್ಯ

ಭುವನೇಶ್ವರ (ಒಡಿಶಾ) – ಭಾರತವು ಮೇ ೮ ರಂದು ಏಕಕಾಲದಲ್ಲಿ ಅನೇಕ ಪರಮಾಣುಬಾಂಬುಗಳನ್ನು ಹೊತ್ತೊಯ್ಯುವ ಖಂಡಾಂತರ ‘ಅಗ್ನಿ-೫’ ಕ್ಷಿಪಣಿಯಾಸ್ತ್ರದ ಯಶಸ್ವಿ ಪರೀಕ್ಷೆಯನ್ನು ನಡೆಸಿತು. ಒಡಿಶಾದ ಡಾ. ಎಪಿಜೆ ಅಬ್ದುಲ್ ಕಲಾಂ ಕ್ಷಿಪಣಿಯಾಸ್ತ್ರ ಪರೀಕ್ಷಾ ಕೇಂದ್ರದಿಂದ ಈ ಯಶಸ್ವಿ ಪರೀಕ್ಷೆ ನಡೆಸಲಾಗಿದೆ. ಈ ಕ್ಷಿಪಣಿಯಾಸ್ತ್ರದಲ್ಲಿ ‘ಮಲ್ಟಿಪಲ್ ಇಂಡಿಪೆಂಡೆಂಟ್ಲಿ ಟಾರ್ಗೆಟೆಡ್ ರೀ-ಎಂಟ್ರಿ ವೆಹಿಕಲ್’ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಇದರಿಂದ ಏಕಕಾಲದಲ್ಲಿ ಅನೇಕ ಪರಮಾಣುಬಾಂಬುಗಳನ್ನು ಹೊತ್ತೊಯ್ಯಬಹುದು. ಅಲ್ಲದೆ, ಒಂದೇ ಸಮಯದಲ್ಲಿ ವಿವಿಧ ಗುರಿಗಳ ಮೇಲೆ ದಾಳಿ ಮಾಡಬಹುದು. ಪರೀಕ್ಷೆಯ ಸಮಯದಲ್ಲಿ ಕ್ಷಿಪಣಿಯಾಸ್ತ್ರವು ಬೇರೆ ಬೇರೆ ಸ್ಥಳಗಳಲ್ಲಿದ್ದ ಅನೇಕ ಗುರಿಗಳನ್ನು ಯಶಸ್ವಿಯಾಗಿ ಧ್ವಂಸಗೊಳಿಸಿತು. ಈ ಎಲ್ಲಾ ಗುರಿಗಳು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಹರಡಿಕೊಂಡಿದ್ದವು.

ಅಗ್ನಿ ಕ್ಷಿಪಣಿಯಾಸ್ತ್ರವು ಭಾರತದ ಎರಡನೇ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯಾಸ್ತ್ರವಾಗಿದೆ. ಇದರ ದಾಳಿಯ ಸಾಮರ್ಥ್ಯ ಸುಮಾರು ೫ ಸಾವಿರದಿಂದ ೭ ಸಾವಿರ ಕಿಲೋಮೀಟರಗಳಷ್ಟಿದೆ. ಇದರ ವೇಗವು ಎಷ್ಟು ಅಧಿಕವಾಗಿದೆಯೆಂದರೆ, ಶತ್ರುಗಳ ರಾಡಾರ್ (ರೇಡಿಯೋ ತರಂಗಗಳ ಸಹಾಯದಿಂದ ವಸ್ತುಗಳನ್ನು ಹುಡುಕುವ ಮತ್ತು ಅವುಗಳ ದೂರವನ್ನು ಅಳೆಯುವ ವ್ಯವಸ್ಥೆ) ಮತ್ತು ಕ್ಷಿಪಣಿಯಾಸ್ತ್ರ ರಕ್ಷಣಾ ವ್ಯವಸ್ಥೆಗಳಿಗೆ ಇದನ್ನು ತಡೆಯುವುದು ಬಹುತೇಕ ಅಸಾಧ್ಯವಾಗಿದೆ.

ಈ ಕ್ಷಿಪಣಿಯಾಸ್ತ್ರವು ಒಂದೂವರೆ ಟನ್‌ ವರೆಗೆ ಪರಮಾಣುಬಾಂಬುಗಳನ್ನು ಹೊತ್ತೊಯ್ಯಬಲ್ಲದು. ಇದರ ವೇಗವು ‘ಮ್ಯಾಕ್ ೨೪’ ಆಗಿದೆ, ಅಂದರೆ ಶಬ್ದದ ವೇಗಕ್ಕಿಂತ ೨೪ ಪಟ್ಟು ಹೆಚ್ಚಾಗಿದೆ. ಪರಸ್ಪರ ನೂರಾರು ಕಿಲೋಮೀಟರ್ ದೂರದಲ್ಲಿರುವ ಅನೇಕ ಗುರಿಗಳನ್ನು ಒಂದೇ ಕ್ಷಿಪಣಿಯಾಸ್ತ್ರದ ಮೂಲಕ ನಾಶಪಡಿಸಬಹುದು. ವಿಶ್ವದ ಅಮೆರಿಕಾ, ರಷ್ಯಾ, ಚೀನಾ, ಭಾರತ, ಫ್ರಾನ್ಸ್ ಮತ್ತು ಬ್ರಿಟನ್ ದೇಶಗಳ ಬಳಿ ಮಾತ್ರ ಇಂತಹ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯಾಸ್ತ್ರದ ತಂತ್ರಜ್ಞಾನವಿದೆ.

‘ಅಗ್ನಿ-೫’ರ ಉಡಾವಣಾ ವ್ಯವಸ್ಥೆಯಲ್ಲಿ ‘ಕ್ಯಾನಿಸ್ಟರ್’ ತಂತ್ರಜ್ಞಾನವನ್ನು ಬಳಸಲಾಗಿದೆ. ಇದರಿಂದಾಗಿ ಈ ಕ್ಷಿಪಣಿಯಾಸ್ತ್ರವನ್ನು ಎಲ್ಲಿಗೆ ಬೇಕಾದರೂ ಸುಲಭವಾಗಿ ಸಾಗಿಸಬಹುದು. ಈ ಕಾರಣದಿಂದಾಗಿ ಇದನ್ನು ದೇಶದ ಯಾವುದೇ ಭಾಗದಲ್ಲಿ ನಿಯೋಜಿಸಲು ಸಾಧ್ಯವಾಗುತ್ತದೆ.