ಚೀನಾ ನಿರ್ಮಿಸುತ್ತಿರುವ ಅತಿ ದೊಡ್ಡ ಅಣೆಕಟ್ಟು ಭಾರತಕ್ಕೆ ‘ವಾಟರ್ ಬಾಂಬ್’!

ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರಿಂದ ಕಳವಳ ವ್ಯಕ್ತ

ಇಟಾನಗರ (ಅರುಣಾಚಲ ಪ್ರದೇಶ) – ಚೀನಾ ‘ಯಾರಲುಂಗ್ ತ್ಸಾಂಗಪೊ’ ನದಿಗೆ ನಿರ್ಮಿಸುತ್ತಿರುವ ವಿಶ್ವದ ಅತಿ ದೊಡ್ಡ ಅಣೆಕಟ್ಟು ಗಂಭೀರವಾದ ಕಳವಳಕಾರಿ ವಿಷಯವಾಗಿದೆ. ಏಕೆಂದರೆ ಚೀನಾ ಅಂತರರಾಷ್ಟ್ರೀಯ ಜಲ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಆದ್ದರಿಂದ ಅದು ಏನು ಮಾಡುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಚೀನಾದಿಂದ ಸೈನ್ಯದ ಬೆದರಿಕೆಗಳ ಹೊರತಾಗಿ, ಇದು ಯಾವುದೇ ಇತರ ಸಮಸ್ಯೆಗಿಂತ ದೊಡ್ಡ ಸಮಸ್ಯೆಯಾಗಿದೆ. ಇದು ನಮ್ಮ ಜೀವನದ ಅಸ್ತಿತ್ವಕ್ಕೆ ದೊಡ್ಡ ಅಪಾಯವಾಗಿದೆ. ಇದು ಬಹಳ ಗಂಭೀರ ವಿಷಯವಾಗಿದೆ; ಏಕೆಂದರೆ ಚೀನಾ ಇದನ್ನು ‘ವಾಟರ್ ಬಾಂಬ್’ ನಂತೆ ಬಳಸಬಹುದು, ಎಂದು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಆತಂಕ ವ್ಯಕ್ತಪಡಿಸಿದ್ದಾರೆ. ಅವರು ‘ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ’ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದರು. ಬ್ರಹ್ಮಪುತ್ರ ನದಿಯನ್ನು ಟಿಬೆಟ್‌ನಲ್ಲಿ ‘ಯಾರಲುಂಗ ಸಾಂಗಪೊ’ ಎಂದು ಕರೆಯಲಾಗುತ್ತದೆ.

ಮುಖ್ಯಮಂತ್ರಿ ಪ್ರೇಮಾ ಖಂಡು ಅವರು ಮಾತನ್ನು ಮುಂದುವರೆಸುತ್ತಾ,

೧. ಚೀನಾ ಅಂತರರಾಷ್ಟ್ರೀಯ ಜಲ ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದರೆ, ಯಾವುದೇ ಸಮಸ್ಯೆ ಇರುತ್ತಿರಲಿಲ್ಲ; ಏಕೆಂದರೆ ಆ ಯೋಜನೆ ಭಾರತಕ್ಕೆ ವರದಾನವಾಗುತ್ತಿತ್ತು. ಇದರ ಮೂಲಕ ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಬಾಂಗ್ಲಾದೇಶದಲ್ಲಿ ಬ್ರಹ್ಮಪುತ್ರ ನದಿಗೆ ಮಳೆಗಾಲದಲ್ಲಿ ಬರುವ ಪ್ರವಾಹವನ್ನು ತಡೆಯಬಹುದಿತ್ತು; ಆದರೆ ಚೀನಾ ಸಹಿ ಹಾಕದಿರುವುದರಿಂದ ಸಮಸ್ಯೆಗಳು ಉದ್ಭವಿಸಲಿವೆ.

೨. ಅಣೆಕಟ್ಟು ಪೂರ್ಣಗೊಂಡ ನಂತರ ಅವರು ಇದ್ದಕ್ಕಿದ್ದಂತೆ ನೀರನ್ನು ಬಿಟ್ಟರೆ, ನಮ್ಮ ಸಂಪೂರ್ಣ ಸಿಯಾಂಗ್ ಪ್ರದೇಶ ನಾಶವಾಗುತ್ತದೆ. ಇದರಿಂದ ಆದಿವಾಸಿ ಬುಡಕಟ್ಟು ಜನಾಂಗಗಳು ಮತ್ತು ಅವರಂತಹ ಸಮುದಾಯಗಳು ತಮ್ಮ ಸಂಪೂರ್ಣ ಆಸ್ತಿ, ಭೂಮಿಯನ್ನು ಕಳೆದುಕೊಳ್ಳುವುದಲ್ಲದೆ, ಮಾನವ ಜೀವಕ್ಕೆ ವಿನಾಶಕಾರಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದಕ್ಕಾಗಿಯೇ ಅರುಣಾಚಲ ಪ್ರದೇಶ ಸರಕಾರವು ಭಾರತ ಸರಕಾರದೊಂದಿಗೆ ಸಮಾಲೋಚಿಸಿ ‘ಸಿಯಾಂಗ್ ಅಪ್ಪರ್ ಮಲ್ಟಿಪರ್ಪಸ್ ಪ್ರಾಜೆಕ್ಟ್’ ಎಂಬ ಯೋಜನೆಯನ್ನು ರೂಪಿಸಿದೆ, ಇದು ರಕ್ಷಣಾ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಜಲ ಸುರಕ್ಷತೆಯನ್ನು ಖಚಿತಪಡಿಸುತ್ತದೆ.

೩. ಚೀನಾದ ಈ ಕೃತಿಯ ವಿರುದ್ಧ ಕೇಂದ್ರ ಸರಕಾರ ಕೇವಲ ವಿರೋಧ ದಾಖಲಿಸಿ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಚೀನಾಕ್ಕೆ ಯಾರು ತಿಳಿಸುತ್ತಾರೆ? ಚೀನಾಕ್ಕೆ ನಾವು ನಮ್ಮ ಕಾರಣವನ್ನು ಹೇಳಲು ಸಾಧ್ಯವಿಲ್ಲ. ಬದಲಾಗಿ ನಾವು ನಮ್ಮ ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಚೀನಾದ ಅಣೆಕಟ್ಟು ಹಿಮಾಲಯ ಪರ್ವತ ಶ್ರೇಣಿಯ ವಿಶಾಲ ಭಾಗದಲ್ಲಿ ನಿರ್ಮಿಸಲ್ಪಡುತ್ತಿದೆ. ಅಲ್ಲಿಂದ ನದಿಯು ಅರುಣಾಚಲ ಪ್ರದೇಶಕ್ಕೆ ಹರಿಯಲು ತಿರುವು ಪಡೆಯುತ್ತದೆ.