ಅಸ್ಸಾಂ: ಆದಿವಾಸಿಗಳ ಹಿಂಸಾಚಾರ; ೨ ಸಾವು, ೩೮ ಪೊಲೀಸರಿಗೆ ಗಾಯ

ಗುವಾಹಟಿ (ಅಸ್ಸಾಂ) – ಅಸ್ಸಾಂನ ಕಾರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಸತತ ಎರಡನೇ ದಿನ ಆದಿವಾಸಿಗಳು ನಡೆಸಿದ ಹಿಂಸಾಚಾರದಲ್ಲಿ ಇಬ್ಬರ ಸಾವಾಗಿದೆ, ಹಾಗೂ ೩೭ ಮಂದಿ ಪೊಲೀಸರು ಸೇರಿದಂತೆ ೪೫ ಜನರು ಗಾಯಗೊಂಡಿದ್ದಾರೆ. ಸುಟ್ಟಿರುವ ಕಟ್ಟಡವೊಂದರಿಂದ ೨೫ ವರ್ಷದ ಸುರೇಶ್‌ ಡೇ ಅವರ ಮೃತದೇಹವನ್ನು ಹೊರತೆಗೆಯಲಾಗಿದೆ, ಮತ್ತು ಅಥಿಕ್ ತಿಮುಂಗ್ ಎಂಬವರು ಈ ಸಂಘರ್ಷದ ಸಮಯದಲ್ಲಿ ಅಸುನೀಗಿದ್ದಾರೆ. ಹಿಂಸಾಚಾರದಲ್ಲಿ ಅನೇಕ ಅಂಗಡಿಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿ ಪ್ರಹಾರ ಮಾಡಬೇಕಾಯಿತು, ಹಾಗೂ ಅಶ್ರುವಾಯು ಪ್ರಯೋಗಿಸಬೇಕಾಯಿತು. ಸ್ಥಳೀಯ ಸರ್ಕಾರವು ಕಾರ್ಬಿ ಆಂಗ್ಲಾಂಗ್ ಮತ್ತು ಪಶ್ಚಿಮ ಕಾರ್ಬಿ ಆಂಗ್ಲಾಂಗ್ ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿದೆ. ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ಏನಿದು ಪ್ರಕರಣ?

ವಿವಿಧ ರಾಜಕೀಯ ಪಕ್ಷಗಳು ಮತ್ತು ಸಾಮಾಜಿಕ ಸಂಘಟನೆಗಳಿಗೆ ಸಂಬಂಧಿಸಿದ ಆದಿವಾಸಿ ಪ್ರತಿಭಟನಕಾರರು, ಕಾರ್ಬಿ ಆಂಗ್ಲಾಂಗ್ ಮತ್ತು ಪಶ್ಚಿಮ ಕಾರ್ಬಿ ಆಂಗ್ಲಾಂಗ್ ಜಿಲ್ಲೆಗಳಲ್ಲಿರುವ ವಾಣಿಜ್ಯ ಮೇವು ಮೀಸಲು ಮತ್ತು ಗ್ರಾಮೀಣ ಮೇವು ಮೀಸಲು ಪ್ರದೇಶಗಳಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಜನರನ್ನು ತೆರವುಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಇದರಿಂದಾಗಿ ಈ ಹಿಂಸಾಚಾರ ನಡೆಯುತ್ತಿದೆ. ಈ ಪ್ರಕರಣದಲ್ಲಿ ಬಿಜೆಪಿಯ ಒಬ್ಬ ನಾಯಕರ ಮನೆಯನ್ನು ಸಹ ಸುಟ್ಟು ಹಾಕಲಾಗಿದೆ.