೨೫.೧೦.೨೦೨೨ ರ ಖಂಡಗ್ರಾಸ ಸೂರ್ಯಗ್ರಹಣದ ಮಾಹಿತಿ, ರಾಶಿ ಫಲ

೨೫.೧೦.೨೦೨೨ ರಂದು ಕಾಣಿಸುವ ಖಂಡಗ್ರಾಸ ಸೂರ್ಯಗ್ರಹಣ, ಗ್ರಹಣದ ಕಾಲಾವಧಿಯಲ್ಲಿ ಪಾಲಿಸಬೇಕಾದ ನಿಯಮ ಮತ್ತು ರಾಶಿ ಪ್ರಕಾರ ದೊರೆಯುವ ಫಲ !

೧. ಸೂರ್ಯಗ್ರಹಣ ಕಾಣಿಸುವ ದೇಶಗಳು

‘ಅಶ್ವಯುಜ ಅಮಾವಾಸ್ಯೆ (೨೫.೧೦.೨೦೨೨ ಮಂಗಳವಾರ) ಯಂದು ಭಾರತ ಸಹಿತ ಏಷ್ಯಾ ಖಂಡದ ಮಧ್ಯ ಮತ್ತು ಪಶ್ಚಿಮದ ಪ್ರದೇಶ, ಸಂಪೂರ್ಣ ಯುರೋಪ್ ಖಂಡ, ಆಫ್ರಿಕಾ ಖಂಡದ ಪೂರ್ವೋತ್ತರ ಪ್ರದೇಶಗಳಲ್ಲಿ ಗ್ರಹಣ ಕಾಣಿಸಲಿದೆ.

೨. ಖಗ್ರಾಸ ಮತ್ತು ಖಂಡಗ್ರಾಸ ಸೂರ್ಯಗ್ರಹಣ

ಸೂರ್ಯ ಮತ್ತು ಪೃಥ್ವಿಯ ಮಧ್ಯಕ್ಕೆ ಚಂದ್ರ ಬಂದು ಚಂದ್ರನ ನೆರಳು ಭೂಮಿಯ ಮೇಲೆ ಬೀಳುತ್ತದೆ. ಆ ನೆರಳು ಯಾವ ಭಾಗದಲ್ಲಿ ಬೀಳುತ್ತದೆ, ಅಲ್ಲಿಂದ ಅಷ್ಟು ಕಾಲ ಚಂದ್ರ ಬಿಂಬದಿಂದಾಗಿ ಸೂರ್ಯಬಿಂಬ ಮುಚ್ಚಿರುವ ಹಾಗೆ ಕಾಣುತ್ತದೆ. ಸೂರ್ಯಬಿಂಬ ಸಂಪೂರ್ಣವಾಗಿ ಕಾಣದಿದ್ದರೆ ಅದು ‘ಖಗ್ರಾಸ ಸೂರ್ಯಗ್ರಹಣ’ ಮತ್ತು ಸೂರ್ಯಬಿಂಬದ ಕೆಲವಷ್ಟೇ ಭಾಗ ಮುಚ್ಚಿದರೆ, ಅದು ‘ಖಂಡಗ್ರಾಸ ಸೂರ್ಯಗ್ರಹಣ’ ಆಗುತ್ತದೆ. ಸೂರ್ಯಬಿಂಬ ಕಂಕಣಾಕೃತಿ (ಕೈಯಲ್ಲಿರುವ ಬಳೆಯ ಹಾಗೆ) ಆಕಾರದಲ್ಲಿ ಮುಚ್ಚಿದರೆ ಆ ಗ್ರಹಣಕ್ಕೆ ಕಂಕಣಾಕೃತಿ ಗ್ರಹಣ ಎನ್ನುತ್ತಾರೆ. ಕಂಕಣಾಕೃತಿ ಸೂರ್ಯಗ್ರಹಣದಲ್ಲಿ ಸೂರ್ಯ ಸಂಪೂರ್ಣವಾಗಿ ಮುಚ್ಚಿರುವ ಹಾಗೆ ಕಾಣುವುದಿಲ್ಲ; ಆದರೆ ಸೂರ್ಯನ ಹೊರಗಿನ ಭಾಗ ಬಳೆಯ ಹಾಗೆ ಮಿಂಚುತ್ತದೆ. ಸೂರ್ಯ ಗ್ರಹಣ ಅಮಾವಾಸ್ಯೆಯ ದಿನ ಘಟಿಸುತ್ತದೆ.

