ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದಿಂದ ಮಾನ್ಯ ಧಾರ್ಮಿಕ ದತ್ತಿ ಇಲಾಖೆಯ ಸಚಿವರಾದ ಶ್ರೀ. ರಾಮಲಿಂಗಾ ರೆಡ್ಡಿ ಇವರಿಗೆ ಮನವಿ

ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಅಡಿಯಲ್ಲಿ ಬರುವ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಅಳವಡಿಸಿ !

ಸಚಿವರಾದ ಶ್ರೀ. ರಾಮಲಿಂಗಾ ರೆಡ್ಡಿ ಇವರಿಗೆ ಸತ್ಕರಿಸುತ್ತಿರುವ (ಎಡದಿಂದ) ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶರತ್ ಕುಮಾರ್, ಶ್ರೀ. ಪಾಲಾಕ್ಷ್ಯ, ಶ್ರೀ. ಎಸ್ ಜಯರಾಮ್, ಶ್ರೀ. ಮೋಹನ್ ಗೌಡ, ಶ್ರೀ. ಶ್ರೀನಿವಾಸ ಗುರೂಜಿ, ಶ್ರೀ. ವೆಂಕಟೇಶ ಮೂರ್ತಿ ಹಾಗೂ ಶ್ರೀ. ಪ್ರದೀಪ್ ಕುಮಾರ್

ಬೆಂಗಳೂರು : ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದಿಂದ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆಯನ್ನು ಅಳವಡಿಸಲು ಧಾರ್ಮಿಕ ದತ್ತಿ ಇಲಾಖೆಯ ಸಚಿವಾರದ ಶ್ರೀ. ರಾಮಲಿಂಗ ರೆಡ್ಡಿಯವರಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ವೇಳೆ ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸಂಯೋಜಕರಾದ ಶ್ರೀ. ಮೋಹನ್ ಗೌಡ, ಶ್ರೀ. ಉಮೇಶ್ ಗುರೂಜಿ, ಶ್ರೀ. ಶ್ರೀನಿವಾಸ ಗುರೂಜಿ, ಶ್ರೀ. ಎ ಎಸ್ ಎನ್ ಗುಪ್ತ, ಶ್ರೀ. ಎಸ್ ಜಯರಾಮ್, ಶ್ರೀ. ಗೋಪಿ ಕೆ, ಶ್ರೀ. ಪ್ರದೀಪ್ ಕುಮಾರ್, ಶ್ರೀ. ವೆಂಕಟೇಶ್ ಮೂರ್ತಿ, ಶ್ರೀ. ಪಾಲಾಕ್ಷ್ಯ, ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶರತ್ ಕುಮಾರ್ ಸೇರಿದಂತೆ ಬೆಂಗಳೂರಿನ ವಿವಿಧ ದೇವಸ್ಥಾನಗಳ ಮುಖ್ಯಸ್ಥರು, ಟ್ರಸ್ಟಿಗಳು ಹಾಗೂ ವಿಶ್ವಸ್ಥರು ಉಪಸ್ಥಿತರಿದ್ದರು. ಮನವಿಗೆ ಸ್ಪಂದಿಸಿದ ಸಚಿವ ಶ್ರೀ. ರಾಮಲಿಂಗಾ ರೆಡ್ಡಿ ಇವರು `ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಅಡಿಯಲ್ಲಿ ಬರುವ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಯನ್ನು ಅಳವಡಿಸುವ ಬಗ್ಗೆ ರಾಜ್ಯ ಧಾರ್ಮಿಕ ಪರಿಷತ್ತಿನಲ್ಲಿ ಚರ್ಚೆ ಮಾಡಿ ಅನುಷ್ಠಾನಗೊಳಿಸಲಾಗುವುದು’ ಎಂದು ಭರವಸೆ ನೀಡಿದ್ದಾರೆ.

ಮಾನ್ಯ ಸಚಿವರಿಗೆ ಮನವಿ ಸಲ್ಲಿಸಿದ (ಎಡದಿಂದ) ಶ್ರೀ. ಗೋಪಿ ಕೆ, ಶ್ರೀ. ಪ್ರದೀಪ್ ಕುಮಾರ್, ಶ್ರೀ. ಎ ಎಸ್ ಎನ್ ಗುಪ್ತ, ಶ್ರೀ. ಉಮೇಶ್ ಗುರೂಜಿ, ಶ್ರೀ. ಮೋಹನ್ ಗೌಡ, ಶ್ರೀ. ಶ್ರೀನಿವಾಸ ಗುರೂಜಿ, ಶ್ರೀ. ಎಸ್ ಜಯರಾಮ್, ಶ್ರೀ. ವೆಂಕಟೇಶ್ ಮೂರ್ತಿ, ಶ್ರೀ. ಪಾಲಾಕ್ಷ್ಯ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶರತ್ ಕುಮಾರ್

