ವಿಶ್ವ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗಿಳ ಅವರಿಗೆ ನೀಡಲಾದ ‘ಓಂ ಶಿವ ಶಕ್ತಿ ಓಂ’ ಪುರಸ್ಕಾರ ಸಮಾರಂಭದ ಅಮೃತ ಕ್ಷಣಗಳು!

ಕೇರಳದ ‘ಶಿವೋಹಂ ಟೆಂಪಲ್ ಆಫ್ ಕಾನ್ಷಿಯಸ್‌ನೆಸ್’ನಿಂದ ಪುರಸ್ಕಾರ!

ಕಣ್ಣೂರು (ಕೇರಳ) – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿ ಹಾಗೂ ವಿಶ್ವ ಕಲ್ಯಾಣಕ್ಕಾಗಿ ಕಠಿಣ ದೈವೀ ಪ್ರವಾಸಗಳನ್ನು ಕೈಗೊಳ್ಳುತ್ತಿರುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗಿಳ ಅವರಿಗೆ ‘ಓಂ ಶಿವ ಶಕ್ತಿ ಓಂ’ ಪುರಸ್ಕಾರ ನೀಡಿ ಗೌರವಿಸಲಾಯಿತು. ಕೇರಳದ ‘ಶಿವೋಹಂ ಟೆಂಪಲ್ ಆಫ್ ಕಾನ್ಷಿಯಸ್‌ನೆಸ್ ಟ್ರಸ್ಟ್’ ವತಿಯಿಂದ ಈ ಪುರಸ್ಕಾರ ನೀಡಲಾಯಿತು. ಈ ಕಾರ್ಯಕ್ರಮದ ವೈಶಿಷ್ಟ್ಯಪೂರ್ಣ ಅಮೃತ ಕ್ಷಣಗಳನ್ನು ಇಲ್ಲಿ ನೀಡಲಾಗಿದೆ.

ಕಾರ್ಯಕ್ರಮದಲ್ಲಿ ನೀಡಲಾದ ವಿವಿಧ ಪುರಸ್ಕಾರಗಳು!

‘ಓಂ ಶಿವ ಶಕ್ತಿ ಓಂ’ ಪುರಸ್ಕಾರದ ನೆನಪಿನ ಕಾಣಿಕೆ

ಆದಿಶಂಕರಾಚಾರ್ಯ ಜಯಂತಿಯ ದಿನದಂದು, ಅಂದರೆ ಮೇ ೨ ರಂದು ‘ಓಂ ಶಿವ ಶಕ್ತಿ ಓಂ’ ಪುರಸ್ಕಾರವನ್ನು ನೀಡಲಾಯಿತು. ಈ ಪುರಸ್ಕಾರದೊಂದಿಗೆ ಈ ಸಮಯದಲ್ಲಿ ‘ಮೈಲಪಿಲಿ (ನವಿಲುಗರಿ)’ ಪುರಸ್ಕಾರವನ್ನೂ ನೀಡಲಾಯಿತು. ಈ ಪುರಸ್ಕಾರವನ್ನು ಆರೋಗ್ಯ ಹಾಗೂ ಇತರ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ನೀಡಲಾಗುತ್ತದೆ.

‘ಓಂ ಶಿವ ಶಕ್ತಿ ಓಂ’ ಪುರಸ್ಕಾರ ಹಾಗೂ ‘ಮೈಲಪಿಲಿ’ ಪುರಸ್ಕಾರ ನೀಡುವ ಕಲ್ಪನೆಯು ‘ಶಿವೋಹಂ ಟೆಂಪಲ್ ಆಫ್ ಕಾನ್ಷಿಯಸ್‌ನೆಸ್ ಟ್ರಸ್ಟ್’ನ ಸಂಸ್ಥಾಪಕರಾದ ಡಾ. ಸಿ.ವಿ. ರವೀಂದ್ರನಾಥ ಅವರದ್ದಾಗಿದೆ. ಅನಾರೋಗ್ಯದ ಕಾರಣದಿಂದ ಅವರು ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ಅವರ ಪುತ್ರಿ ಶುಭಾ ರವೀಂದ್ರನಾಥ ಅವರು ಕಾರ್ಯಕ್ರಮದ ಆರಂಭದಲ್ಲಿ ಎಲ್ಲರನ್ನು ಸ್ವಾಗತಿಸಿದರು. ನಂತರ ‘ನಿರ್ವಾಣ ಷಟ್ಕಂ’ ಅನ್ನು ಹೇಳಲಾಯಿತು. ಪುರಸ್ಕಾರ ಸಮಾರಂಭದ ನಂತರ ಡಾ. ರವೀಂದ್ರನಾಥ ಅವರ ‘ಪ್ರೇಮಾಂಜಲಿ’ ಕವನ ಸಂಕಲನವನ್ನು ಬಿಡುಗಡೆ ಮಾಡಲಾಯಿತು. ಕೃಷ್ಣ ಬೀಚ್ ರೆಸಾರ್ಟ್‌ನ ಶ್ರೀ. ಸುಮಲ ಅವರು ವಂದನಾರ್ಪಣೆ ಮಾಡಿದರು.