೩. ಸೂರ್ಯ ಗ್ರಹಣದ ಸಮಯ (ಈ ಸಮಯ ಬೆಂಗಳೂರಿನದಾಗಿದೆ.)

೩ ಅ ೧. ಸ್ಪರ್ಶ (ಆರಂಭ) : ೨೫.೧೦.೨೦೨೨ ರಂದು ಸಾಯಂಕಾಲ ೫.೧೨ ಗಂಟೆಗೆ

೩ ಅ ೨. ಮಧ್ಯ : ೨೫.೧೦.೨೦೨೨ ರಂದು ಸಾಯಂಕಾಲ ೫.೪೯ ಗಂಟೆಗೆ೩

೩ ಅ ೩. ಸೂರ್ಯಾಸ್ತ : ೨೫.೧೦.೨೦೨೨ ರಂದು ಸಂಜೆ ೫.೫೬ ಗಂಟೆಗೆ

೩ ಅ ೪. ಮೋಕ್ಷ (ಕೊನೆ) : ೨೫.೧೦.೨೦೨೨ ರಂದು ಸಾಯಂಕಾಲ ೬.೨೭ ಗಂಟೆಗೆ

೩ ಆ. ಗ್ರಹಣ ಪರ್ವ (ಟಿಪ್ಪಣಿ ೧) : ಗ್ರಹಣ ಆರಂಭದಿಂದ ಸೂರ್ಯಾಸ್ತದ ವರೆಗಿನ ಒಟ್ಟು ಕಾಲಾವಧಿ) – ೪೪ ನಿಮಿಷ

ಟಿಪ್ಪಣಿ : ಪರ್ವ ಎಂದರೆ ಪುಣ್ಯಕಾಲ. ‘ಗ್ರಹಣ ಸ್ಪರ್ಶದಿಂದ ಗ್ರಹಣ ಮೋಕ್ಷದವರೆಗೆನ ಕಾಲ ಪುಣ್ಯಕಾಲವಾಗಿದೆ. ಆ ಸಮಯದಲ್ಲಿ ಈಶ್ವರನ ಅನುಸಂಧಾನದಲ್ಲಿದ್ದರೆ ಆಧ್ಯಾತ್ಮಿಕ ಲಾಭವಾಗುತ್ತದೆ’, ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

೩ ಈ. ೨೫.೧೦.೨೦೨೨ ರಂದು ಇರುವ ಖಂಡಗ್ರಾಸ ಸೂರ್ಯಗ್ರಹಣ ಭಾರತದ ಎಲ್ಲಾ ಕಡೆಗೆ ಗ್ರಸ್ತಾಸ್ತ ಕಾಣುವುದು, ಎಂದರೆ ಗ್ರಸ್ತ ಇರುವ ಸೂರ್ಯಬಿಂಬ ಅಸ್ತವಾಗುವುದು. ಆದ್ದರಿಂದ ಭಾರತದಲ್ಲಿ ಎಲ್ಲಿಯೂ ಗ್ರಹಣ ಮೋಕ್ಷ ಕಾಣುವುದಿಲ್ಲ.