ಮನವಿಯಲ್ಲಿ ದೇವಸ್ಥಾನಗಳು ಹಿಂದೂ ಧರ್ಮದ ಅತ್ಯಂತ ಪವಿತ್ರ ಸ್ಥಳವಾಗಿದೆ. ದೇವಸ್ಥಾನಗಳಲ್ಲಿ ಪ್ರತ್ಯಕ್ಷ ದೇವತೆಗಳು ವಾಸ ಮಾಡುವುದರಿಂದ ಅನಾಧಿ ಕಾಲದಿಂದ ದೇವಸ್ಥಾನಗಳು ಹಿಂದೂ ಧರ್ಮದ ಸಂಸ್ಕೃತಿ, ಆಚಾರ, ವಿಚಾರ, ಕಲೆ, ಪರಂಪರೆಗಳ ಸಂರಕ್ಷಣೆಯ ಮಹಾನ್ ಕಾರ್ಯವನ್ನು ಮಾಡುತ್ತಿದೆ. ಇದರಿಂದ ಇಂದಿಗೂ ಹಿಂದೂ ಸಮಾಜವು ಧರ್ಮ ಸಂಸ್ಕೃತಿಯಿಂದ ಸಂರಕ್ಷಿಸಲ್ಪಟ್ಟಿದೆ. ದೇವಸ್ಥಾನಗಳಲ್ಲಿ ನಮ್ಮ ಪೂರ್ವಜರು ಧರ್ಮಾಚಾರ್ಯರು, ಸಂತರು, ಧರ್ಮದರ್ಶಿಗಳು, ಅರ್ಚಕರು ಪ್ರತಿನಿತ್ಯ ಆಗಮ ಶಾಸ್ತ್ರ ಪ್ರಕಾರ ಮಾಡುವ ಧಾರ್ಮಿಕ ವಿಧಿ-ವಿಧಾನ, ಪೂಜೆಗಳಿಂದ ಇಂದಿಗೂ ದೇವಸ್ಥಾನಗಳು ದೇವತೆಗಳ ಸಾತ್ತ್ವಿಕತೆ, ಚೈತನ್ಯವು ಅಸ್ತಿತ್ವದಲ್ಲಿದೆ. ದೇವಸ್ಥಾನಗಳ ಚೈತನ್ಯದಿಂದ ಇಂದಿಗೂ ಲಕ್ಷಾಂತರ ಭಕ್ತರು ದೇವಸ್ಥಾನಗಳಿಗೆ ಬರುತ್ತಾರೆ ಮತ್ತು ದೇವಸ್ಥಾನಗಳು ಭಕ್ತರಿಗೆ ಮಾನಸಿಕ ನೆಮ್ಮದಿ, ಶಾಂತಿ, ಸಾತ್ತ್ವಿಕತೆಯನ್ನು ನೀಡುವ ಹಾಗೂ ಅವರ ಅನೇಕ ಸಂಕಷ್ಟಗಳಿಗೆ ಪರಿಹಾರ ನೀಡುವ ಕೇಂದ್ರವಾಗಿ ಕಾರ್ಯ ಮಾಡುತ್ತಿದೆ. ಈ ದೇವಸ್ಥಾನಗಳ ಪಾವಿತ್ರ್ಯತೆ ಮತ್ತು ಸಾತ್ತ್ವಿಕತೆಯನ್ನು ಕಾಪಾಡುವುದು ಪ್ರತಿಯೊಬ್ಬ ಭಕ್ತನ, ಧರ್ಮದರ್ಶಿಗಳ, ಅರ್ಚಕರ ಧರ್ಮಕರ್ತವ್ಯವಾಗಿದೆ. ಆದರೆ ಜನರು ಆಧುನಿಕ ಪಾಶ್ಚಿಮಾತ್ಯ ಜಗತ್ತಿಗೆ ಮಾರು ಹೋಗಿ ಮತ್ತು ಧರ್ಮ ಶಿಕ್ಷಣದ ಅಭಾವದಿಂದ ದೇವಸ್ಥಾನಗಳಿಗೆ ಬರುವಾಗ ಪಾಶ್ಚಾತ್ಯ ಅಸಭ್ಯ ಉಡುಪುಗಳನ್ನು ಧರಿಸಿ ಬರುವುದು ಗಮನಕ್ಕೆ ಬರುತ್ತದೆ.

