Baloch Fighters Attack Pakistan Army : ಬಲೂಚಿಸ್ತಾನದ ಬಲೂಚ ಲಿಬರೇಶನ್ ಆರ್ಮಿಯಿಂದಲೂ ಪಾಕಿಸ್ತಾನ ಸೈನ್ಯದ ಮೇಲೆ ದಾಳಿ: 15 ಸೈನಿಕರ ಸಾವು

ಕ್ವೆಟ್ಟಾ, ಕಲಾತ ಮತ್ತು ಮಂಗಚೋರ ನಗರಗಳ ಮೇಲೆ ನಿಯಂತ್ರಣ ಸಾಧಿಸಿರುವುದಾಗಿ ಬಲೂಚ ಲಿಬರೇಶನ್ ಆರ್ಮಿ ದಾವೆ

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನ ಸೈನ್ಯವು ಮೇ 8 ರ ರಾತ್ರಿ ಭಾರತದ ಮೇಲೆ ದಾಳಿ ಮಾಡಿದ ನಂತರ, ಭಾರತವು ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಿತು. ಅದೇ ಸಮಯದಲ್ಲಿ, ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಬಲೂಚ್ ಲಿಬರೇಶನ್ ಆರ್ಮಿ (ಬಿ.ಎಲ್.ಎ.)ಯಿಂದ ಪಾಕಿಸ್ತಾನ ಸೈನ್ಯದ ಮೇಲೆ ದಾಳಿ ನಡೆಸಿದೆ. ಈ ದಾಳಿಯಲ್ಲಿ ಪಾಕಿಸ್ತಾನದ 15 ಸೈನಿಕರು ಹತರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇಲ್ಲಿಂದ ಪಾಕಿಸ್ತಾನ ಸೈನ್ಯದ ಬೆಂಗಾವಲು ಪಡೆ ಹಾದುಹೋಗುತ್ತಿದ್ದಾಗ ಅವರ ಮೇಲೆ ದಾಳಿ ಮಾಡಲಾಯಿತು. ಇದಲ್ಲದೆ, ಬಲೂಚ್ ಸೇನೆಯು ಪಾಕಿಸ್ತಾನ ಸೈನ್ಯದ ಅನೇಕ ನೆಲೆಗಳನ್ನು ಧ್ವಂಸಗೊಳಿಸಿ ಅವುಗಳ ಮೇಲೆ ನಿಯಂತ್ರಣ ಸಾಧಿಸಿದೆ ಎಂದು ಹೇಳಿಕೊಂಡಿದೆ. ಬಲೂಚಿಸ್ತಾನದ ಕ್ವೆಟ್ಟಾ, ಕಲಾತ ಮತ್ತು ಮಂಗೋಚೇರ ನಗರಗಳ ಮೇಲೆ ನಿಯಂತ್ರಣ ಸಾಧಿಸಲಾಗಿದೆ ಎಂದು ಬಲೂಚ್ ಸೇನೆ ಹೇಳಿಕೊಂಡಿದೆ; ಆದರೆ ಇದನ್ನು ಇನ್ನೂ ಯಾರೂ ದೃಢಪಡಿಸಿಲ್ಲ.

ಪಾಕಿಸ್ತಾನದ ಮಾಜಿ ಪ್ರಧಾನಿ ಶಾಹಿದ್ ಖಾಕಾನ ಅಬ್ಬಾಸಿ ಅವರು ಬಲೂಚಿಸ್ತಾನದ ಮೇಲೆ ಈಗ ಪಾಕಿಸ್ತಾನ ಸೈನ್ಯ ಮತ್ತು ಸರಕಾರದ ನಿಯಂತ್ರಣ ದುರ್ಬಲಗೊಳ್ಳುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ. ಅಬ್ಬಾಸಿ ಅವರು, “ನಾನು ನೋಡಿದ್ದು ಭಯಾನಕವಾಗಿದೆ. ಅಲ್ಲಿನ ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂದರೆ ಸರಕಾರಿ ಸಚಿವರು ದೊಡ್ಡ ಭದ್ರತೆ ಇಲ್ಲದೆ ಹೊರಗೆ ಹೋಗಲು ಸಾಧ್ಯವಿಲ್ಲ” ಎಂದು ಹೇಳಿದರು.

ಬಲೂಚ ನಾಯಕನಿಂದ ಬಲೂಚಿಸ್ತಾನದ ಸ್ವಾತಂತ್ರ್ಯ ಘೋಷಣೆ!

ಬಲೂಚ ಲೇಖಕ ಮತ್ತು ನಾಯಕ ಮೀರ ಯಾರ ಬಲೋಚ್ ಅವರು ಬಲೂಚಿಸ್ತಾನದ ಸ್ವಾತಂತ್ರ್ಯವನ್ನು ಘೋಷಿಸಿದ್ದಾರೆ. ಅವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿ, ವಿಶ್ವಸಂಸ್ಥೆಯು ತನ್ನ ಶಾಂತಿ ಕಾರ್ಯಾಚರಣೆಯನ್ನು ಬಲೂಚಿಸ್ತಾನದಲ್ಲಿ ನಡೆಸಲು ಮತ್ತು ಕರೆನ್ಸಿ ಹಾಗೂ ಪಾಸ್ಪೋರ್ಟ್‌ಗಳ ಮುದ್ರಣಕ್ಕಾಗಿ ಶತಕೋಟಿ ಡಾಲರಗಳ ನಿಧಿಯನ್ನು ನೀಡುವಂತೆ ಒತ್ತಾಯಿಸಿದ್ದಾರೆ. ಇದರ ಹೊರತಾಗಿ, ಅವರು ಭಾರತವು ದೆಹಲಿಯಲ್ಲಿ ಬಲೂಚಿಸ್ತಾನದ ರಾಯಭಾರ ಕಚೇರಿಯನ್ನು ತೆರೆಯುವಂತೆ ಸಹ ಒತ್ತಾಯಿಸಿದ್ದಾರೆ.

ಸಂಪಾದಕೀಯ ನಿಲುವು

ಇನ್ನು ಮುಂದೆ ಟಿಟಿಪಿ, ಅಂದರೆ ‘ತೆಹ್ರಿಕ್-ಎ-ತಾಲಿಬಾನ ಪಾಕಿಸ್ತಾನ’ ಸಂಘಟನೆಯಿಂದಲೂ ಪಾಕಿಸ್ತಾನದ ಖೈಬರ್ ಪಂಖ್ತೂಖ್ವಾ ಪ್ರಾಂತ್ಯದಲ್ಲಿ ಪಾಕಿಸ್ತಾನ ಸೈನ್ಯದ ಮೇಲೆ ದಾಳಿಗಳು ನಡೆದರೆ ಆಶ್ಚರ್ಯಪಡಬೇಕಾಗಿಲ್ಲ!