೩ ಉ. ಪುಣ್ಯಕಾಲ : ‘ಈ ಸೂರ್ಯಗ್ರಹಣ ಭಾರತದಲ್ಲಿ ಎಲ್ಲಾ ಕಡೆ ಗ್ರಸ್ತಾಸ್ತ ಕಾಣುವುದು ಎಂದರೆ ಸೂರ್ಯಬಿಂಬ ಅಸ್ತವಾಗುವುದು. ಆದ್ದರಿಂದ ಭಾರತದಲ್ಲಿ ಎಲ್ಲಿಯೂ ಗ್ರಹಣ ಮೋಕ್ಷ ಕಾಣುವುದಿಲ್ಲ, ಅದಕ್ಕೆ ಸ್ಥಳೀಯ ಕಾಲಮಾನದ ಪ್ರಕಾರ (ಆಯಾ ಸ್ಥಳದಲ್ಲಿ) ಸ್ಪರ್ಶಕಾಲದಿಂದ ಸೂರ್ಯಾಸ್ತದ ವರೆಗಿನ ಕಾಲ ಪುಣ್ಯಕಾಲವೆಂದು ಪರಿಗಣಿಸಬೇಕು.
(ಆಧಾರ : ದಾತೆ ಪಂಚಾಂಗ )

೩ ಊ. ಗ್ರಹಣದ ವೇಧ ಆರಂಭವಾಗುವುದು

೩ ಊ ೧. ಅರ್ಥ: ಸೂರ್ಯಗ್ರಹಣದ ಮೊದಲು ಸೂರ್ಯನು ಚಂದ್ರನ ಛಾಯೆಯಲ್ಲಿ ಬರುತ್ತಾನೆ, ಆದ್ದರಿಂದ ಅವನ ಪ್ರಕಾಶ ಕ್ರಮೇಣ ಕಡಿಮೆಯಾಗಲು ಪ್ರಾರಂಭವಾಗುತ್ತದೆ ಇದನ್ನೇ ‘ಗ್ರಹಣದ ವೇಧ’ ಎನ್ನುತ್ತಾರೆ.

೩ ಊ ೨. ಕಾಲಾವಧಿ : ‘ಈ ಸೂರ್ಯಗ್ರಹಣವು ದಿನದ ನಾಲ್ಕನೇ ಪ್ರಹರದಲ್ಲಿ (ಟಿಪ್ಪಣಿ ೨) ನಡೆಯುವುದರಿಂದ ಮಂಗಳವಾರ ೨೫.೧೦.೨೦೨೨ ರಂದು ಬೆಳಗ್ಗಿನ ಜಾವ ೩.೩೦ ಗಂಟೆಯಿಂದ ಸೂರ್ಯಾಸ್ತದವರೆಗೆ ಗ್ರಹಣದ ವೇಧ ಪಾಲಿಸಬೇಕು. ಮಕ್ಕಳು, ವೃದ್ಧರು, ಅಶಕ್ತರು ಮತ್ತು ಅನಾರೋಗ್ಯವಿರುವ ವ್ಯಕ್ತಿಗಳು ಇವರು ಹಾಗೂ ಗರ್ಭಿಣಿ ಸ್ತ್ರೀಯರು ಮಂಗಳವಾರ ಮಧ್ಯಾಹ್ನ ೧೨.೩೦ ರಿಂದ ಸೂರ್ಯಾಸ್ತದವರೆಗೆ ವೇಧ ಪಾಲಿಸಬೇಕು. (ಆಧಾರ : ದಾತೆ ಪಂಚಾಂಗ)

ಟಿಪ್ಪಣಿ ೨: ಒಂದು ಪ್ರಹರ ೩ ಗಂಟೆಯದ್ದಾಗಿರುತ್ತದೆ. ದಿನದ ೪ ಪ್ರಹರ ಮತ್ತು ರಾತ್ರಿಯ ೪ ಪ್ರಹರ ಸೇರಿಸಿ ಒಂದು ದಿನದಲ್ಲಿ ೮ ಪ್ರಹರ ಇರುತ್ತವೆ.