ಈ ಅಸಭ್ಯ ವಿದೇಶಿ ರೀತಿಯ ಉಡುಪುಗಳು ರಜ-ತಮ ಪ್ರಧಾನವಾಗಿದ್ದು, ದೇವಸ್ಥಾನಗಳ ಸಾತ್ತ್ವಿಕತೆ ಮತ್ತು ಪರಂಪರೆಯ ಮೇಲೆ ಗಂಭೀರ ಪರಿಣಾಮ ಆಗುತ್ತದೆ. ಅದಲ್ಲದೇ ದೇವಸ್ಥಾನಗಳಿಗೆ ಬರುವ ಅನ್ಯ ಆಸ್ತಿಕ ಭಕ್ತರ ಆಧ್ಯಾತ್ಮಿಕ ಸಾಧನೆಗೆ ಅಡಚಣೆ ಆಗುತ್ತದೆ. ಹಾಗಾಗಿ ದೇವಸ್ಥಾನಗಳ ಪಾವಿತ್ರ್ಯವನ್ನು ಕಾಪಾಡಲು ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆಯನ್ನು ಅಳವಡಿಸಬೇಕು ಎಂಬ ಬೇಡಿಕೆ ಅನೇಕ ವರ್ಷಗಳಿಂದ ಬರುತ್ತಿದೆ. ಈಗಾಗಲೇ ರಾಷ್ಟ್ರದ ಅನೇಕ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆಯನ್ನು ಅಳವಡಿಸಲಾಗಿದೆ. ಅದರಿಂದಲೇ ದೇವಸ್ಥಾನದ ಪಾವಿತ್ರ್ಯವನ್ನು ಕಾಪಾಡಲು ಇಂದು ರಾಜ್ಯದ ಅನೇಕ ದೇವಸ್ಥಾನಗಳಲ್ಲಿ ಸಹ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ವಸ್ತ್ರ ಸಂಹಿತೆಯ ನಿಯಮಗಳನ್ನು ಅಳವಡಿಸಲಾಗಿದೆ. ಧಾರ್ಮಿಕ ದತ್ತಿ ಇಲಾಖೆಯ ರಾಜ್ಯ ಧಾರ್ಮಿಕ ಪರಿಷತ್‌ನಲ್ಲಿ ಸಹ ರಾಜ್ಯದ 211 ಎ ಗ್ರೇಡ್ ದೇವಸ್ಥಾನಗಳಲ್ಲಿ ಭಕ್ತರಿಗೆ ವಸ್ತ್ರ ಸಂಹಿತೆಯನ್ನು ಅಳವಡಿಸುವ ಬಗ್ಗೆ ಚಿಂತನೆ ನಡೆಸಿದೆ. ಈಗಾಗಲೇ ಚಿಕ್ಕಮಗಳೂರಿನ ಇತಿಹಾಸ ಪ್ರಸಿದ್ದ ದೇವಿರಮ್ಮನ ದೇಗುಲ, ಕುಕ್ಕೆ ಸುಬ್ರಮ್ಯ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಧಾರ್ಮಿಕ ದತ್ತಿ ಇಲಾಖೆ ಹಾಗೂ ದೇವಸ್ಥಾನ ಆಡಳಿತ ಮಂಡಳಿ ವಸ್ತ್ರಸಂಹಿತೆ ಜಾರಿ ಮಾಡಿದೆ. ದೇವಿರಮ್ಮನ ದೇವಾಲಯದಲ್ಲಿ ಸ್ಕರ್ಟ್, ಮಿಡಿ, ಸ್ಲೀವ್‌ಲೆಸ್ ಡ್ರೆಸ್, ಪ್ಯಾಂಟ್, ಸಾಕ್ಸ್ ಹಾಕಿ ದೇವಾಲಯಕ್ಕೆ ಬರುವಂತಿಲ್ಲ ಹಾಗೂ ದೇವಾಲಯದ ಆವರಣದೊಳಗೆ ಮೊಬೈಲ್ ಫೋನ್ ಬಳಕೆಯನ್ನು ನೀಷೇಧ ಮಾಡಿದೆ. ಇದೇ ರೀತಿಯ ವಸ್ತ್ರ ಸಂಹಿತೆಯನ್ನ್ನು ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ಎಲ್ಲ ದೇವಸ್ಥಾನಗಳಲ್ಲಿ ಅಳವಡಿಸಲು ವಿಶೇಷ ಸುತ್ತೋಲೆಯನ್ನು ಹೊರಡಿಸಬೇಕೆಂದು ಮಾನ್ಯ ಸಚಿವರಲ್ಲಿ ವಿನಂತಿಯನ್ನು ಮಾಡಲಾಯಿತು.