Pak Y’tube Channels Ban : ಭಾರತದಲ್ಲಿ ಪಾಕಿಸ್ತಾನದ 17 ಯೂಟ್ಯೂಬ್ ಚಾನೆಲ್ ಬ್ಯಾನ್

ಡಾನ್ ನ್ಯೂಸ್, ಜಿಯೋ ನ್ಯೂಸ್ ಈ ಸುದ್ದಿ ವಾಹಿನಿಗಳು ಹಾಗೂ ಕ್ರಿಕೆಟಿಗ ಶೋಯೆಬ್ ಅಖ್ತರ್ ನ ವಾಹಿನಿಗಳ ಸಮಾವೇಶ

ನವದೆಹಲಿ – ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತವು ಪಾಕಿಸ್ತಾನದ 17 ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಿದೆ. ಇದರಲ್ಲಿ ಜಿಯೋ ನ್ಯೂಸ್, ಡಾನ್ ನ್ಯೂಸ್, ಸಮಾ ಟಿವಿ ಈ ಪ್ರಸಿದ್ಧ ವಾಹಿನಿಗಳೊಂದಿಗೆ ಪ್ರಸಿದ್ಧ ಮಹಿಳಾ ಪತ್ರಕರ್ತೆ ಆರ್ಜೂ ಕಾಸ್ಮಿ ಹಾಗೂ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಅವರ ವಾಹಿನಿಯೂ ಸೇರಿದೆ. ಈ ವಾಹಿನಿಗಳಿಂದ ಭಾರತ ಮತ್ತು ಭದ್ರತಾ ಸಂಸ್ಥೆಗಳ ವಿರುದ್ಧ ಸುಳ್ಳು ಹಾಗೂ ದಿಕ್ಕುತಪ್ಪಿಸುವ ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತಿತ್ತು.

ಪ್ರಧಾನಿ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಡುವೆ ಸಭೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನಡುವೆ ಏಪ್ರಿಲ್ ೨೮ ರಂದು ೪೦ ನಿಮಿಷಗಳ ಕಾಲ ಸಭೆ ನಡೆಯಿತು. ರಾಜನಾಥ್ ಸಿಂಗ್ ಅವರು ಪ್ರಧಾನಮಂತ್ರಿ ಮೋದಿ ಅವರ ನಿವಾಸಕ್ಕೆ ಆಗಮಿಸಿದ್ದರು. ಈ ಸಭೆಯಲ್ಲಿ ಏನು ಚರ್ಚೆಯಾಯಿತು ಎಂಬುದು ತಿಳಿದುಬಂದಿಲ್ಲ. ಏಪ್ರಿಲ್ ೨೭ ರ ರಾತ್ರಿಯೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಿವಾಸಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬಂದಿದ್ದರು. ಈ ಇಬ್ಬರು ನಾಯಕರ ನಡುವೆ ಸುಮಾರು ೪೫ ನಿಮಿಷಗಳ ಕಾಲ ಸಭೆ ನಡೆಯಿತು. ಈ ಸಭೆಗೂ ಮುನ್ನ ಮೂರೂ ಸೇನೆಗಳ ಮುಖ್ಯಸ್ಥ ಅನಿಲ್ ಚೌಹಾಣ್ ಅವರು ರಾಜನಾಥ್ ಸಿಂಗ್ ಅವರೊಂದಿಗೆ ಸಭೆ ನಡೆಸಿದ್ದರು. ಗಡಿ ಭದ್ರತಾ ಪಡೆಯ ಮಹಾನಿರ್ದೇಶಕರೂ ಗೃಹ ಸಚಿವಾಲಯಕ್ಕೆ ಭೇಟಿ ನೀಡಿ ಗೃಹ ಕಾರ್ಯದರ್ಶಿಯೊಂದಿಗೆ ಚರ್ಚಿಸಿದ್ದರು.

ಪಹಲ್ಗಾಮ್ ಘಟನೆಯ ನಂತರ ಪಾಕಿಸ್ತಾನಿ ಸೈನ್ಯವು ಸತತ ನಾಲ್ಕನೇ ದಿನವೂ ಕದನ ವಿರಾಮ ಉಲ್ಲಂಘಿಸಿ ಭಾರತೀಯ ಸೈನಿಕರ ನೆಲೆಗಳ ಮೇಲೆ ಗುಂಡಿನ ದಾಳಿ ನಡೆಸಿತು. ಇದಕ್ಕೆ ಭಾರತೀಯ ಸೈನ್ಯವೂ ಪ್ರತಿಕ್ರಿಯೆ ನೀಡಿತು.

೫ ಲಕ್ಷ ಪಾಕಿಸ್ತಾನಿ ಹುಡುಗಿಯರು ಭಾರತದಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿದ್ದಾರೆ! – ಭಾಜಪ ಸಂಸದ ನಿಶಿಕಾಂತ್ ದುಬೆ ಅವರ ದಾವೆ

ಭಾಜಪ ಸಂಸದ ನಿಶಿಕಾಂತ್ ದುಬೆ ಅವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿ, ಪಾಕಿಸ್ತಾನಿ ಭಯೋತ್ಪಾದನೆಯ ಹೊಸ ಮುಖ ಈಗ ಬಹಿರಂಗವಾಗಿದೆ. ಮದುವೆಯ ನಂತರ ೫ ಲಕ್ಷಕ್ಕೂ ಅಧಿಕ ಪಾಕಿಸ್ತಾನಿ ಹುಡುಗಿಯರು ಭಾರತದಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಇಲ್ಲಿಯವರೆಗೆ ಭಾರತೀಯ ಪೌರತ್ವ ಸಿಕ್ಕಿಲ್ಲ. ಒಳನುಗ್ಗಿರುವ ಈ ಶತ್ರುಗಳೊಂದಿಗೆ ಹೇಗೆ ಹೋರಾಡುವುದು?, ಎಂದು ಅವರು ಪ್ರಶ್ನಿಸಿದ್ದಾರೆ.