‘ಮೈಲಪಿಲಿ ಪುರಸ್ಕಾರ’ ಪುರಸ್ಕಾರದ ಪುರಸ್ಕೃತರು

೧. ಹಿರಿಯ ಪ್ರಾಧ್ಯಾಪಕ ಡಾ. ಸುರೇಶ್ ಕೆ. ಗುಪ್ತನ್, ಅಂತರರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ವಿಶ್ವ ಶಾಂತಿ ಸಂಘಟನೆ ಮತ್ತು ವಿಶ್ವ ಪುನರ್ವಸತಿ ಸಂಘಟನೆ

೨. ಶ್ರೀ. ಬಿ. ಲಾಲಮೋಹನ, ಮಾಜಿ ವೈಜ್ಞಾನಿಕ ಸಲಹೆಗಾರರು, ಸಿ.ಎನ್.ಎಸ್.-ಡಿ.ಆರ್.ಡಿ.ಒ. ಕೇಂದ್ರ ಕಚೇರಿ, ನವದೆಹಲಿ ಹಾಗೂ ಸಂಸ್ಥಾಪಕ ಅಧ್ಯಕ್ಷರು, ಶಾಂತಿ ಗ್ರಾಮ ಮಾನವೀಯಂ ಚಾರಿಟಬಲ್ ಟ್ರಸ್ಟ್

೩. ಡಾ. ಜಯಾ ಲಾಲಮೋಹನ, ಆರೋಗ್ಯ ಸಲಹೆಗಾರರು, ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ಕೇರಳ ರಾಜ್ಯ ಉಪಾಧ್ಯಕ್ಷರು, ಶಾಂತಿ ಗ್ರಾಮ ಮಾನವೀಯಂ ಚಾರಿಟಬಲ್ ಟ್ರಸ್ಟ್

೪. ನಾಟ್ಯಾಚಾರ್ಯ ಗುರು ಶ್ರೀ. ಎನ್.ವಿ. ಕೃಷ್ಣನ ಮಾಸ್ಟರ, ನೃತ್ಯ ಶಿಕ್ಷಕರು

ಶ್ರೀ ಶ್ರೀ ಶ್ರೀ ಮಾತಾ ಅಂಬಿಕಾ ಚೈತನ್ಯಮಯಿ ಅವರ ಸಂಕ್ಷಿಪ್ತ ಪರಿಚಯ

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗಿಳ ಅವರೊಂದಿಗೆ ತಮಿಳುನಾಡಿನ ಗೂಡಲೂರಿನ ಚಿಂತಾಮಣಿ ವಾಘೇಶ್ವರಿ ಮುಕಾಂಬಿಕಾ ದೇವಾಲಯದ ಮಠಾಧಿಪತಿ ಪ.ಪೂ. ಡಾ. ಬ್ರಹ್ಮ ಯೋಗಿನಿ ಶ್ರೀ ಶ್ರೀ ಶ್ರೀ ಮಾತಾ ಅಂಬಿಕಾ ಚೈತನ್ಯಮಯಿ ಅವರಿಗೂ ‘ಓಂ ಶಿವ ಶಕ್ತಿ ಓಂ’ ಪುರಸ್ಕಾರ ನೀಡಿ ಗೌರವಿಸಲಾಯಿತು. ಶ್ರೀ ಶ್ರೀ ಶ್ರೀ ಮಾತಾ ಅಂಬಿಕಾ ಚೈತನ್ಯಮಯಿ ಅವರು ಚಿಕ್ಕಂದಿನಿಂದಲೇ ಸಾಧನೆಯನ್ನು ಆರಂಭಿಸಿದರು. ಅವರಿಗೆ ವೇದ, ಉಪನಿಷತ್ತುಗಳು ಮತ್ತು ಆಯುರ್ವೇದದ ಜ್ಞಾನವಿದೆ. ಅವರಿಗೆ ‘ಬ್ರಹ್ಮಯೋಗಿ ಪುರಸ್ಕಾರ’ ಮುಂತಾದ ವಿವಿಧ ಪುರಸ್ಕಾರಗಳನ್ನು ನೀಡಿ ಗೌರವಿಸಲಾಗಿದೆ.

 