೪. ಸೂರ್ಯಗ್ರಹಣದ ಕಾಲಾವಧಿಯಲ್ಲಿ ಪಾಲಿಸಬೇಕಾದ ನಿಯಮ

‘ವೇಧಕಾಲದಲ್ಲಿ ಸ್ನಾನ, ದೇವರ ಪೂಜೆ, ನಿತ್ಯಕರ್ಮಗಳು, ಜಪತಪಗಳು ಮತ್ತು ಶ್ರಾದ್ಧ ಮುಂತಾದ ಕರ್ಮಗಳನ್ನು ಮಾಡಬಹುದು. ವೇಧಕಾಲದಲ್ಲಿ ಊಟೋಪಚಾರ ಮಾಡುವುದು ನಿಷಿದ್ಧವಾಗಿದೆ. ಆದ್ದರಿಂದ ಅಹಾರ ಸೇವಿಸಬಾರದು, ಆದರೆ ನೀರು ಕುಡಿಯುವುದು, ಮಲ-ಮೂತ್ರ ವಿಸರ್ಜನೆ ಮತ್ತು ವಿಶ್ರಾಂತಿ ಪಡೆಯುವುದು, ಈ ಕರ್ಮಗಳನ್ನು ಮಾಡಬಹುದು. ಗ್ರಹಣ ಪರ್ವಕಾಲದಲ್ಲಿ, ಎಂದರೆ ಗ್ರಹಣ ಸ್ಪರ್ಶದಿಂದ ಸೂರ್ಯಾಸ್ತದ ವರೆಗಿನ ಕಾಲಾವಧಿಯಲ್ಲಿ (ಬೆಂಗಳೂರಿನ ಸಮಯದ ಪ್ರಕಾರ ಮಧ್ಯಾಹ್ನ ೫.೧೨ ರಿಂದ ಸಂಜೆ ೫.೫೬ ರ ವರೆಗೆ) ನೀರು ಕುಡಿಯುವುದು, ಮಲಮೂತ್ರ ವಿಸರ್ಜನೆ ಮತ್ತು ನಿದ್ದೆ ಈ ಕರ್ಮಗಳು ನಿಷಿದ್ಧ ವಾಗಿರುವುದರಿಂದ ಅವುಗಳನ್ನು ಮಾಡಬಾರದು. (ಆಧಾರ : ದಾತೆ ಪಂಚಾಂಗ )

೪ ಅ. ಆರೋಗ್ಯದ ದೃಷ್ಟಿಯಿಂದ ವೇಧ ನಿಯಮ ಪಾಲಿಸುವುದರ ಮಹತ್ವ !

೪ ಅ ೧. ಶಾರೀರಿಕ ಮತ್ತು ಭೌತಿಕ ಮಟ್ಟದಲ್ಲಿ : ವೇಧಕಾಲದಲ್ಲಿ ಸೂಕ್ಷ್ಮ ಜೀವಾಣುಗಳ ಸಂಖ್ಯೆ ಹೆಚ್ಚುವುದರಿಂದ ಆಹಾರ ಬೇಗನೆ ಹಾಳಾಗುತ್ತದೆ. ಈ ಕಾಲದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಯಾವ ರೀತಿ ರಾತ್ರಿಯ ಆಹಾರ ಮರುದಿನ ತಂಗಳಾಗುತ್ತದೆ, ಅದೇ ರೀತಿ ಗ್ರಹಣದ ಮೊದಲಿನ ಆಹಾರ ಗ್ರಹಣದ ನಂತರ ತಂಗಳನ್ನವಾಗುತ್ತದೆ. ಆದ್ದರಿಂದ ಆ ಆಹಾರ ಬಳಸಬಾರದು. ಕೇವಲ ಹಾಲು ಮತ್ತು ನೀರು ಇದಕ್ಕೆ ಈ ನಿಯಮ ಅನ್ವಯಿಸುವುದಿಲ್ಲ. ಗ್ರಹಣದ ಮೊದಲಿನ ಹಾಲು ಮತ್ತು ನೀರು ಇದನ್ನು ಗ್ರಹಣ ಮುಗಿದ ನಂತರ ಕೂಡ ಉಪಯೋಗಿಸಬಹುದು.

೪ ಅ ೨. ಮಾನಸಿಕ ಸ್ತರದಲ್ಲಿ : ವೇಧಕಾಲದಲ್ಲಿ ಮಾನಸಿಕ ಆರೋಗ್ಯದ ಮೇಲೆ ಕೂಡ ಪರಿಣಾಮವಾಗುತ್ತದೆ. ‘ಕೆಲವು ವ್ಯಕ್ತಿಗಳು ನಿರಾಶರಾಗುತ್ತಾರೆ, ಒತ್ತಡ ಹೆಚ್ಚಾಗುವುದು ಮುಂತಾದ ಮಾನಸಿಕ ತೊಂದರೆಗಳಾಗುತ್ತವೆ’, ಎಂದು ಮನೋವೈದ್ಯರೂ  ಹೇಳುತ್ತಾರೆ.

೫. ಗ್ರಹಣ ಕಾಲದಲ್ಲಿ ಸಾಧನೆ ಮಾಡುವುದರ ಲಾಭ

ಗ್ರಹಣಕಾಲದಲ್ಲಿ ಮಾಡಿರುವ ಸಾಧನೆಯ ಫಲವು ಸಾವಿರ ಪಟ್ಟಿನಲ್ಲಿ ಹೆಚ್ಚು ದೊರೆಯುತ್ತದೆ. ಇದಕ್ಕಾಗಿ ಗ್ರಹಣಕಾಲದಲ್ಲಿ ಸಾಧನೆಗೆ ಪ್ರಾಧಾನ್ಯತೆ ನೀಡುವುದು ಮಹತ್ವದ್ದಾಗಿದೆ. ವೇಧ ಆರಂಭದಿಂದ ಗ್ರಹಣ ಮುಗಿಯುವ ವರೆಗೂ ನಾಮಜಪ, ಸ್ತೋತ್ರಪಠಣ, ಧ್ಯಾನಧಾರಣೆ ಮುಂತಾದ ಧಾರ್ಮಿಕ ಕಾರ್ಯಗಳಲ್ಲಿ ಮನಸ್ಸು ತೊಡಗಿಸಿದರೆ ಅದರ ಹೆಚ್ಚಿನ ಲಾಭವಾಗುತ್ತದೆ.

೬. ಗ್ರಹಣಕಾಲದಲ್ಲಿ ವರ್ಜ್ಯಾವರ್ಜ್ಯ ಕೃತಿಗಳು

೬ ಅ. ವರ್ಜ್ಯ ಕೃತಿ : ‘ಗ್ರಹಣಕಾಲದಲ್ಲಿ (ಪರ್ವಕಾಲದಲ್ಲಿ) ನಿದ್ದೆ, ಮಲ-ಮೂತ್ರ ವಿಸರ್ಜನೆ, ಅಭ್ಯಂಗ ಸ್ನಾನ (ಸಂಪೂರ್ಣ ಶರೀರಕ್ಕೆ ಬೆಚ್ಚಗಿನ ಎಣ್ಣೆ ಹಚ್ಚಿ ಅದು ಶರೀರದಲ್ಲಿ ಇಂಗುವ ಹಾಗೆ ಮರ್ದನ ಮಾಡಿ ಮತ್ತೆ ಸ್ನಾನ), ಊಟ, ತಿನ್ನುವುದು ಕುಡಿಯುವುದು ಮತ್ತು ಕಾಮ ಸೇವನೆ ಇವನ್ನು ಮಾಡಬಾರದು.

೬ ಆ. ಗ್ರಹಣಕಾಲದಲ್ಲಿ ಯಾವ ಕರ್ಮಗಳು ಮಾಡಬೇಕು ?

೧. ಗ್ರಹಣಸ್ಪರ್ಶವಾದ ಕೂಡಲೇ ಸ್ನಾನ ಮಾಡಬೇಕು.
೨. ಪರ್ವಕಾಲದಲ್ಲಿ ದೇವರ ಪೂಜೆ, ತರ್ಪಣ, ಶ್ರಾದ್ಧ, ಜಪ, ಹೋಮ ಮತ್ತು ದಾನ ಮಾಡಬೇಕು.
೩. ಹಿಂದೆ ಯಾವುದೇ ಕಾರಣಗಳಿಂದ ವ್ಯತ್ಯಯವಾಗಿ ನಿಂತಿರುವ ಮಂತ್ರಗಳ ಪುನಶ್ಚರಣ ಈ ಕಾಲಾವಧಿಯಲ್ಲಿ ಮಾಡಿದರೆ ಅದರ ಫಲ ಅನಂತ ಪಟ್ಟು ದೊರೆಯುತ್ತದೆ.
೪. ಗ್ರಹಣ ಮೋಕ್ಷದ ನಂತರ ಸ್ನಾನ ಮಾಡಬೇಕು.
೫. ಯಾವುದಾದರೂ ವ್ಯಕ್ತಿಗೆ ಸೂತಕ ಇದ್ದರೆ ಗ್ರಹಣಕಾಲದಲ್ಲಿ ಗ್ರಹಣದ ದೃಷ್ಟಿಯಿಂದ ಸ್ನಾನ ಮತ್ತು ದಾನ ಮಾಡಲು ಅವರಿಗೆ ಶುದ್ಧ ಇರುತ್ತದೆ.

