ಯೋಗಿ ಆದಿತ್ಯನಾಥ್ ಸಹಿತ ಸಚಿವರಿಂದ ಸಂಗಮ ಸ್ನಾನ !

  • ಸಂಗಮಕ್ಷೇತ್ರದಲ್ಲಿ ನಡೆದ ಸಚಿವ ಸಂಪುಟ ಸಭೆ !

  • ಮಹತ್ವಾಕಾಂಕ್ಷೆಯ ಯೋಜನೆ ‘ಗಂಗಾ ಎಕ್ಸ್‌ಪ್ರೆಸ್‌ವೇ’ಗೆ ಅನುಮೋದನೆ !

ಗಂಗಾನದಿಯಲ್ಲಿ ಸ್ನಾನ ಮಾಡುತ್ತಿವಾಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಇತರ ಸಚಿವರು

ಪ್ರಯಾಗರಾಜ್ – ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಅವರ ಸಂಪುಟದ ಬಹುತೇಕ ಎಲ್ಲಾ ಸಚಿವರು ಜನವರಿ 22 ರಂದು ಪವಿತ್ರ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರು. ಅದಾದ ನಂತರ, ಮುಖ್ಯಮಂತ್ರಿಗಳು ಗಂಗಾ ಪೂಜೆ ನೆರವೇರಿಸಿ ಗಂಗಾ ನದಿಯ ಆರತಿಯನ್ನು ನೆರವೇರಿಸಿದರು.

ಗಂಗಾ ಪೂಜೆ ನೆರವೇರಿಸುತ್ತಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಬೆಳಿಗ್ಗೆ ಸಂಗಮಕ್ಷೇತ್ರದಲ್ಲಿ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಸಂಗಮಕ್ಷೇತ್ರದಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಎರಡನೇ ಸಚಿವ ಸಂಪುಟ ಸಭೆ ಇದಾಗಿದೆ. ಇದಕ್ಕೂ ಮೊದಲು, 2019 ರ ಅರ್ಧ ಕುಂಭ ಮೇಳದಲ್ಲಿ, ಸಂಗಮಕ್ಷೇತ್ರದಲ್ಲಿ ಸಚಿವ ಸಂಪುಟ ಸಭೆಯೂ ನಡೆದಿತ್ತು. ಈ ಸಭೆಯಲ್ಲಿ, ಅವರು ವ್ಯವಹಾರ, ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಹಲವಾರು ನೀತಿ ನಿರ್ಧಾರಗಳನ್ನು ತೆಗೆದುಕೊಂಡರು. ಇದರೊಂದಿಗೆ ಯೋಗಿ ಆದಿತ್ಯನಾಥ್ ಸರಕಾರದ ಮಹತ್ವಾಕಾಂಕ್ಷೆಯ ‘ಗಂಗಾ ಎಕ್ಸ್‌ಪ್ರೆಸ್‌ವೇ’ ಯೋಜನೆಗೆ ಹಸಿರು ನಿಶಾನೆ ತೋರಿಸಲಾಯಿತು. ಈ ಹೆದ್ದಾರಿಯನ್ನು ಪ್ರಯಾಗರಾಜ್‌ನಿಂದ ಮಿರ್ಜಾಪುರ, ಭದೋಹಿ, ವಾರಣಾಸಿ, ಚಂದೌಲಿ ಮೂಲಕ ಘಾಜಿಪುರಕ್ಕೆ ನಿರ್ಮಿಸಲಾಗುವುದು. ನಂತರ ಅದನ್ನು ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಗೆ ಸಂಪರ್ಕಿಸಲಾಗುತ್ತದೆ. ಇದು ಉತ್ತರ ಪ್ರದೇಶ ರಾಜ್ಯದ ಪೂರ್ವ ಮತ್ತು ಪಶ್ಚಿಮ ಭಾಗಗಳ ನಡುವಿನ ಸಂಪರ್ಕವನ್ನು ಬಲಪಡಿಸುತ್ತದೆ ಮತ್ತು ರಾಜ್ಯದ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ ಎಂದು ಸಭೆಯಲ್ಲಿ ವ್ಯಕ್ತವಾಯಿತು.