‘ಶಿವೋಹಂ ಟೆಂಪಲ್ ಆಫ್ ಕಾನ್ಷಿಯಸ್‌ನೆಸ್ ಟ್ರಸ್ಟ್’ ಕುರಿತು ಕಿರು ಮಾಹಿತಿ…

‘ಶಿವೋಹಂ ಟೆಂಪಲ್ ಆಫ್ ಕಾನ್ಷಿಯಸ್‌ನೆಸ್ ಟ್ರಸ್ಟ್’ ವತಿಯಿಂದ ಆಧ್ಯಾತ್ಮ ಮತ್ತು ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸಲು ಸಮಾಜದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ಟ್ರಸ್ಟ್ ವತಿಯಿಂದ ಪ್ರತಿ ವರ್ಷ ‘ಓಂ ಶಿವ ಶಕ್ತಿ ಓಂ’ ಪುರಸ್ಕಾರ, ‘ಮೈಲಪಿಲಿ ಪುರಸ್ಕಾರ’ ಮುಂತಾದ ಪುರಸ್ಕಾರಗಳನ್ನು ನೀಡಲಾಗುತ್ತದೆ. ಈ ಟ್ರಸ್ಟ್ ವತಿಯಿಂದ ಕೇರಳದ ‘ಕೃಷ್ಣ ಬೀಚ್ ರೆಸಾರ್ಟ್’ನಲ್ಲಿ ಕೇಂದ್ರವನ್ನು ನಡೆಸಲಾಗುತ್ತದೆ. ಈ ಕೇಂದ್ರದಲ್ಲಿ ‘ಯೋಗ, ಧ್ಯಾನ ಮುಂತಾದವುಗಳ ಮೂಲಕ ಒತ್ತಡ ರಹಿತ ಜೀವನವನ್ನು ಹೇಗೆ ಬದುಕುವುದು?’ ಮುಂತಾದ ವಿಷಯಗಳ ಬಗ್ಗೆ ಸಲಹೆ ನೀಡಲಾಗುತ್ತದೆ. ಈ ಸಂಸ್ಥೆಯು ವಿಶ್ವಸಂಸ್ಥೆಯ ‘ಯು.ಎನ್. ಗ್ಲೋಬಲ್ ಕಾಂಪ್ಯಾಕ್ಟ್’ಗೆ ಸಂಯೋಜಿತವಾಗಿದೆ. ಇದು ವಿಶ್ವಸಂಸ್ಥೆಯ ಕಾರ್ಯತಂತ್ರದ ಉಪಕ್ರಮವಾಗಿದೆ. ಈ ಉಪಕ್ರಮದ ಮೂಲಕ ಮಾನವ ಹಕ್ಕುಗಳು, ಪರಿಸರ ಮುಂತಾದ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಜಾಗತಿಕ ಸಂಸ್ಥೆಗಳಿಗೆ ಸಹಕಾರ ಮತ್ತು ಬೆಂಬಲ ನೀಡಲಾಗುತ್ತದೆ.

ಕಾರ್ಯಕ್ರಮದಲ್ಲಿ ಗಣ್ಯರು ವ್ಯಕ್ತಪಡಿಸಿದ ಮಾರ್ಗದರ್ಶಕ ವಿಚಾರಗಳು

ಗುರುಗಳ ಆಶೀರ್ವಾದದಿಂದಲೇ ಮನುಷ್ಯನು ಆಧ್ಯಾತ್ಮದ ಮಾರ್ಗದಲ್ಲಿ ಮುನ್ನಡೆಯಲು ಸಾಧ್ಯ! – ಬ್ರಹ್ಮಶ್ರೀ ಡಾ. ಸೋಮನಾಥ ರಾಘವನ್ ಆಚಾರ್ಯ, ಕುಲಪತಿ, ಸನಾತನ ಏಲಂ ವಾಸ್ತೂರತ್ನ

ನಮ್ಮ ಗುರುಗಳ ಕೃಪಾಶೀರ್ವಾದ ಮತ್ತು ಅವರ ಸ್ಪರ್ಶಶಿಲೆ(ಪರುಷಶಿಲೆ) ಲಭಿಸಿದರೆ ನಾವು ಆಧ್ಯಾತ್ಮದ ಮಾರ್ಗದಲ್ಲಿ ಮುನ್ನಡೆಯಬಹುದು. ಈ ಕಾರ್ಯಕ್ರಮಕ್ಕೆ ಉಪಸ್ತಿತರಿರಲು ಸಿಕ್ಕಿದ್ದು ನನ್ನ ಭಾಗ್ಯ. ಆದಿ ಶಂಕರಾಚಾರ್ಯರು ಧರ್ಮಕ್ಕಾಗಿ ಬಹಳ ದೊಡ್ಡ ಕೊಡುಗೆ ನೀಡಿದ್ದಾರೆ. ಕಲಿಯುಗದಲ್ಲಿ ಅಧರ್ಮ ಹೆಚ್ಚಾಗಿದೆ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಧಾರ್ಮಿಕ ಮೌಲ್ಯಗಳನ್ನು ಕಾಪಾಡುವುದು ಅತ್ಯಂತ ಅವಶ್ಯಕವಾಗಿದೆ, ಎಂದು ಹೇಳಿದರು.