೭. ರಾಶಿಯ ಪ್ರಕಾರ ಗ್ರಹಣದ ಫಲ

೭ ಅ. ಶುಭ ಫಲ : ವೃಷಭ, ಸಿಂಹ, ಧನು ಮತ್ತು ಮಕರ

೭ ಆ. ಅಶುಭ ಫಲ : ಕರ್ಕ, ತುಲಾ, ವೃಶ್ಚಿಕ ಮತ್ತು ಮೀನ

೭ ಇ. ಮಿಶ್ರ ಫಲ : ಮೇಷ, ಮಿಥುನ, ಕನ್ಯಾ ಮತ್ತು ಕುಂಭ

ಯಾವ ರಾಶಿಗೆ ಅಶುಭ ಫಲ ಇದೆಯೋ ಆ ವ್ಯಕ್ತಿಗಳು ಅಥವಾ ಗರ್ಭಿಣಿ ಮಹಿಳೆಯರು ಸೂರ್ಯಗ್ರಹಣ ನೋಡಬಾರದು. (ಆಧಾರ: ದಾತೆ ಪಂಚಾಂಗ)

೮. ಸೂರ್ಯಗ್ರಹಣ ನೋಡುವಾಗ ವಹಿಸಬೇಕಾದ ಕಾಳಜಿ

ಕಂಕಣಾಕೃತಿ ಮತ್ತು ಖಂಡಗ್ರಾಸ ಸೂರ್ಯಗ್ರಹಣ ನೋಡುವಾಗ ಗ್ರಹಣ ನೋಡಲು ವಿಶಿಷ್ಟವಾಗಿ ತಯಾರಿಸಿರುವ ಕನ್ನಡಕ ಅಥವಾ ಕಪ್ಪು ಮಸಿ ಹಿಡಿದಿರುವ ಕಪ್ಪು ಗಾಜು ಅಥವಾ ಸೂರ್ಯನ ಪ್ರಖರಕಿರಣಗಳು ಕಣ್ಣಿಗೆ ಬೀಳಬಾರದು ಎಂಬುದಕ್ಕಾಗಿ ಲಭ್ಯವಿರುವ ಸಾಧನಗಳನ್ನು ಉಪಯೋಗಿಸಿ ಗ್ರಹಣ ನೋಡಬೇಕು. ಯಾವುದೇ ಕಾರಣಕ್ಕೂ ಬರಿಗಣ್ಣಿನಿಂದ ಸೂರ್ಯನನ್ನು ನೋಡಬಾರದು. ಗ್ರಹಣದ ಛಾಯಾಚಿತ್ರಗಳು ತೆಗೆಯುವ ವ್ಯಕ್ತಿ ಕೂಡ ವಿಶಿಷ್ಟ ‘ಫಿಲ್ಟರಿ’ನ ಉಪಯೋಗ ಮಾಡಿ ಛಾಯಾಚಿತ್ರಗಳನ್ನು ತೆಗೆಯಬೇಕು. ಇಲ್ಲದಿದ್ದರೆ ಅವರ ಕಣ್ಣಿಗೆ ಹಾನಿ ಆಗಬಹುದು.

