ನಾಗಪುರ: ಕೃತಕ ಬುದ್ಧಿಮತ್ತೆಯಿಂದ ಅಪಘಾತ ಪ್ರಕರಣ ಇತ್ಯರ್ಥ !

  • ಉತ್ತರ ಪ್ರದೇಶದ ಟ್ರಕ್ ಚಾಲಕನ ಬಂಧನ!

  • ಕೃತಕ ಬುದ್ಧಿಮತ್ತೆಯಿಂದ ಅಪರಾಧವನ್ನು ಭೇದಿಸಿದ ಮಹಾರಾಷ್ಟ್ರದ ಮೊದಲ ಪ್ರಕರಣ!

ನಾಗಪುರ – ಕಳೆದ ವಾರ ವೇಗವಾಗಿ ಬಂದ ಟ್ರಕ್ ಒಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಆಕೆಯ ಶವವನ್ನು ಮನೆಗೆ ಕೊಂಡೊಯ್ಯಲು ಹೆದ್ದಾರಿಯಲ್ಲಿ ಯಾರೂ ಸಹಾಯಕ್ಕೆ ಬರಲಿಲ್ಲ. ಇದರಿಂದ ಆಕೆಯ ಅಸಹಾಯಕ ಪತಿ ದ್ವಿಚಕ್ರ ವಾಹನದಲ್ಲೇ ಪತ್ನಿಯ ಶವವನ್ನು ಇರಿಸಿಕೊಂಡು ಮನೆ ತಲುಪಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಪೊಲೀಸರು ಈ ಅಪಘಾತದ ತನಿಖೆ ನಡೆಸುತ್ತಿದ್ದರು. ಟ್ರಕ್‌ ನ ಮೇಲೆ ಕೆಂಪು ಗುರುತು ಇತ್ತು ಎಂಬ ಮಾಹಿತಿ ಲಭ್ಯವಿತ್ತು. ಪೊಲೀಸರು ಕೃತಕ ಬುದ್ಧಿಮತ್ತೆಯ(ಎಐ) ಸಹಾಯದಿಂದ ಈ ಪ್ರಕರಣವನ್ನು ಭೇದಿಸಿ, ಟ್ರಕ್ ಚಾಲಕನನ್ನು ಬಂಧಿಸಿದ್ದಾರೆ. ಎಐ ಬಳಸಿ ಅಪರಾಧವನ್ನು ಭೇದಿಸಿದ ಮಹಾರಾಷ್ಟ್ರ ರಾಜ್ಯದ ಮೊದಲ ಪ್ರಕರಣ ಇದಾಗಿದೆ.

1. ಪೊಲೀಸರು ‘ಮಾರ್ವಲ್’ ಎಂಬ ಸರಕಾರಿ ಸಂಸ್ಥೆಯ ಸಹಾಯವನ್ನು ಪಡೆದರು. ಇದಕ್ಕಾಗಿ, ಮೂರು ಟೋಲ್ ಪ್ಲಾಜಾಗಳಿಂದ 12 ಗಂಟೆಗಳ ಸಿಸಿಟಿವಿ ದೃಶ್ಯಾವಳಿಗಳ ಮಾಹಿತಿಯನ್ನು ಸಂಗ್ರಹಿಸಿ, ‘AI’ ಅಲ್ಗೊರಿದಮ್ ಅನ್ನು ಬಳಸಲಾಯಿತು.

2. ಟ್ರಕ್‌ ನ ವೇಗ ಮತ್ತು ಅದರ ಮೇಲಿದ್ದ ಕೆಂಪು ಗುರುತಿನ ಆಧಾರದ ಮೇಲೆ ಅಪಘಾತಕ್ಕೆ ಕಾರಣವಾದ ಟ್ರಕ್ ಅನ್ನು ಪತ್ತೆಹಚ್ಚಲಾಯಿತು. ನಂತರ, ಟ್ರಕ್ ಚಾಲಕನನ್ನು ಉತ್ತರ ಪ್ರದೇಶದ ಫರೂಕಾಬಾದ್‌ ನಲ್ಲಿ ಬಂಧಿಸಲಾಯಿತು.