ಮಾನವ ಭಾವನೆಗಳ ಮೇಲೆ ನಿಯಂತ್ರಣವಿರಬೇಕು! – ಪ್ರಾಧ್ಯಾಪಕ ಡಾ. ಸುರೇಶ್ ಕೆ. ಗುಪ್ತನ್, ಅಂತರರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ವಿಶ್ವ ಶಾಂತಿ ಸಂಘಟನೆ

ಜಗತ್ತಿನ ೬೫ ಪ್ರತಿಶತ ಜನರಲ್ಲಿ ನಿರಾಶೆ ಕಂಡುಬರುತ್ತದೆ. ಪ್ರಸ್ತುತ ಮಕ್ಕಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ‘ಡೌನ್ ಸಿಂಡ್ರೋಮ್’ (ವಿಕಾಸ ಕುಂಠಿತ, ಸೌಮ್ಯದಿಂದ ಮಧ್ಯಮ ಬೌದ್ಧಿಕ ನ್ಯೂನತೆ) ಮುಂತಾದ ಕಾಯಿಲೆಗಳು ಕಂಡುಬರುತ್ತಿವೆ. ಈ ಎಲ್ಲಾ ಕಾಯಿಲೆಗಳಿಗೆ ಮಾನವ ಭಾವನೆಗಳೇ ಕಾರಣ. ಈ ಭಾವನೆಗಳ ಮೇಲೆ ನಿಯಂತ್ರಣವಿರಬೇಕು. ಈ ಕುರಿತು ನಾನು ಪುಸ್ತಕ ಬರೆದಿದ್ದು, ವಿಶ್ವಸಂಸ್ಥೆಯ ವತಿಯಿಂದ ನೀಡಲಾಗುವ ಪುರಸ್ಕಾರಕ್ಕಾಗಿ ಅದು ಆಯ್ಕೆಯಾಗಿತ್ತು. ನೀವು ದಿನದಲ್ಲಿ ೧೦ ನಿಮಿಷ ನಗಲು ಸಾಧ್ಯವಾಗದಿದ್ದರೆ, ನಿಮ್ಮ ಜೀವನ ವ್ಯರ್ಥ, ಎಂದು ಹೇಳಿದರು.

ಪ್ರಾಣಾಯಾಮವು ಒತ್ತಡವನ್ನು ನಿವಾರಿಸುವ ಉತ್ತಮ ಉಪಾಯ! – ಡಾ. ಜ್ಯೋತಿ ಶಮಿತ್, ಮುಖ್ಯ ವೈದ್ಯರು, ‘ಶಿವೋಹಂ ಸ್ಪಿರಿಚ್ಯುಯಲ್ ವೆಲ್ನೆಸ್ ಸೆಂಟರ್’

ಕೃಷ್ಣ ಬೀಚ್ ರೆಸಾರ್ಟ್ ಕೇವಲ ಹೋಟೆಲ್ ಅಲ್ಲ, ಅದು ಒಂದು ಆಧ್ಯಾತ್ಮಿಕ ಕೇಂದ್ರವಾಗಿದೆ. ಜನರಲ್ಲಿ ಒತ್ತಡದ ಪ್ರಮಾಣವು ಬಹಳ ಹೆಚ್ಚುತ್ತಿದೆ. ಈ ಒತ್ತಡದ ಪರಿಣಾಮವು ಆರೋಗ್ಯದ ಮೇಲೆ ಆಗುತ್ತದೆ ಮತ್ತು ಅದರಿಂದ ಅನೇಕ ರೋಗಗಳು ಬರುತ್ತವೆ. ಇದಕ್ಕೆ ಸುಲಭವಾದ ಉಪಾಯವೆಂದರೆ ಪ್ರಾಣಾಯಾಮ ಮಾಡುವುದು. ಶಿವೋಹಂ ಕೇಂದ್ರದಲ್ಲಿ ಉತ್ತಮ ಆರೋಗ್ಯಕ್ಕಾಗಿ ಮಸಾಜ್ ಹಾಗೂ ಶಿರೋಧಾರೆಯನ್ನೂ ಮಾಡಲಾಗುತ್ತದೆ, ಎಂದು ಹೇಳಿದರು.

ಯೋಗ ಮತ್ತು ಧ್ಯಾನದಿಂದ ನಾನು ಒತ್ತಡ ಮುಕ್ತನಾದೆ! – ಡಾ. ಲಾಲಮೋಹನ್, ವೈಜ್ಞಾನಿಕ ಸಲಹೆಗಾರರು, ಭಾರತೀಯ ನೌಕಾಪಡೆ

ನಾನು ನನ್ನ ಜೀವನದಲ್ಲಿ ಯೋಗ ಮತ್ತು ಧ್ಯಾನವನ್ನು ಮಾಡಿದ್ದರಿಂದ ಒತ್ತಡದಿಂದ ಮುಕ್ತಿ ಪಡೆಯಲು ಸಾಧ್ಯವಾಯಿತು. ನಂತರ ಸಮಾಜವೂ ಒತ್ತಡ ರಹಿತ ಜೀವನವನ್ನು ಹೇಗೆ ಬದುಕಬಹುದು?, ಎಂದು ನಾನು ಪ್ರಯತ್ನಿಸಲು ಪ್ರಾರಂಭಿಸಿದೆ. ನಾನು ಸುಲಭವಾದ ಕುಂಡಲಿನಿ ಯೋಗವನ್ನು ಕಲಿತುಕೊಂಡೆ. ಇದರಿಂದ ನಿಮ್ಮ ಸೃಜನಶೀಲತೆ ಹೆಚ್ಚಾಗುತ್ತದೆ. ಸಮಾಜದಲ್ಲಿ ಕುಂಡಲಿನಿ ಜಾಗೃತಗೊಳಿಸಲು ಯೋಗ ಕಲಿಸುವ ಕೇಂದ್ರಗಳನ್ನು ಸ್ಥಾಪಿಸುವುದು ಅವಶ್ಯಕವಾಗಿದೆ. ಭಾರತೀಯ ಸೈನಿಕರಿಗೆ ಸುಲಭ ಮತ್ತು ಸರಳ ಯೋಗವನ್ನು ಹೇಗೆ ಮಾಡಬಹುದು ಎಂದು ನಾನು ಕಂಡುಹಿಡಿದಿದ್ದೇನೆ, ಎಂದು ಹೇಳಿದರು.