೯. ಗ್ರಹಣದ ಸ್ನಾನಾದಿ ಮಾಹಿತಿ

‘ಗ್ರಹಣದಲ್ಲಿ ಎಲ್ಲಾ ಉದಕ ಗಂಗೆಯ ಸಮಾನವಾಗಿರುತ್ತದೆ. ಆದರೂ ಉಷ್ಣೋದಕಕ್ಕಿಂದ ಶೀತೋದಕವು ಪುಣ್ಯಕಾರಕ, ನೀರನ್ನು ಮೇಲೆತ್ತಿ ಸ್ನಾನ ಮಾಡುವುದಕ್ಕಿಂತ ಹರಿಯುವ ನೀರು, ಸರೋವರ, ನದಿ, ಮಹಾನದಿ, ಗಂಗೆ, ಸಮುದ್ರ ಇದರಲ್ಲಿನ ಸ್ನಾನವು ಉತ್ತರೋತ್ತರ ಶ್ರೇಷ್ಠ ಮತ್ತು ಪುಣ್ಯಕಾರಕವಾಗಿರುತ್ತದೆ. ಸೂರ್ಯಗ್ರಹಣದಲ್ಲಿ ನರ್ಮದಾ ಸ್ನಾನಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ನರ್ಮದಾಸ್ನಾನ ಮಾಡುವುದು ಸಾಧ್ಯವಾಗದಿದ್ದರೆ ಸ್ನಾನದ ಸಮಯದಲ್ಲಿ ನರ್ಮದೆಯನ್ನು ಸ್ಮರಿಸಬೇಕು. (ಆಧಾರ: ದಾತೆ ಪಂಚಾಂಗ)

೧೦. ಮೋಕ್ಷಸ್ನಾನ ಮತ್ತು ಭೋಜನ ಇದರ ಬಗ್ಗೆ ಮಾಹಿತಿ

‘ಈ ಗ್ರಹಣದ ಮೋಕ್ಷ ಕಾಣುವುದಿಲ್ಲ. ಆದರೂ ಭಾರತೀಯ ಕಾಲಮಾನಕ್ಕನುಸಾರ ಎಲ್ಲಕ್ಕಿಂತ ತಡವಾದ ಮೋಕ್ಷ ಸಮಯದ ನಂತರ ಎಂದರೆ ಸಾಯಂಕಾಲ ೬.೩೨ ರ ನಂತರ ಮೋಕ್ಷ ಸ್ನಾನ ಮಾಡಬೇಕು ಮತ್ತು ಮರುದಿನ ಬೆಳಗ್ಗೆ ಶುದ್ದ ಸೂರ್ಯಬಿಂಬ ನೋಡಿ ನಂತರ ಭೋಜನ ಮಾಡಬೇಕು. (ಆಧಾರ: ದಾತೆ ಪಂಚಾಂಗ)

