Sarsanghchalak P.P. Mohanji Bhagwat : ಮುಂಬರುವ 20 ರಿಂದ 30 ವರ್ಷಗಳಲ್ಲಿ ಭಾರತ ‘ವಿಶ್ವಗುರು’ ಆಗಲಿದೆ !

ಪ . ಪೂ.ಸರಸಂಘಚಾಲಕ ಡಾ. ಮೋಹನಜಿ ಭಾಗವತ ಅವರ ಆಶ್ವಾಸನೆ

ಮಥುರಾ (ಉತ್ತರ ಪ್ರದೇಶ): “ಸಂತರ ಸಹವಾಸದಲ್ಲಿರುವುದು ಮತ್ತು ಅವರ ಬೋಧನೆಗಳಲ್ಲಿ ಕನಿಷ್ಠ ಒಂದನ್ನಾದರೂ ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡುವುದು ಅತ್ಯಗತ್ಯ. ಈ ರೀತಿ ನಮ್ಮ ಜೀವನವನ್ನು ರೂಪಿಸಿಕೊಳ್ಳುತ್ತಾ ಮತ್ತು ಎಲ್ಲರನ್ನೂ ಒಗ್ಗೂಡಿಸುತ್ತಾ ಸಾಗಿದರೆ, ಮುಂಬರುವ 20 ರಿಂದ 30 ವರ್ಷಗಳಲ್ಲಿ ಭಾರತವು ವಿಶ್ವಗುರು ಆಗಲಿದೆ. ಇಡೀ ಜಗತ್ತಿಗೆ ಸುಖ-ಶಾಂತಿಯನ್ನು ನೀಡುವ ಹೊಸ ಹಾದಿಯನ್ನು ಭಾರತ ತೋರಿಸಲಿದೆ,” ಭಾರತ ಹಿಂದೂ ರಾಷ್ಟ್ರ ಮತ್ತು ಧರ್ಮ ರಾಷ್ಟ್ರವಾಗುವುದು. ಯಾರೂ ಕೂಡ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಭಾರತದ ಹಿಂದಿನ ಉದ್ದೇಶ ಇದೇ ಆಗಿದೆ ಮತ್ತು ಇದು ಸ್ಪಷ್ಟವಾಗಿ ಬಹಿರಂಗವಾಗಿದೆ. ಈಗ ಸಿದ್ಧತೆಯ ಅವಶ್ಯಕತೆಯಿದೆ, ಎಂದು ಪ. ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ ಇವರು ಇಲ್ಲಿ ಹೇಳಿದರು. ಬೃಂದಾವನದಲ್ಲಿನ ಸುಧಾಮ ಕುಟಿ ಆಶ್ರಮದ ಸಂಸ್ಥಾಪಕ ಸಂತ ಸುಧಾಮ ದಾಸ ಮಹಾರಾಜ ಅವರ ೧೦ ದಿನದ ಶತಾಬ್ದಿ ಮಹೋತ್ಸವ ಸಮಾರಂಭದ ಉದ್ಘಾಟನೆಯ ಸಮಯದಲ್ಲಿ ಅವರು ಮಾತನಾಡುತ್ತಿದ್ದರು.

ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ ಅವರು ಮಾಡಿದ ಮಾರ್ಗದರ್ಶನ

ಒಗ್ಗಟ್ಟಿನಿಂದ ಅಸುರಿ ಶಕ್ತಿಗಳು ದುರ್ಬಲಗೊಳ್ಳಲಿವೆ: “ಸಮಾಜದಲ್ಲಿರುವ ಎಲ್ಲಾ ಅಸುರಿ ಶಕ್ತಿಗಳು ಕ್ರಮೇಣ ದುರ್ಬಲಗೊಳ್ಳುತ್ತವೆ. ಧಾರ್ಮಿಕ ಸಮಾಜ ಮತ್ತು ಸನಾತನ ಸಮಾಜದ ಜನರು ಒಂದಾದಂತೆ ಈ ಶಕ್ತಿಗಳ ನಾಶವಾಗುತ್ತದೆ. ಕಳೆದ 50 ವರ್ಷಗಳಲ್ಲಿ ಹಿಂದೂ ಸಮಾಜವು ಹೆಚ್ಚು ಸಂಘಟಿತವಾದಂತೆ, ಈ ದುಷ್ಟ ಶಕ್ತಿಗಳು ಚದುರಿಹೋಗಿವೆ.”

ಸುಲ್ತಾನರ ಆಳ್ವಿಕೆಯಲ್ಲೂ ಹಿಂದೂ ಸಮಾಜ ನಾಶವಾಗಲಿಲ್ಲ: “ಸುಲ್ತಾನರು ಮತ್ತು ಬಾದಶಹರ ಆಳ್ವಿಕೆಯಲ್ಲಿ ಹಿಂದೂ ಸಮಾಜವು ಸುಮಾರು 500 ವರ್ಷಗಳ ಕಾಲ ಜೀವನ ನಡೆಸಿತು. ಒಂದು ವೇಳೆ ಹಿಂದೂ ಸಮಾಜ ನಾಶವಾಗಬೇಕಾಗಿದ್ದರೆ ಅದು ಆಗಲೇ ಆಗುತ್ತಿತ್ತು. ಆದರೂ ಹಿಂದೂ ಸಮಾಜವು ಉಳಿದುಕೊಂಡಿದೆ ಮತ್ತು ಇಂದು ಮತ್ತೆ ಹಿಂದೂಗಳ ದೇಶವಾಗಿ ಮುನ್ನಡೆಯುತ್ತಿದೆ.”

