‘ತಿರುಮಲ ತಿರುಪತಿ ದೇವಸ್ಥಾನಂ’ ಹಿಂದೂ ಮಕ್ಕಳಿಗೆ ಧರ್ಮಶಿಕ್ಷಣ ನೀಡಲಿ! Religious Education Tirumala Temple

‘ಗ್ಲೋಬಲ್ ಹಿಂದೂ ಹೆರಿಟೇಜ್ ಫೌಂಡೇಶನ್’ನಿಂದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಮನವಿ

ತಿರುಪತಿ (ಆಂಧ್ರಪ್ರದೇಶ) – ಭಾರತದಲ್ಲಿ ಹಾಗೂ ವಿದೇಶಗಳಲ್ಲಿ ಸನಾತನ ಧರ್ಮದ ಸಂರಕ್ಷಣೆ ಮತ್ತು ಪ್ರಸಾರಕ್ಕಾಗಿ ತಿರುಮಲ ತಿರುಪತಿ ದೇವಸ್ಥಾನಂ (‘ಟಿಟಿಡಿ’) ಹಿಂದೂ ಮಕ್ಕಳಿಗಾಗಿ ಪ್ರತ್ಯೇಕ ಧರ್ಮಶಿಕ್ಷಣ ವರ್ಗಗಳನ್ನು ಪ್ರಾರಂಭಿಸಬೇಕೆಂದು ‘ಗ್ಲೋಬಲ್ ಹಿಂದೂ ಹೆರಿಟೇಜ್ ಫೌಂಡೇಶನ್’ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಮನವಿಯ ಮೂಲಕ ಒತ್ತಾಯಿಸಿದೆ.

‘ಗ್ಲೋಬಲ್ ಹಿಂದೂ ಹೆರಿಟೇಜ್ ಫೌಂಡೇಶನ್’ನ ಅಧ್ಯಕ್ಷ ಪ್ರೊ. ಪ್ರಕಾಶರಾವ್ ವಿ. ವೆಲಗಪುಡಿ ಅವರು ಸಹಿ ಮಾಡಿರುವ ಈ ಮನವಿಯ ಪ್ರತಿಯನ್ನು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತು ‘ಟಿಟಿಡಿ’ ಕಾರ್ಯನಿರ್ವಹಣಾಧಿಕಾರಿ ಡಾ. ಅನಿಲ್ ಸಿಂಘಲ್ ಅವರಿಗೂ ಕಳುಹಿಸಲಾಗಿದೆ. ಈ ಮನವಿಯಲ್ಲಿ ಅನಿ ಬೆಸೆಂಟ್ ಅವರ ವಿಚಾರಗಳನ್ನು ಉಲ್ಲೇಖಿಸಲಾಗಿದೆ. ಅನಿ ಬೆಸೆಂಟ್ ಅವರು, “40 ವರ್ಷಗಳ ಕಾಲ ಜಗತ್ತಿನ ಪ್ರಮುಖ ಧರ್ಮಗಳನ್ನು ಅಧ್ಯಯನ ಮಾಡಿದ ನಂತರ ನನಗೆ ಹಿಂದೂ ಧರ್ಮದ ಶ್ರೇಷ್ಠತೆ ಅರಿವಾಯಿತು. ಹಿಂದೂ ಧರ್ಮವಿಲ್ಲದೆ ಭಾರತದ ಅಸ್ತಿತ್ವ ಮತ್ತು ಭವಿಷ್ಯ ಸಾಧ್ಯವಿಲ್ಲ. ಭಾರತದ ಬೇರುಗಳು ಸನಾತನ ಧರ್ಮದಲ್ಲಿ ಆಳವಾಗಿ ನೆಲೆಗೊಂಡಿದ್ದು, ಸ್ವಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸುವ ಜವಾಬ್ದಾರಿ ಹಿಂದೂ ಸಮಾಜದ ಮೇಲೆಯೇ ಇದೆ. ಹಿಂದೂಗಳೇ ಹಿಂದೂ ಧರ್ಮವನ್ನು ಉಳಿಸದಿದ್ದರೆ, ಅದನ್ನು ಕಾಪಾಡುವವರು ಯಾರೂ ಇರುವುದಿಲ್ಲ” ಎಂದು ಹೇಳಿದ್ದರು.

ಈ  ಮನವಿಯಲ್ಲಿರುವ ಅಂಶಗಳು:

1.‘ಟಿಟಿಡಿ’ಯ ಹಿಂದೂ ಧರ್ಮ ಪ್ರಚಾರ ಪರಿಷತ್ತಿನ ವತಿಯಿಂದ ಹಿಂದೂ ಮಕ್ಕಳಿಗೆ ಶಾಸ್ತ್ರ, ಧರ್ಮ, ನೀತಿ, ಸಂಸ್ಕೃತಿ ಮತ್ತು ಪರಂಪರೆಯ ಶಿಕ್ಷಣ ನೀಡುವುದು ಅತ್ಯಗತ್ಯ. 5 ವರ್ಷದ ವಯಸ್ಸಿನಿಂದಲೇ ಮಕ್ಕಳಿಗೆ ಧರ್ಮಶಿಕ್ಷಣ ನೀಡಬೇಕು. ‘ಟಿಟಿಡಿ’ ಅಡಿಯಲ್ಲಿರುವ ಶ್ರೀ ವೆಂಕಟೇಶ್ವರನ ಎಲ್ಲಾ ದೇವಸ್ಥಾನಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಂದೂ ಧರ್ಮದ ಪಠ್ಯಕ್ರಮಗಳನ್ನು ಪ್ರಾರಂಭಿಸಬೇಕು.

2.ಈ ಧರ್ಮ ಶಿಕ್ಷಣ ವರ್ಗಗಳಲ್ಲಿ ಓಂಕಾರ ಜಪ, ಗಣಪತಿ ಪ್ರಾರ್ಥನೆ, ಗುರುಸ್ತುತಿ, ಸೂರ್ಯನಮಸ್ಕಾರ, ನೀತಿಕಥೆಗಳು, ರಾಷ್ಟ್ರಪುರುಷರ ಮಾಹಿತಿ, ಹಿಂದೂ ಧರ್ಮದ ವೈಜ್ಞಾನಿಕತೆ, ದೇವಸ್ಥಾನಗಳು ಮತ್ತು ಸಂಪ್ರದಾಯಗಳ ಮಹತ್ವ, ರಾಮಾಯಣ, ಮಹಾಭಾರತ ಹಾಗೂ ಪುರಾಣ ಕಥೆಗಳು, ಭಗವದ್ಗೀತೆಯ ಶ್ಲೋಕಗಳು, ಭಜನೆಗಳು, ಯೋಗ ಮತ್ತು ಧ್ಯಾನ, ಸಮಾಜ ಸೇವೆಯ ಮೌಲ್ಯ ಹಾಗೂ ಶಾಂತಿ ಮಂತ್ರಗಳನ್ನು ಕಲಿಸಬೇಕು.

ಹಲವು ತಲೆಮಾರುಗಳಿಂದ ಹಿಂದೂಗಳಿಗೆ ಧರ್ಮದ ಜ್ಞಾನ ನೀಡದ ಕಾರಣ ಮತಾಂತರ!

ಹಲವು ತಲೆಮಾರುಗಳಿಂದ ಹಿಂದೂಗಳು ತಮ್ಮ ಧಾರ್ಮಿಕ, ತಾತ್ವಿಕ ಮತ್ತು ಸಾಂಸ್ಕೃತಿಕ ಜ್ಞಾನವನ್ನು ಮುಂದಿನ ಪೀಳಿಗೆಗೆ ಪರಿಣಾಮಕಾರಿಯಾಗಿ ತಲುಪಿಸಿಲ್ಲ. ಇದರ ಪರಿಣಾಮವಾಗಿ, ಹಿಂದೂ ಧರ್ಮದ ಬಗ್ಗೆ ಸಾಕಷ್ಟು ಜ್ಞಾನವಿಲ್ಲದ ಕಾರಣ ಮಕ್ಕಳು ಹಾಗೂ ವಯಸ್ಕರು ಮತಾಂತರದ ಆಮಿಷಕ್ಕೆ ಒಳಗಾಗುತ್ತಿದ್ದಾರೆ. ವೈಜ್ಞಾನಿಕ, ತಾತ್ವಿಕ, ಆಧ್ಯಾತ್ಮಿಕ ಮತ್ತು ನೈತಿಕ ಮೌಲ್ಯಗಳ ಪರಿಚಯವಿಲ್ಲದ ಕಾರಣ ಸಮಾಜವು ದುರ್ಬಲವಾಗುತ್ತಿದೆ.

ಸಂಪಾದಕೀಯ ನಿಲುವು

  • ವಾಸ್ತವವಾಗಿ ದೊಡ್ಡ ದೇವಸ್ಥಾನಗಳು ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವುದು ಅಪೇಕ್ಷಿತವಾಗಿದೆ; ಆದರೆ ಇಂದು ಅದೇ ದೇವಸ್ಥಾನಗಳು ಸರಕಾರದ ನಿಯಂತ್ರಣದಲ್ಲಿರುವುದರಿಂದ ಮತ್ತು ಸರಕಾರವು ಸರ್ವಧರ್ಮ ಸಮಭಾವವನ್ನು ಪಾಲಿಸುವುದರಿಂದ, ಹಿಂದೂ ಭಕ್ತರು ಅರ್ಪಿಸಿದ ಹಣವನ್ನು ಸರಕಾರವು ಹಿಂದೂಗಳ ಧರ್ಮಶಿಕ್ಷಣಕ್ಕಾಗಿ ಬಳಸುವ ಬದಲು ಸಾಮಾಜಿಕ, ಶೈಕ್ಷಣಿಕ ಮುಂತಾದ ಚಟುವಟಿಕೆಗಳಿಗೆ ನೀಡುತ್ತದೆ! ದೇವರ ಹಣದ ಇಂತಹ ದುರುಪಯೋಗವನ್ನು ಹಿಂದೂಗಳು ತಡೆಯುವುದು ಯಾವಾಗ?
  • ಯಾವುದಾದರೂ ಮುಸ್ಲಿಂ ಸಂಘಟನೆಯು ಮಸೀದಿ ಅಥವಾ ಮದರಸಾಗಳ ಮುಂದೆ ಎಂದಾದರೂ ಇಂತಹ ಬೇಡಿಕೆಯನ್ನಿಡಬೇಕಾದ ಪರಿಸ್ಥಿತಿ ಬಂದಿದೆಯೇ?