೧೧. ಸೂರ್ಯಗ್ರಹಣದಲ್ಲಿ ಸಾಧನೆಯ ಮಹತ್ವ

ಗ್ರಹಣಕಾಲದಲ್ಲಿ ವಿಶೇಷ ವಾತಾವರಣದಿಂದ ಪ್ರತಿಯೊಂದು ಜೀವದ ಮೇಲೆ ಪರಿಣಾಮವಾಗುತ್ತದೆ. ಚಂದ್ರಗ್ರಹಣಕ್ಕಿಂತ ಸೂರ್ಯಗ್ರಹಣದ ಕಾಲ ಸಾಧನೆಗಾಗಿ ಹೆಚ್ಚು ಪೂರಕವಾಗಿದೆ. ಜ್ಯೋತಿಷ್ಯ, ಧಾರ್ಮಿಕ ಮತ್ತು ವೈಜ್ಞಾನಿಕ ಹೀಗೆ ಮೂರೂ ಸ್ತರಗಳಲ್ಲಿ ಗ್ರಹಣಕಾಲ ಮಹತ್ವದ್ದಾಗಿರುತ್ತದೆ ಎಂದು ನಂಬಲಾಗಿದೆ. ಗ್ರಹಣಕಾಲ ಇದು ಸಂಧಿಕಾಲವಾಗಿರುವುದರಿಂದ ಈ ಕಾಲದಲ್ಲಿ ಮಾಡುವ ಸಾಧನೆಯ ಪರಿಣಾಮ ಬೇಗನೆ ತಿಳಿಯುತ್ತದೆ. ಗ್ರಹಣಕಾಲದಲ್ಲಿ ಜಪ ಮತ್ತು ದಾನ ಮಾಡುವುದರ ಮಹತ್ವ ಅನಂತ ಪಟ್ಟು ಇರುತ್ತದೆ. ಅದಕ್ಕಾಗಿ ಗ್ರಹಣಮೋಕ್ಷದ ನಂತರ ನಮ್ಮ ಕ್ಷಮತೆಗನುಸಾರ ದಾನ ಮಾಡಬೇಕು. ಸೂರ್ಯಗ್ರಹಣದಲ್ಲಿ ಹೊಸ ಮಂತ್ರ ತೆಗೆದುಕೊಳ್ಳುವುದು ಮತ್ತು ಮಂತ್ರದ ಪುನಶ್ಚರಣೆ ಮಾಡುವುದು ಇವುಗಳಿಗೆ ಸೂರ್ಯಗ್ರಹಣವು ಮುಖ್ಯ ಕಾಲವಾಗಿದೆ. ಹಿಂದೆ ತೆಗೆದುಕೊಂಡಿರುವ ಮಂತ್ರದ ಪುನಶ್ಚರಣೆ ಗ್ರಹಣದ ಪರ್ವಕಾಲದಲ್ಲಿ ಮಾಡಿದರೆ ಮಂತ್ರ ಸಿದ್ಧಿ ಆಗುತ್ತದೆ. ಸೂರ್ಯಗ್ರಹಣದಲ್ಲಿ ಶ್ರೀ ಗುರುಗಳನ್ನು ಅನನ್ಯ ಭಾವದಿಂದ ಸ್ಮರಣೆ ಮಾಡಿದರೆ ಪೂರ್ಣ ಶ್ರದ್ಧೆಯಿಂದ, ಏಕಾಗ್ರಮನಸ್ಸಿನಿಂದ ಮಾಡಿರುವ ಜಪದಿಂದ ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಮತ್ತು ವ್ಯಾವಹಾರಿಕ ತೊಂದರೆ ದೂರವಾಗುತ್ತದೆ. ಸಕಲ ಕಾರ್ಯಗಳಲ್ಲಿ  ಯಶಸ್ಸು ದೊರೆಯುತ್ತದೆ. ಗ್ರಹಣಕಾಲದಲ್ಲಿ ಜಪ ಮಾಡುವುದಕ್ಕಾಗಿ ಜಪಮಾಲೆಯ ಆವಶ್ಯಕತೆ ಇರುವುದಿಲ್ಲ. ಗ್ರಹಣಸ್ಪರ್ಶದಿಂದ ಮೋಕ್ಷದವರೆಗೆ ಸಂಪೂರ್ಣ ಸಮಯ ಅತ್ಯಂತ ಮಹತ್ವದ್ದಾಗಿದೆ.

– ಸೌ. ಪ್ರಾಜಕ್ತಾ ಜೋಶಿ (ಜ್ಯೋತಿಷ್ಯ ಫಲಿತ ವಿಶಾರದೆ, ವಾಸ್ತು ವಿಶಾರದೆ, ಅಂಕ ಜ್ಯೋತಿಷ್ಯ ವಿಶಾರದೆ, ರತ್ನಶಾಸ್ತ್ರ ವಿಶಾರದೆ, ಅಷ್ಟಕವರ್ಗ ವಿಶಾರದೆ, ಸರ್ಟಿಫೈಡ್ ಡೌಸರ್, ರಮಲ ಶಾಸ್ತ್ರಿ, ಹಸ್ತಾಕ್ಷರ ಮನೋವಿಶ್ಲೇಷಣೆ ಶಾಸ್ತ್ರ ವಿಶಾರದೆ ಮತ್ತು ಹಸ್ತಸಾಮುದ್ರಿಕ ಪ್ರಬೋಧ), ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯ.