Kanchi Kamakoti Peetam : ಆಚಾರ್ಯ ಗಣೇಶ ಶರ್ಮಾ ಅವರು ಕಂಚಿ ಕಾಮಕೋಟಿ ಪೀಠದ ಉತ್ತರಾಧಿಕಾರಿಯಾಗಿ ಘೋಷಣೆ

ಕಂಚೀಪುರಂ (ತಮಿಳುನಾಡು) – ಅಕ್ಷಯ ತೃತೀಯೆಯ ಶುಭ ದಿನದಂದು ಕಂಚಿ ಕಾಮಕೋಟಿ ಪೀಠದ ೭೧ನೇ ಶಂಕರಾಚಾರ್ಯರಾಗಿ ೨೫ ವರ್ಷದ ಆಚಾರ್ಯ ಗಣೇಶ ಶರ್ಮಾ ಅವರನ್ನು ಔಪಚಾರಿಕವಾಗಿ ಘೋಷಿಸಲಾಗಿದೆ. ಅವರಿಗೆ ಸತ್ಯ ಚಂದ್ರಶೇಖರೇಂದ್ರ ಸರಸ್ವತಿ ಎಂದು ನಾಮಕರಣ ಮಾಡಲಾಗಿದೆ. ಕಂಚಿ ಮಠದಲ್ಲಿ ಅವರ ಪಟ್ಟಾಭಿಷೇಕ ನೆರವೇರಿತು. ಕಂಚಿ ಮಠದ ಪರಿಸರದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ದೇಶದಾದ್ಯಂತದ ವೇದಾಚಾರ್ಯರು, ಭಿಕ್ಷುಗಳು, ಧಾರ್ಮಿಕ ಮುಖಂಡರು ಮತ್ತು ಭಕ್ತರು ಉಪಸ್ಥಿತರಿದ್ದರು. ಹಾಲಿ ಶಂಕರಾಚಾರ್ಯ ಶ್ರೀ ವಿಜಯೇಂದ್ರ ಸರಸ್ವತಿ ಅವರು ಸ್ವತಃ ಅವರಿಗೆ ಸನ್ಯಾಸ ದೀಕ್ಷೆಯನ್ನು ನೀಡಿದರು. ಆಚಾರ್ಯ ಗಣೇಶ ಶರ್ಮಾ ಅವರು ಶಂಕರಾಚಾರ್ಯ ಶ್ರೀ ವಿಜಯೇಂದ್ರ ಸರಸ್ವತಿ ಅವರ ಉತ್ತರಾಧಿಕಾರಿಯಾಗಲಿದ್ದಾರೆ. ಕಂಚಿ ಕಾಮಕೋಟಿ ಪೀಠವನ್ನು ಆದಿ ಶಂಕರಾಚಾರ್ಯರು ಸ್ಥಾಪಿಸಿದರು ಮತ್ತು ಈ ಮಠವು ಶಂಕರಾಚಾರ್ಯ ಪರಂಪರೆಯ ೫ ಪೀಠಗಳಲ್ಲಿ ಒಂದಾಗಿದೆ. ಈ ಮಠವು ಅದ್ವೈತ ವೇದಾಂತ ಮತ್ತು ವೈದಿಕ ಶಿಕ್ಷಣದ ಕೇಂದ್ರವಾಗಿ ಉಳಿದಿದೆ.

ಆಚಾರ್ಯ ಗಣೇಶ ಶರ್ಮಾ ಅವರ ಮೂಲ ಹೆಸರು ದುಡ್ಡು ಸತ್ಯ ವೆಂಕಟ ಸೂರ್ಯ ಸುಬ್ರಹ್ಮಣ್ಯಂ ಗಣೇಶ ಶರ್ಮಾ ದ್ರಾವಿಡ. ಅವರು ಆಂಧ್ರಪ್ರದೇಶದ ನಿವಾಸಿಯಾಗಿದ್ದಾರೆ. ಅವರು ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಇತರ ಧಾರ್ಮಿಕ ಗ್ರಂಥಗಳ ಜ್ಞಾನವನ್ನು ಸಂಪಾದಿಸಿದ್ದಾರೆ.