ಸಮಾಜದಲ್ಲಿ ಸಾಧನೆಯ ಪ್ರಚಾರ ಮತ್ತು ಪ್ರಸಾರ ಮಾಡುವುದು ಮತ್ತು ಸಮಾಜಕ್ಕೆ ಸಮಷ್ಟಿ ಸಾಧನೆಯ ಬಗ್ಗೆ ತಿಳಿಸುವುದು ನಮ್ಮ ಧರ್ಮ!

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ ಅವರಿಗೆ ‘ಓಂ ಶಿವ ಶಕ್ತಿ ಓಂ’ ಪುರಸ್ಕಾರ ನೀಡಿ ಗೌರವಿಸಿದ ನಂತರ ಅವರು ವ್ಯಕ್ತಪಡಿಸಿದ ಆಧ್ಯಾತ್ಮಿಕ ವಿಚಾರಗಳು!

೧. ‘ಓಂ ಶಿವ ಶಕ್ತಿ ಓಂ’ ಪುರಸ್ಕಾರ ನನಗೆ ದೊರೆತಿಲ್ಲ, ಗುರುದೇವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ದೊರೆತಿದೆ!

ಇಲ್ಲಿ ಉಪಸ್ಥಿತರಿರುವ ಎಲ್ಲಾ ವಿದ್ವಾಂಸರಿಗೂ ಮತ್ತು ಗಣ್ಯರಿಗೂ ನನ್ನ ನಮಸ್ಕಾರಗಳು! ‘ಶಿವೋಹಂ ಟೆಂಪಲ್ ಆಫ್ ಕಾನ್ಷಿಯಸ್‌ನೆಸ್’ನ ಸಂಸ್ಥಾಪಕರಾದ ಡಾ. ಸಿ.ವಿ. ರವೀಂದ್ರನಾಥ ಮತ್ತು ಅವರ ಪತ್ನಿ ಸೌ. ಸುಧಾ ಅವರು ನಮ್ಮನ್ನು ಇಲ್ಲಿಗೆ ಆಹ್ವಾನಿಸಿದ್ದಾರೆ. ಅದಕ್ಕಾಗಿ ನಾವು ಅವರ ಚರಣಗಳಿಗೆ ಕೃತಜ್ಞರಾಗಿದ್ದೇವೆ. ‘ಓಂ ಶಿವ ಶಕ್ತಿ ಓಂ’ ಪುರಸ್ಕಾರ ನನಗೆ ದೊರೆತಿಲ್ಲ, ನಮ್ಮ ಗುರುದೇವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ದೊರೆತಿದೆ. ನಾನು ಕೇವಲ ಒಂದು ಮಾಧ್ಯಮ. ಗುರುಗಳ ಕೃಪೆಯಿಂದಲೇ ನಾವು ಜೀವನದಲ್ಲಿ ಯಶಸ್ವಿಯಾಗುತ್ತೇವೆ. ಗುರುದೇವರ ಕೃಪೆಯಿಂದಲೇ ನಮ್ಮ ಜೀವನವು ಸಾತ್ವಿಕವಾಗುತ್ತದೆ ಮತ್ತು ನಮ್ಮ ಜೀವನಕ್ಕೆ ಅರ್ಥ ಸಿಗುತ್ತದೆ.

೨. ಮಾನವ ಜೀವನದಲ್ಲಿ ಸಾಧನೆಗೆ ಅಸಾಧಾರಣ ಮಹತ್ವವಿದ್ದು, ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ‘ಗುರುಕೃಪಾಯೋಗ’ ಎಂಬ ಸಾಧನಾ ಮಾರ್ಗವನ್ನು ನಿರ್ಮಿಸಿರುವುದು

