SCO Summit: ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಕಾಶ್ಮೀರದ ಕುರಿತು ಭಾರತವನ್ನು ಟೀಕಿಸಿದ ಪಾಕಿಸ್ತಾನದ ಪ್ರಧಾನಿ !

ಅಸ್ತಾನಾ (ಕಝಾಕಿಸ್ತಾನ್) – ವಿಶ್ವ ಸಂಸ್ಥೆಯ ಭದ್ರತಾ ಪರಿಷತ್ತಿನ ನಿರ್ಣಯದ ಪ್ರಕಾರ, ದೀರ್ಘಕಾಲದ ವಿವಾದಗಳನ್ನು ಪರಿಹರಿಸಬೇಕು. ಪಾಕಿಸ್ತಾನವು ಹಲವು ದಿನಗಳಿಂದ ಈ ಬೇಡಿಕೆಯನ್ನು ಇಡುತ್ತಿದೆ. ಜನರ ಸ್ವ-ನಿರ್ಣಯದ ಹಕ್ಕನ್ನು ಎಲ್ಲಾ ದೇಶಗಳು ಗೌರವಿಸಬೇಕು. ಇದು ಸಂಭವಿಸದಿದ್ದರೆ, ಜನರು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮುಂದೆ ಕಾಶ್ಮೀರದ ಕುರಿತು ಹೇಳಿಕೆ ನೀಡಿದರು. ಈ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಉಪಸ್ಥಿತರಿದ್ದರು. ಇಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯಲ್ಲಿ ಷರೀಫ್ ಮಾತನಾಡುತ್ತಿದ್ದರು. ಶೃಂಗಸಭೆಯಲ್ಲಿ ದ್ವಿಪಕ್ಷೀಯ ವಿವಾದಾತ್ಮಕ ವಿಷಯಗಳನ್ನು ಎತ್ತುವುದಕ್ಕೆ ನಿಷೇಧವಿದ್ದರೂ ಪ್ರಧಾನಿ ಷರೀಫ್ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದರು. ಮುಂದಿನ ಶೃಂಗಸಭೆ ಪಾಕಿಸ್ತಾನದಲ್ಲಿ ನಡೆಯಲಿದೆ. ಈ ವೇಳೆ ಶಹಬಾಜ್ ಷರೀಫ್ ಅವರು ಜೈಶಂಕರ್ ಅವರಿಗೆ ಈ ಸಮಾವೇಶದಲ್ಲಿ ಭಾರತದ ಪ್ರಧಾನಿ ಮೋದಿಯವರನ್ನು ಪಾಲ್ಗೊಳ್ಳುವಂತೆ ಆಹ್ವಾನಿಸಿದರು.

ಕೆಲವು ದಿನಗಳ ಹಿಂದೆ ಭಾರತವನ್ನು ಹೆಸರಿಸದೆ ಪ್ರಧಾನಿ ಶಹಬಾಜ್ ಷರೀಫ್ ಅವರು, “ಭಯೋತ್ಪಾದನೆಯು ಯಾವುದೇ ವ್ಯಕ್ತಿ, ಗುಂಪು ಅಥವಾ ದೇಶದಿಂದ ನಡೆದರೂ ಅದಕ್ಕೆ ಸಾಮೂಹಿಕವಾಗಿ ನಿರ್ವಹಿಸಬೇಕು” ಎಂದು ಹೇಳಿದರು. ಎಲ್ಲಾ ರೀತಿಯ ಭಯೋತ್ಪಾದನೆಯನ್ನು ಸ್ಪಷ್ಟವಾಗಿ ಮತ್ತು ಬೇಷರತ್ತಾಗಿ ಟೀಕಿಸಬೇಕು. ಅಮಾಯಕರ ಹತ್ಯೆ ಒಪ್ಪಿಗೆ ಇಲ್ಲ. ಭಯೋತ್ಪಾದನೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಬಾರದು. ಭಯೋತ್ಪಾದನೆಯ ನಿರ್ಮೂಲನೆಯು ಆರ್ಥಿಕ ಅಭಿವೃದ್ಧಿಗೆ ಪೂರ್ವಾಪೇಕ್ಷಿತವಾಗಿದೆ.

ಕೆಲವು ದಿನಗಳ ಹಿಂದೆ ಭಾರತದ ಗುಪ್ತಚರ ಸಂಸ್ಥೆ ‘ರಾ’ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ ಮತ್ತು ಬಲೂಚ್ ಲಿಬರೇಶನ್ ಆರ್ಮಿಗೆ ಚೀನಾದ ಪ್ರಜೆಗಳನ್ನು ಗುರಿಯಾಗಿಸಲು ಸಹಾಯ ಮಾಡುತ್ತಿದೆ ಎಂದು ಪಾಕಿಸ್ತಾನ ಆರೋಪ ಮಾಡಿತ್ತು.

ಸಂಪಾದಕೀಯ ನಿಲುವು

ಕಾಶ್ಮೀರ ವಿಷಯವನ್ನು ಯಾವುದೇ ವೇದಿಕೆಯಲ್ಲಿ ಎಷ್ಟು ಬಾರಿ ಪ್ರಸ್ತಾಪಿಸಿದರೂ ಅದರಿಂದ ಏನೂ ಪ್ರಯೋಜನವಾಗುವುದಿಲ್ಲ ಎಂಬುದನ್ನು ಪಾಕಿಸ್ತಾನ ನೆನಪಿನಲ್ಲಿಡಬೇಕು. ಕಾಶ್ಮೀರ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಭಾರತ ಈಗ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು !