ಪಹಲ್ಗಾಮ್ ಭಯೋತ್ಪಾದಕ ದಾಳಿಯ ಪರಿಣಾಮ
ವೃಂದಾವನ (ಉತ್ತರಪ್ರದೇಶ) – ವೃಂದಾವನದ ಪ್ರಸಿದ್ಧ ಬಾಂಕೆ ಬಿಹಾರಿ ದೇವಸ್ಥಾನವು ಮುಸ್ಲಿಂ ಅಂಗಡಿಗಳೊಂದಿಗೆ ವ್ಯವಹಾರ ಮಾಡುವುದನ್ನು ನಿಲ್ಲಿಸಬೇಕು ಎಂದು ಹಿಂದೂ ಸಂಘಟನೆಗಳು ಒತ್ತಾಯಿಸಿವೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಕೆಲವು ಹಿಂದೂ ಸಂಘಟನೆಗಳು ವೃಂದಾವನ ಮತ್ತು ಮಥುರಾದಲ್ಲಿ ಪ್ರತಿಭಟನೆ ನಡೆಸಿದವು. ಈ ಸಂಘಟನೆಗಳು ಹಿಂದೂ ಯಾತ್ರಿಕರು ಮತ್ತು ಹಿಂದೂ ಅಂಗಡಿಯವರು ಮುಸ್ಲಿಂ ಸಮುದಾಯದೊಂದಿಗೆ ವ್ಯವಹರಿಸದಂತೆ ಕರೆ ನೀಡಿದರು. ಇದರೊಂದಿಗೆ ಮುಸ್ಲಿಂ ಅಂಗಡಿಯವರು ತಮ್ಮ ಅಂಗಡಿಗಳ ಮೇಲೆ ಮಾಲೀಕರ ಹೆಸರನ್ನು ಬರೆಯುವಂತೆ ತಿಳಿಸಲಾಯಿತು.
೧. ‘ಕಾಶಿ ವಿದ್ವತ್ ಪರಿಷತ್ತಿನ’ ಸದಸ್ಯ ನಾಗೇಂದ್ರ ಮಹಾರಾಜ್ ಅವರು ಹಿಂದೂ ಅಂಗಡಿಯವರಿಗೆ ‘ಮುಸ್ಲಿಂ ಸಮುದಾಯದೊಂದಿಗೆ ವ್ಯಾಪಾರ ಮಾಡಬೇಡಿ ಮತ್ತು ಆ ಸಮುದಾಯದ ಜನರಿಗೆ ಉದ್ಯೋಗ ನೀಡಬೇಡಿ’ ಎಂದು ಕರೆ ನೀಡಿದ್ದಾರೆ.
೨. ದೇವಸ್ಥಾನದ ಅರ್ಚಕರು ಮತ್ತು ಆಡಳಿತ ಮಂಡಳಿಯ ಸದಸ್ಯ ಜ್ಞಾನೇಂದ್ರ ಕಿಶೋರ್ ಗೋಸ್ವಾಮಿ ಅವರು ಮಾತನಾಡಿ, ಮುಸ್ಲಿಂ ಕುಶಲಕರ್ಮಿಗಳು ಮತ್ತು ನೇಕಾರರು ಬಾಂಕೆ ಬಿಹಾರಿಗೆ ಬಟ್ಟೆಗಳನ್ನು ನೇಯುತ್ತಾರೆ. ದೇವತೆಗಾಗಿ ಕಿರೀಟ ಮತ್ತು ಬಳೆಗಳಂತಹ ವಸ್ತುಗಳನ್ನು ಸಹ ಮುಸ್ಲಿಂ ಕುಶಲಕರ್ಮಿಗಳು ತಯಾರಿಸುತ್ತಾರೆ. ಅನೇಕ ಮುಸ್ಲಿಂ ಭಕ್ತರು ಸಹ ದೇವಸ್ಥಾನಕ್ಕೆ ದರ್ಶನಕ್ಕಾಗಿ ಬರುತ್ತಾರೆ, ಎಂದು ಹೇಳಿದ್ದಾರೆ.
ಬೇಡಿಕೆ ಪ್ರಾಯೋಗಿಕವಾಗಿ ಅಯೋಗ್ಯ ! – ದೇವಸ್ಥಾನದ ಆಡಳಿತ ಮಂಡಳಿ
ಆದಾಗ್ಯೂ, ಬಾಂಕೆ ಬಿಹಾರಿ ದೇವಸ್ಥಾನದ ಆಡಳಿತ ಮಂಡಳಿಯು ಈ ಬೇಡಿಕೆಯನ್ನು ಸ್ಪಷ್ಟವಾಗಿ ನಿರಾಕರಿಸಿದೆ. ದೇವಸ್ಥಾನದ ಅರ್ಚಕರು ಮತ್ತು ದೇವಸ್ಥಾನದ ಆಡಳಿತ ಮಂಡಳಿಯು ಈ ಬೇಡಿಕೆ ಪ್ರಾಯೋಗಿಕವಾಗಿ ಅಯೋಗ್ಯ ಎಂದು ಹೇಳಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ ಜ್ಞಾನೇಂದ್ರ ಕಿಶೋರ್ ಗೋಸ್ವಾಮಿ ಅವರು ಮಾತನಾಡಿ, ವೃಂದಾವನದಲ್ಲಿ ಹಿಂದೂ ಮತ್ತು ಮುಸ್ಲಿಮರು ವರ್ಷಗಳಿಂದ ಶಾಂತಿಯಿಂದ ಮತ್ತು ಬಾಂಧವ್ಯದಿಂದ ವಾಸಿಸುತ್ತಿದ್ದಾರೆ, ಎಂದು ಹೇಳಿದ್ದಾರೆ.