ಈಶ್ವರನನ್ನು ಪಡೆಯುವುದು ಜೀವನದ ಮುಖ್ಯ ಉದ್ದೇಶವಾಗಿರಬೇಕು ಮತ್ತು ಅದಕ್ಕಾಗಿ ಸಾಧನೆ ಮಾಡಬೇಕು. ಸಾಧನೆ ಮಾಡುವುದರಿಂದಲೇ ನಮಗೆ ಆನಂದ ಪ್ರಾಪ್ತಿಯಾಗುತ್ತದೆ. ಸಾಧನೆಯನ್ನು ಅನೇಕ ವಿಧಗಳಲ್ಲಿ ಮಾಡಲಾಗುತ್ತದೆ. ಕೆಲವರು ಭಕ್ತಿ ಮಾರ್ಗ, ಕೆಲವರು ಜ್ಞಾನ ಮಾರ್ಗ, ಕೆಲವರು ಧ್ಯಾನ ಮಾರ್ಗ, ಮತ್ತೆ ಕೆಲವರು ಕರ್ಮ ಮಾರ್ಗದ ಮೂಲಕ ದೇವರ ಹತ್ತಿರ ಹೋಗುತ್ತಾರೆ; ಆದರೆ ಈ ಎಲ್ಲಾ ಮಾರ್ಗಗಳು ಒಂದೇ ಪಥದಲ್ಲಿ ಮುಂದುವರಿಯುತ್ತವೆ ಮತ್ತು ಅದು ದೇಹ, ಮನಸ್ಸು ಮತ್ತು ಬುದ್ಧಿಯ ಸಮಗ್ರ ಶುದ್ಧೀಕರಣ ಮಾಡುವ ‘ಗುರುಕೃಪಾಯೋಗ’ ಮಾರ್ಗವಾಗಿದೆ! ಗುರುಕೃಪಾಯೋಗವು ಕಲಿಯುಗದಲ್ಲಿ ಈಶ್ವರನನ್ನು ಪಡೆಯಲು ಇರುವ ಅತ್ಯುತ್ತಮ ಮಾರ್ಗವಾಗಿದೆ. ಇದರಲ್ಲಿ ಮುಖ್ಯವಾಗಿ ನಾಮಜಪ, ಸತ್ಸೇವೆ, ಹಾಗೂ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಮಾಡುವುದು ಹೇಗೆ?, ಎಂದು ಕಲಿಸಲಾಗುತ್ತದೆ.

೩. ಆಧ್ಯಾತ್ಮದ ಅಧ್ಯಯನ ಮತ್ತು ವೈಜ್ಞಾನಿಕ ಸಂಶೋಧನೆ ಮಾಡಿ ಆಧ್ಯಾತ್ಮ ಮತ್ತು ವಿಜ್ಞಾನವನ್ನು ಒಂದು ಸುವರ್ಣ ದಾರದಿಂದ ಸುಂದರವಾಗಿ ಹೆಣೆದ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು!

ಈ ವಿಜ್ಞಾನ ಯುಗದಲ್ಲಿ ಜನರಿಗೆ ಸಂತರ ವಚನಗಳ ಮೇಲೆ ಶ್ರದ್ಧೆ ಕಡಿಮೆ ಇರುತ್ತದೆ; ಆದರೆ ನಾವು ಅದೇ ವಿಷಯವನ್ನು ವೈಜ್ಞಾನಿಕ ಸಂಶೋಧನೆ ಮಾಡಿ ಹೇಳಿದರೆ, ಅದರ ಮೇಲೆ ಜನರಿಗೆ ಹೆಚ್ಚು ನಂಬಿಕೆ ಬರುತ್ತದೆ. ನಮ್ಮ ಗುರುದೇವರು ಆಧ್ಯಾತ್ಮ ಮತ್ತು ವಿಜ್ಞಾನವನ್ನು ಒಂದು ಸುವರ್ಣ ದಾರದಿಂದ ಸುಂದರವಾಗಿ ಹೆಣೆದಿದ್ದಾರೆ. ‘ಜೀವನದ ಪ್ರತಿಯೊಂದು ಕ್ರಿಯೆಯೂ ಸಾತ್ವಿಕವಾಗಿರಬೇಕು’, ಎಂದು ನಮ್ಮ ಗುರುದೇವರು ನಮಗೆ ಕಲಿಸಿದರು. ಅವರು ಸ್ವತಃ ಒಬ್ಬ ಯಶಸ್ವಿ ವೈದ್ಯರಾಗಿದ್ದಾರೆ. ಆದ್ದರಿಂದ ಅವರು ಜೀವನದ ಸಣ್ಣ-ಪುಟ್ಟ ವಿಷಯಗಳ ಬಗ್ಗೆ ಸಂಶೋಧನೆ ಮಾಡಿದ್ದಾರೆ, ಉದಾಹರಣೆಗೆ ‘ಹದಿನಾರು ಸಂಸ್ಕಾರಗಳ ಉದ್ದೇಶವೇನು? ಪೂಜಾ ಸಾಮಗ್ರಿಗಳ ಮಹತ್ವವೇನು? ಸಾತ್ವಿಕ ಆಭರಣಗಳನ್ನು ಹೇಗೆ ತಯಾರಿಸಬೇಕು? ಸಾತ್ವಿಕ ಉಡುಪು ಹೇಗಿರಬೇಕು? ಕೂದಲ ವಿನ್ಯಾಸ ಹೇಗಿರಬೇಕು? ಅನ್ನಪೂರ್ಣ ಕೋಣೆಯಲ್ಲಿ (ಅಡುಗೆಮನೆಯಲ್ಲಿ) ತರಕಾರಿಗಳನ್ನು ಹೇಗೆ ಸಾತ್ವಿಕ ರೀತಿಯಲ್ಲಿ ಕತ್ತರಿಸಬೇಕು?’ ಇತ್ಯಾದಿ. ಇಂತಹ ಅನೇಕ ವಿಷಯಗಳ ಮೇಲೆ ಸನಾತನ ಸಂಸ್ಥೆಯು ಗ್ರಂಥಗಳನ್ನು ಪ್ರಕಟಿಸಿದೆ. ನಮ್ಮ ಗುರುದೇವರು ಪ್ರತಿಯೊಂದು ಕ್ರಿಯೆಯ ಹಿಂದಿನ ಅಧ್ಯಾತ್ಮ ಶಾಸ್ತ್ರವನ್ನು ಜನರಿಗೆ ಹೇಳಲು ಪ್ರಾರಂಭಿಸಿದರು. ಈ ಪ್ರಕ್ರಿಯೆಯಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ಸಾವಿರಾರು ವಿಷಯಗಳ ಮೇಲೆ ಸಂಶೋಧನಾ ಪ್ರಬಂಧಗಳನ್ನು ಸಿದ್ಧಪಡಿಸಿದ್ದು, ಅವು ದೇಶ-ವಿದೇಶಗಳಲ್ಲಿ ಗೌರವಿಸಲ್ಪಟ್ಟಿವೆ. ಈ ಪ್ರಕ್ರಿಯೆಯಲ್ಲಿ ಡಾ. ರವೀಂದ್ರನಾಥ ಅವರು ನಮ್ಮೊಂದಿಗೆ ಸೇರಿಕೊಂಡರು. ‘ಅವರು ಈ ಕಾರ್ಯದೊಂದಿಗೆ ಸೇರಿಕೊಂಡಿರುವುದು’, ನಮ್ಮ ಭಾಗ್ಯವೆಂದು ನಾವು ಭಾವಿಸುತ್ತೇವೆ.