ರಾಷ್ಟ್ರವು ಧರ್ಮಕ್ಕಾಗಿಯೇ ನಿರ್ಮಾಣವಾಗಿದೆ:

“ಭಾರತ ರಾಷ್ಟ್ರದ ನಿರ್ಮಾಣವು ಧರ್ಮಕ್ಕಾಗಿಯೇ ಆಗಿದೆ. ಕಾಲಕ್ಕೆ ತಕ್ಕಂತೆ ಜಗತ್ತಿಗೆ ಧರ್ಮಜ್ಞಾನದ ಮೂಲಕ ಮಾರ್ಗದರ್ಶನ ಮಾಡುವುದು ಮತ್ತು ಸ್ವಂತ ಆಚರಣೆಯ ಮೂಲಕ ಧರ್ಮಮಯ ಜೀವನವನ್ನು ಹೇಗೆ ಬದುಕಬೇಕೆಂದು ತೋರಿಸುವುದು ನಮ್ಮ ಕರ್ತವ್ಯವಾಗಿದೆ. ಯಾವಾಗ ವಾನರ ಸೈನ್ಯ ಸಿದ್ಧವಾಗುತ್ತದೆಯೋ ಆಗ ಪ್ರಭು ಶ್ರೀರಾಮ ಪ್ರಕಟವಾಗುತ್ತಾರೆ. ಯಾವಾಗ ಪಾಂಡವರು ಯುದ್ಧಕ್ಕೆ ಸನ್ನದ್ಧರಾಗುತ್ತಾರೋ ಆಗ ಶ್ರೀಕೃಷ್ಣನೇ ಸಾರಥಿಯಾಗುತ್ತಾನೆ. ಅನೇಕ ಬಾರಿ ನಮ್ಮ ಸಿದ್ಧತೆ ಅಪೂರ್ಣವಾಗಿರುವುದರಿಂದ ಕಾರ್ಯವು ಅರ್ಧಕ್ಕೆ ನಿಂತುಹೋಗುತ್ತದೆ.”

ಭೇದ-ಭಾವ ಮುಕ್ತ ಭಾರತದ ಅವಶ್ಯಕತೆ: “ದೇಶಕ್ಕೆ ಭೇದ-ಭಾವ ಮುಕ್ತವಾದ ಭಾರತದ ಅಗತ್ಯವಿದೆ. ಹಿಂದೂ ಸಮಾಜವು ಎಂದಿಗೂ ಇತರರ ಶೌರ್ಯ ಅಥವಾ ಸಾಮರ್ಥ್ಯದಿಂದ ಸೋಲಲಿಲ್ಲ. ನಮಗೆ ಸೋಲಾಗಿದ್ದು ಯಾವಾಗ, ಅದು ಕೇವಲ ನಮ್ಮಲ್ಲಿನ ಒಡಕಿನಿಂದ ಮಾತ್ರ. ಯಾವುದೇ ರೀತಿಯ ಭೇದ-ಭಾವವಿಲ್ಲದೆ ಪರಸ್ಪರ ಸ್ನೇಹ ಬೆಳೆಸಬೇಕು. ಹಿಂದೂ ಸಮಾಜವು ಭಾಷೆ, ಪಂಥ, ಜಾತಿಯಂತಹ ವೈವಿಧ್ಯತೆಗಳಿಂದ ಕೂಡಿದೆ. ಹಿಂದೂಗಳೆಂದು ಪರಿಗಣಿಸಲಾಗುವ ಎಲ್ಲಾ ಜನರ ನಡುವೆ ಸ್ನೇಹವಿರಬೇಕು.”

ಭಕ್ತಿಯೇ ನಿಜವಾದ ಶಕ್ತಿ:

“ನಾವು ಈ ಸೃಷ್ಟಿಯ ಒಂದು ಭಾಗ. ಸೃಷ್ಟಿಯ ಜೊತೆಗಿನ ಆಪ್ತತೆ ಭಕ್ತಿಯಿಂದ ನಿರ್ಮಾಣವಾಗುತ್ತದೆ. ಎಲ್ಲರನ್ನೂ ಜೋಡಿಸುವುದೇ ಭಕ್ತಿ. ಸತ್ಸಂಗ ಬಹಳ ಮುಖ್ಯ, ಏಕೆಂದರೆ ಯಾರು ಈಗಾಗಲೇ ಧರ್ಮದೊಂದಿಗೆ ಜೋಡಿಸಲ್ಪಟ್ಟಿದ್ದಾರೋ ಅವರೊಂದಿಗಿರುವುದರಿಂದ ನಮ್ಮ ಜೀವನ ರೂಪಗೊಳ್ಳುತ್ತದೆ. ಭಕ್ತಿಯೇ ನಿಜವಾದ ಶಕ್ತಿಯಾಗಿದೆ. ತಪಸ್ಸು ಮಾಡುವ ಸಂತರ ಛಾಯೆಯಲ್ಲಿ ನಾವಿರುವುದರಿಂದ ನಮ್ಮ ಅಸ್ತಿತ್ವವನ್ನು ಯಾರೂ ನಾಶಮಾಡಲು ಸಾಧ್ಯವಿಲ್ಲ. ಧರ್ಮದ ಬೆಳಕಿನಿಂದ ಇಡೀ ಜಗತ್ತನ್ನು ಬೆಳಗಿಸುವುದೇ ನಮ್ಮ ಗುರಿಯಾಗಿದೆ.”