ಪಹಲ್ಗಾಮ್‌ನ ದಾಳಿಯ ಬಗ್ಗೆ ಚೀನಾ ಮತ್ತು ರಷ್ಯಾ ತನಿಖೆ ನಡೆಸಬೇಕು! – ಪಾಕಿಸ್ತಾನದ ಬೇಡಿಕೆ

ಪಹಲ್ಗಾಮ್ ದಾಳಿಯ ತನಿಖೆಯಲ್ಲಿ ಚೀನಾ ಮತ್ತು ರಷ್ಯಾ ಸಹ ಸೇರಿಸಿಕೊಳ್ಳಬೇಕು ಎಂದು ಪಾಕಿಸ್ತಾನವು ಒತ್ತಾಯಿಸಿದೆ. ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ರಷ್ಯಾದ ಮಾಧ್ಯಮ ‘ರಿಯಾ ನೊವೊಸ್ತಿ’ಗೆ ನೀಡಿದ ಸಂದರ್ಶನದಲ್ಲಿ, ಭಾರತದ ಪ್ರಧಾನಿ ಮೋದಿ ನಿಜ ಹೇಳುತ್ತಿದ್ದಾರೋ ಅಥವಾ ಸುಳ್ಳು ಹೇಳುತ್ತಿದ್ದಾರೋ ಎಂದು ಅಂತರರಾಷ್ಟ್ರೀಯ ತಂಡವು ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ.

ನಾವು ಸುಮ್ಮನೆ ಕೂರುವುದಿಲ್ಲ! – ಅಸಾದುದ್ದೀನ್ ಓವೈಸಿ ಇವರಿಂದ ಪಾಕಿಸ್ತಾನಕ್ಕೆ ಎಚ್ಚರಿಕೆ

ಪಾಕಿಸ್ತಾನವು ತನ್ನನ್ನು ಪರಮಾಣು ಸುಸಜ್ಜಿತ ದೇಶ ಎಂದು ಹೇಳಿಕೊಳ್ಳುತ್ತದೆ. ಅದರ ನಾಯಕರು ಭಾರತಕ್ಕೆ ಪರಮಾಣು ಯುದ್ಧದ ಬೆದರಿಕೆ ಹಾಕುತ್ತಿದ್ದಾರೆ; ಆದರೆ ಅವರು ನೆನಪಿಟ್ಟುಕೊಳ್ಳಬೇಕು, ಅವರು ಯಾವುದೇ ದೇಶದೊಳಗೆ ನುಗ್ಗಿ ಮುಗ್ಧ ಜನರನ್ನು ಕೊಂದರೆ, ಯಾರೂ ಸುಮ್ಮನೆ ಕೂರುವುದಿಲ್ಲ. ನಿಮಗೆ ಉತ್ತರ ಸಿಗುತ್ತದೆ ಎಂದು ಸಂಸದ ಅಸಾದುದ್ದೀನ್ ಓವೈಸಿ ಅವರು ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದಾರೆ. ಧರ್ಮವನ್ನು ಕೇಳಿ ಗುಂಡು ಹಾರಿಸುವುದು ಸರಿಯಲ್ಲ, ಇಸ್ಲಾಮಿಕ್ ಸ್ಟೇಟ್ ಏನು ಮಾಡುತ್ತದೆಯೋ ಅದನ್ನು ನೀವು ಮಾಡಿದ್ದೀರಿ ಎಂದು ಅವರು ಟೀಕಿಸಿದ್ದಾರೆ.

ಭಾರತ ಬಿಟ್ಟು ಹೋಗದ ಪಾಕಿಸ್ತಾನಿಗಳಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಬಹುದು

ಭಾರತದ ವೀಸಾ ಪಡೆದು ಭಾರತಕ್ಕೆ ಬಂದಿರುವ ಪಾಕಿಸ್ತಾನಿ ನಾಗರಿಕರಿಗೆ ಏಪ್ರಿಲ್ ೨೯ ರೊಳಗೆ ದೇಶ ತೊರೆಯುವಂತೆ ಆದೇಶಿಸಿದೆ. ಒಂದು ವೇಳೆ ಪಾಕಿಸ್ತಾನಿ ನಾಗರಿಕರು ಈ ದಿನಾಂಕದೊಳಗೆ ಭಾರತ ಬಿಟ್ಟು ಹೋಗದಿದ್ದರೆ, ಅವರಿಗೆ ೩ ವರ್ಷಗಳ ಜೈಲು ಶಿಕ್ಷೆ ಅಥವಾ ೩ ಲಕ್ಷ ರೂಪಾಯಿ ದಂಡ ಅಥವಾ ಎರಡನ್ನೂ ವಿಧಿಸಬಹುದು, ಎಂದು ಹೇಳಿದೆ.