೪. ‘ಮನುಷ್ಯ ಜನ್ಮದ ಮುಖ್ಯ ಉದ್ದೇಶ ‘ಈಶ್ವರನನ್ನು ಪಡೆಯುವುದು’, ಇದೇ ಆಗಿದೆ’, ಇದನ್ನು ಮನಸ್ಸಿನಲ್ಲಿ ಬಿಂಬಿಸಿ ಸಮಾಜವನ್ನು ಆಧ್ಯಾತ್ಮ ಮತ್ತು ಸಾಧನೆಯ ಕಡೆಗೆ ತಿರುಗಿಸಿದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು!

ವಿಜ್ಞಾನದ ಭಾಷೆಯಲ್ಲಿ ಮತ್ತು ಸರಳ ಶೈಲಿಯಲ್ಲಿ ಜನರಿಗೆ ಆಧ್ಯಾತ್ಮವನ್ನು ತಿಳಿಸಿದರೆ ಮಾತ್ರ ಅವರು ಸಾಧನೆ ಮಾಡಲು ಸಾಧ್ಯ. ಸಾತ್ವಿಕ ಮತ್ತು ಅಸಾತ್ವಿಕ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು ಪ್ರತಿಯೊಬ್ಬರೂ ಸಾಧನೆ ಮಾಡಲೇಬೇಕು. ಸಾಧನೆಯಿಂದ ನಮಗೆ ನಕರಾತ್ಮಕ ಮತ್ತು ಸಕರಾತ್ಮಕ ಸ್ಪಂದನಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗುತ್ತದೆ. ಯಾವಾಗ ನಾಮಜಪ ಹಾಗೂ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯಿಂದ ನಮ್ಮ ದೇಹ ಮತ್ತು ಮನಸ್ಸು ಶುದ್ಧವಾಗಲು ಪ್ರಾರಂಭಿಸುತ್ತದೆಯೋ, ಆಗ ನಮಗೆ ಈ ವ್ಯತ್ಯಾಸವು ಮುಖ್ಯವಾಗಿ ಗಮನಕ್ಕೆ ಬರುತ್ತದೆ. ‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಮಾಡುವುದು ಹೇಗೆ?’ ಎಂಬ ವಿಷಯದ ಮೇಲೆ ಸನಾತನ ಸಂಸ್ಥೆಯು ಗ್ರಂಥಗಳನ್ನು ಪ್ರಕಟಿಸಿದೆ.

ಜೀವನದ ಪ್ರತಿಯೊಂದು ಕರ್ಮವು ಸಾತ್ವಿಕವಾದರೆ, ಈಶ್ವರ ಪ್ರಾಪ್ತಿ ದೂರವಿಲ್ಲ. ‘ಸಮಾಜದಲ್ಲಿ ಸಾಧನೆಯ ಪ್ರಚಾರ ಮತ್ತು ಪ್ರಸಾರ ಮಾಡುವುದು ಮತ್ತು ಸಮಾಜಕ್ಕೆ ಸಮಷ್ಟಿ ಸಾಧನೆಯ ಬಗ್ಗೆ ಜಾಗೃತಗೊಳಿಸುವುದು’, ಇದು ನಮ್ಮ ಧರ್ಮ ಮತ್ತು ಇದು ನಮ್ಮೆಲ್ಲರ ಕರ್ತವ್ಯವಾಗಿದೆ. ಇದರಿಂದ ಸಮಾಜದಲ್ಲಿ ಸಾಧನೆಯ ಬಗ್ಗೆ ಜಾಗೃತಿ ಮೂಡುತ್ತದೆ ಮತ್ತು ನಮ್ಮ ರಾಷ್ಟ್ರವು ತಾನಾಗಿಯೇ ಸಾತ್ವಿಕವಾಗುತ್ತದೆ!

ನಮ್ಮ ಗುರುದೇವ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ನಮಗೆ ‘ಸಮಾಜದಲ್ಲಿ ಸಾತ್ವಿಕತೆಯನ್ನು ಹೇಗೆ ನಿರ್ಮಿಸುವುದು?’ ಎಂಬುದರ ಬಗ್ಗೆ ಶಿಕ್ಷಣ ನೀಡಿದರು. ನಮ್ಮ ಮೇಲೆ ಸಾಧನೆಯ ಸಂಸ್ಕಾರವನ್ನು ಮಾಡಿದರು. ‘ಈ ಕಲಿಯುಗದಲ್ಲಿ ಸಾತ್ವಿಕ ರೂಪದಲ್ಲಿ ಹೇಗೆ ಬದುಕಬೇಕು?’ ಎಂದು ಅವರೇ ನಮಗೆ ಕಲಿಸಿದರು ಮತ್ತು ‘ಮನುಷ್ಯ ಜನ್ಮದ ಮುಖ್ಯ ಉದ್ದೇಶ ಈಶ್ವರ ಪ್ರಾಪ್ತಿ, ಇದೇ ಆಗಿದೆ’, ಎಂದು ಮನಸ್ಸಿನಲ್ಲಿ ಬಿಂಬಿಸಿದರು. ಅವರು ನಮ್ಮ ಜೀವನವನ್ನು ದೈವೀ ಚೈತನ್ಯದಿಂದ ಸಮೃದ್ಧಗೊಳಿಸಿದರು ಮತ್ತು ನಮಗೆ ನಿಜವಾಗಿ ಹೇಗೆ ಜೀವನವನ್ನು ಸಾಗಿಸಬೇಕು ಇದರ ಬಗ್ಗೆ ಮಾರ್ಗವನ್ನು ತೋರಿಸಿದರು. ಇದಕ್ಕಾಗಿ ನಾವು ಅವರ ಚರಣಗಳಿಗೆ ಕೃತಜ್ಞರಾಗಿದ್ದೇವೆ.

೫. ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಬೋಧನೆಯಿಂದ ಅನೇಕ ಜನರು ಸಂತರು ಮತ್ತು ಜೀವನಮುಕ್ತರಾಗುತ್ತಾರೆ!

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವನ್ನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹಸ್ತದಿಂದ ೨೦೧೪ ರಲ್ಲಿ ಸ್ಥಾಪಿಸಲಾಯಿತು. ಆದ್ದರಿಂದ ಆಧ್ಯಾತ್ಮ ಶಾಸ್ತ್ರದಲ್ಲಿ ಆಸಕ್ತಿ ಇರುವ ಅನೇಕ ಜನರು ಈಗ ಸೇರಿಕೊಳ್ಳುತ್ತಿದ್ದಾರೆ. ಈ ವಿಶ್ವವಿದ್ಯಾಲಯದ ಬೋಧನೆಯಿಂದ ಅನೇಕ ಜನರು ಸಂತರು ಮತ್ತು ಜೀವನಮುಕ್ತರಾಗುತ್ತಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಜೀವನದಲ್ಲಿ ‘ಸಂತ’ ಎಂಬ ಪದವಿಗಿಂತ ದೊಡ್ಡ ಪದವಿ ಇರಲು ಸಾಧ್ಯವೇ? ‘ಈಶ್ವರನ ಕೃಪೆಯಿಂದ ಎಲ್ಲರೂ ಸಾಧನೆ ಮಾಡಿ ಎಲ್ಲಾಕಡೆಗಳಲ್ಲಿ ಸಾತ್ವಿಕ ಸಮಾಜ ಮತ್ತು ರಾಷ್ಟ್ರ ನಿರ್ಮಾಣವಾಗಲಿ, ಹಾಗೂ ಎಲ್ಲರೂ ಜೀವನಮುಕ್ತರಾಗಲಿ’, ಎಂದು ಭಗವಂತನ ಚರಣಗಳಲ್ಲಿ ಪ್ರಾರ್ಥಿಸಿ ನನ್ನ ಮಾತನ್ನು ಮುಗಿಸುತ್ತೇನೆ.

ಜೈ ಗುರುದೇವ್ | ಜೈ ಶ್ರೀಕೃಷ್ಣ |

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗಿಳ